ADVERTISEMENT

ಅಧಿಕಾರ ಮೊಟಕು ಸಂವಿಧಾನ ವಿರೋಧಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 20:30 IST
Last Updated 13 ಡಿಸೆಂಬರ್ 2019, 20:30 IST
ಸಿ.ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ, ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತು
ಸಿ.ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ, ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತು   

ಆಶ್ರಯ ಮನೆಗಳ ಹಂಚಿಕೆಯಲ್ಲಿ ಗ್ರಾಮಸಭೆಗೆ ನೀಡಿದ್ದ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿರುವ ಸರ್ಕಾರದ ನಡೆ ಸರಿಯೇ?

ಅಧಿಕಾರವು ಗ್ರಾಮ ಮಟ್ಟಕ್ಕೆ ಹಂಚಿಕೆಯಾಗಬೇಕು ಎಂಬ ಉದ್ದೇಶದಿಂದ ಸಂವಿಧಾನದ 73ನೇ ತಿದ್ದುಪಡಿ ಆಧರಿಸಿ, 1993ರಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ತರಲಾಗಿದೆ. ಕೆ.ಆರ್. ರಮೇಶ್‌ ಕುಮಾರ್ ಸಮಿತಿ ವರದಿ ಆಧರಿಸಿ ಈ ಕಾಯ್ದೆಗೆ 2015ರಲ್ಲಿ ತಿದ್ದಪಡಿ ತರಲಾಗಿದೆ. ಇದರನ್ವಯ, ಗ್ರಾಮಕ್ಕೆ ಸಂಬಂಧಿಸಿದ ಯೋಜನೆ ರೂಪಿಸುವುದು, ಫಲಾನುಭವಿಗಳ ಪಟ್ಟಿ ತಯಾರಿಸುವುದು ಗ್ರಾಮಸಭೆಗಳ ಹೊಣೆ. ಜನರೂ ಭಾಗವಹಿಸಿ ಊರಿಗೆ ಏನು ಬೇಕು ಎಂಬುದನ್ನು ನಿರ್ಧರಿಸು ತ್ತಾರೆ. ಶಾಸಕರ ಅಧ್ಯಕ್ಷತೆಯ ಜಾಗೃತಿ ಸಮಿತಿಗೆ ಫಲಾನುಭವಿಗಳ ಪಟ್ಟಿ ಪರಿಶೀಲಿಸುವ ಅವಕಾಶವಿದೆ, ಬದಲಿಸುವ ಅಧಿಕಾರವಿಲ್ಲ. ‘ಗ್ರಾಮಸಭೆಗಳ ತೀರ್ಮಾನವೇ ಅಂತಿಮವಲ್ಲ’ ಎಂಬವಸತಿ ಸಚಿವರ ಹೇಳಿಕೆ ಈ ಕಾಯ್ದೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ.

ಅಕ್ರಮ ತಡೆಗೆ ಬೇರೆ ಮಾರ್ಗಗಳಿಲ್ಲವೇ?

ADVERTISEMENT

ಅಕ್ರಮಗಳು ನಡೆದಿದ್ದರೆ ಕಡಿವಾಣ ಹಾಕುವುದು ಹೇಗೆ, ಭಾಗಿಯಾದವರ ವಿರುದ್ಧ ಕ್ರಮಗಳೇನು ಎಂಬುದು ಕಾಯ್ದೆಯಲ್ಲೇ ಇದೆ. ಅದನ್ನು ಬಳಸಿದರೆ ಅಕ್ರಮ ತಡೆಯಬಹುದು. ಆದರೆ, ಶಾಸಕರಿಗೆ ಫಲಾನುಭವಿಗಳ ಆಯ್ಕೆಯ ಅಧಿಕಾರ ನೀಡುವ ಹುನ್ನಾರ ಇದ್ದಂತಿದೆ.

ಫಲಾನುಭವಿಗಳ ಆಯ್ಕೆಯಲ್ಲಿ ಸದ್ಯ ಶಾಸಕರ ಹಸ್ತಕ್ಷೇಪ ಇಲ್ಲವೇ?

ಸದ್ಯ ಶಾಸಕರು ನೇರವಾಗಿ ಹಸ್ತಕ್ಷೇಪ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅವರ ಬೆಂಬಲಿಗರು, ಅವರ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರ ಮೂಲಕ ಪರೋಕ್ಷವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಗ್ರಾಮಸಭೆಗಳ ಬಗ್ಗೆ ಗೌರವ ಇಟ್ಟುಕೊಂಡಿರುವ ಶಾಸಕರೂ ಇದ್ದಾರೆ.

ಅಧಿಕಾರ ಮೊಟಕುಗೊಳಿಸಿದರೆ ಮುಂದೇನು?

ಗ್ರಾಮ ಪಂಚಾಯಿತಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಈ ಖಾತೆಯನ್ನು ಕೆ.ಎಸ್. ಈಶ್ವರಪ್ಪ ಹೊಂದಿದ್ದಾರೆ. ಅವರಿಗೆ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಗೌರವ ಇದೆ. ಸಂಬಂಧ ಇಲ್ಲದಿದ್ದರೂ ಈ ವಿಷಯ ಪ್ರಸ್ತಾಪಿಸಿರುವ ವಿ.ಸೋಮಣ್ಣ ಅವರ ಮಾತಿಗೆ ಮನ್ನಣೆ ಸಿಗುವುದಿಲ್ಲ ಎಂಬ ನಂಬಿಕೆ ಇದೆ.

–ವಿಜಯಕುಮಾರ್ ಎಸ್.ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.