ADVERTISEMENT

ಕಾಶಪ್ಪನವರ ಸಂದರ್ಶನ: ಮಾತು ಕೊಟ್ಟು, ಅನ್ಯಾಯ ಮಾಡುವುದು ಸರಿಯೆ?

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 20:04 IST
Last Updated 22 ಫೆಬ್ರುವರಿ 2021, 20:04 IST
ವಿಜಯಾನಂದ ಕಾಶಪ್ಪನವರ
ವಿಜಯಾನಂದ ಕಾಶಪ್ಪನವರ   

‘ಮೀಸಲಾತಿ ನೀಡಿದರೆ ಸಮುದಾಯದ ಮೇಲಿನ ರಾಜಕೀಯ ಹಿಡಿತ ಕೈತಪ್ಪುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪಂಚಮಸಾಲಿ ಸಮುದಾಯವನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದ್ದಾರೆ.‘ಪ್ರಜಾವಾಣಿ’ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ...

***

* ಪಾದಯಾತ್ರೆಗೆ ಸ್ಪಂದನೆ ಯಾವ ರೀತಿ ಇತ್ತು?

ADVERTISEMENT

2020ರ ಅಕ್ಟೋಬರ್‌ನಲ್ಲೇ ಪಾದಯಾತ್ರೆ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ದೂರವಾಣಿ ಮೂಲಕ ಮಾತುಕತೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಒಂದು ತಿಂಗಳ ಕಾಲಾವಕಾಶ ಕೋರಿದರು. ಆದರೆ, ಯಾವ ನಿರ್ಧಾರವನ್ನೂ ಕೈಗೊಂಡಿರಲಿಲ್ಲ. ಜನವರಿ 14ರಿಂದ ಆರಂಭವಾದ ಪಾದಯಾತ್ರೆಯಲ್ಲಿ 18 ಜಿಲ್ಲೆಗಳಲ್ಲಿ ಹಾದು ಬಂದಿದ್ದೇವೆ. ನಿರೀಕ್ಷೆಗೂ ಮೀರಿದ ಸ್ಪಂದನೆ ದೊರಕಿದೆ. ಅದರ ನಡುವೆಯೇ ಚಿತ್ರದುರ್ಗ, ಹರಿಹರ, ತುಮಕೂರಿನಲ್ಲೇ ಪಾದಯಾತ್ರೆಯನ್ನು ಮೊಟಕುಗೊಳಿಸಲು ಯಡಿಯೂರಪ್ಪ ಪ್ರಯತ್ನಿಸಿದರು. ಅವರ ಪ್ರಯತ್ನ ಫಲ ನೀಡಲಿಲ್ಲ.

* ಪಂಚಮಸಾಲಿಗಳಿಗೆ ಮೀಸಲಾತಿ ನೀಡುವುದಕ್ಕೆ ಅಡ್ಡಿ ಯಾರು?

27 ವರ್ಷಗಳಿಂದಲೂ ಈ ಬೇಡಿಕೆ ಇದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರ ಮುಂದೆಯೂ ಬೇಡಿಕೆ ಇಟ್ಟಿದ್ದೆವು. ಆದರೆ, ಕಾಲಾವಕಾಶ ಕೇಳಿದರು. ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಲಿಂಗಾಯತ ಬಣಜಿಗರಿಗೆ ಮೀಸಲಾತಿ ನೀಡಿದರು. ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಒದಗಿಸಲಿಲ್ಲ. ಈಗ ಮೀಸಲಾತಿ ನೀಡುವುದಕ್ಕೆ ಯಡಿಯೂರಪ್ಪ ಸಿದ್ಧರಿಲ್ಲ.

* ಯಡಿಯೂರಪ್ಪ ಅವರಿಗೆ ಹಟ ಏಕೆ?

ಯಡಿಯೂರಪ್ಪ ಈಗ ಸಂಪೂರ್ಣವಾಗಿ ಪುತ್ರ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ವಿಜಯೇಂದ್ರ ಅವರನ್ನು ಮುಂದಿನ ನಾಯಕ ಎಂದು ಬಿಂಬಿಸುತ್ತಿದ್ದಾರೆ. ವಿಜಯೇಂದ್ರ ಕೂಡ ಅದೇ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ. ಪಂಚಮಸಾಲಿ ಸಮುದಾಯ ಲಿಂಗಾಯತರಲ್ಲೇ ಬಹುಸಂಖ್ಯಾತರು. ಈಗಲೂ ನಮ್ಮ ಸಮುದಾಯದ 26 ಶಾಸಕರಿದ್ದಾರೆ. ಮೀಸಲಾತಿ ನೀಡಿದರೆ ರಾಜಕೀಯ ಹಿಡಿತ ಕೈತಪ್ಪಿ, ಮಗನನ್ನು ಅಧಿಕಾರಕ್ಕೆ ತರುವುದು ಕಷ್ಟವಾಗಬಹುದು ಎಂಬ ಕಾರಣದಿಂದ ಯಡಿಯೂರಪ್ಪ ಈ ರೀತಿ ವರ್ತಿಸುತ್ತಿದ್ದಾರೆ.

* ಮೀಸಲಾತಿ ಹೋರಾಟವನ್ನು ಬಳಸಿಕೊಂಡು ಮುರುಗೇಶ ನಿರಾಣಿ ಮಂತ್ರಿಯಾದರು ಎಂಬ ಮಾತು ಇದೆಯಲ್ಲ?

ಯಾರಿಗೋ ಒಬ್ಬರಿಗೆ ಟಿಕೆಟ್‌ ಕೊಡಿಸಲು ಅಥವಾ ಮಂತ್ರಿ ಸ್ಥಾನ ಕೊಡಿಸಲು ಹೋರಾಟ ನಡೆಯುತ್ತಿಲ್ಲ. ಮಂತ್ರಿ ಆದ ಬಳಿಕ ಹೋರಾಟ ಬೇಡ ಎಂದು ಹೇಳಿರುವುದು ನಿಜ. ಆದರೆ, ಅವರ ಮಾತಿಗೆ ಬೆಲೆ ಸಿಕ್ಕಿಲ್ಲ. ಸಚಿವರಾದ ನಿರಾಣಿ ಮತ್ತು ಸಿ.ಸಿ. ಪಾಟೀಲ ಈಗ ಸಮುದಾಯದ ಜತೆ ಇಲ್ಲ, ಸರ್ಕಾರದ ಜತೆ ಇದ್ದಾರೆ. ಅವರಿಬ್ಬರನ್ನೂ ಬಳಸಿಕೊಂಡ ಯಡಿಯೂರಪ್ಪಹೋರಾಟ ಹತ್ತಿಕ್ಕಲು ಯತ್ನಿಸಿದ್ದೂ ನಿಜ.

* ‘2ಎ’ ಮೀಸಲಾತಿ ನೀಡುವುದಕ್ಕೆ ಏನು ಅಡ್ಡಿಗಳಿವೆ?

ಯಾವ ತೊಡಕುಗಳೂ ಇಲ್ಲ. ದುರುದ್ದೇಶದಿಂದ ಕೇಂದ್ರದ ಕಡೆ ಕೈ ತೋರಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯದೆ, ಹಿಂದೆ ಬಣಜಿಗ ಲಿಂಗಾಯತರು, ಬಲಿಜರಿಗೆ ಮೀಸಲಾತಿ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮ್ಯಾದಾರ ಸಮುದಾಯಕ್ಕೂ ನೀಡಲಾಗಿದೆ. ಈಗಲೂ ರಾಜ್ಯ ಸರ್ಕಾರ ನಿರ್ಧರಿಸಿದರೆ ಮೀಸಲಾತಿ ನೀಡಬಹುದು.

* ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಬಗ್ಗೆ ಏನು ಹೇಳುತ್ತೀರಿ?

ಯತ್ನಾಳ ಅವರು ಸಮುದಾಯದ ಪರ ಹೋರಾಟಕ್ಕೆ ಬಂದಿದ್ದಾರೆ. ಅವರಿಗೆ ಯಾವುದೇ ರೀತಿಯ ಅನ್ಯಾಯ ಆದರೂ ಪಂಚಮಸಾಲಿ ಸಮುದಾಯ ತಕ್ಕ ಪಾಠ ಕಲಿಸುತ್ತದೆ.

* ಕೂಡಲಸಂಗಮ ಮತ್ತು ಹರಿಹರ ಪೀಠಗಳ ನಡುವೆ ಒಡಕು ಮೂಡಿದೆಯೆ?

ಹಾಗೇನೂ ಇಲ್ಲ. ಎರಡೂ ಪೀಠಗಳ ಸ್ಥಾಪನೆಯ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಇತ್ತು. ಈಗ ಅಂಥದ್ದೇನೂ ಇಲ್ಲ. ಹರಿಹರ ಪೀಠದ ವಚನಾನಂದ ಸ್ವಾಮೀಜಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ತಮ್ಮ ಸಂಪರ್ಕಗಳನ್ನು ಬಳಸಿಕೊಂಡು ಸರ್ಕಾರದ ಮನವೊಲಿಕೆ ಮಾಡುವುದಾಗಿ ತಿಳಿಸಿ ಅವರು ಭಾನುವಾರ ತೆರಳಿದ್ದಾರೆ.

* ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಅಂತ್ಯಗೊಂಡಿದೆಯೆ?

ಲಿಂಗಾಯತ ಧರ್ಮ ಬಸವಣ್ಣನವರ ಕಾಲದಿಂದಲೂ ಇದೆ. ನಾವು, ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ್ದೇವೆ. ಅದನ್ನು ತಪ್ಪಾಗಿ ಅರ್ಥೈಸಿದ್ದರಿಂದ ಕಾಂಗ್ರೆಸ್‌ಗೆ ರಾಜಕೀಯವಾಗಿ ನಷ್ಟವಾಯಿತು. ಆದರೆ, ಈ ಹೋರಾಟ ನಿಲ್ಲುವುದಿಲ್ಲ.

* ಅಂತಿಮವಾಗಿ ಸರ್ಕಾರಕ್ಕೆ ಏನು ಹೇಳುತ್ತೀರಿ?

ಮಾರ್ಚ್‌ 4ರೊಳಗೆ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಮೀಸಲಾತಿ ನೀಡಲೇಬೇಕು. ತಪ್ಪಿದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದು ನಿಶ್ಚಿತ. ಯಡಿಯೂರಪ್ಪ ಅವರು ಸಮುದಾಯಕ್ಕೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಪಂಚಮಸಾಲಿಗಳ ಋಣ ತೀರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.