ಹದಿನೇಳು ಶಾಸಕರನ್ನು ಅನರ್ಹಗೊಳಿಸಿದ್ದು ಮಾತ್ರವಲ್ಲ, ಪ್ರಸಕ್ತ ವಿಧಾನಸಭೆಯ ಅವಧಿ ಮುಗಿಯುವವರೆಗೆ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಹಿಂದಿನ ವಿಧಾನಸಭಾಧ್ಯಕ್ಷರ ಆದೇಶವು ರಾಜ್ಯದ ರಾಜಕೀಯದಲ್ಲಿ ದೊಡ್ಡ ಗೊಂದಲವನ್ನೇ ಸೃಷ್ಟಿಸಿ, ಕಾನೂನು ಹೋರಾಟಕ್ಕೆ ಕಾರಣವಾಗಿತ್ತು.
ಶಾಸಕರನ್ನು ಅನರ್ಹಗೊಳಿಸಿದ್ದು ವಿಧಾನಸಭಾಧ್ಯಕ್ಷರ ಅಧಿಕಾರದ ವ್ಯಾಪ್ತಿಗೆ ಬರುತ್ತದೆಂಬುದು ಮೇಲ್ನೋಟಕ್ಕೇ ಕಂಡಿತ್ತು. ಆದರೆ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಅರ್ಹತೆಯನ್ನು ನಿರ್ಧರಿಸುವ ಅಧಿಕಾರವು ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವುದರಿಂದ, ಸಭಾಧ್ಯಕ್ಷರು ಹೇಗೆ ಅಂತಹ ಆದೇಶ ನೀಡಿದರು ಎನ್ನುವ ಅನುಮಾನ ಕಾಡಿತ್ತು.
ಈಗ ಸುಪ್ರೀಂಚಚಚ ಕೋರ್ಟ್ ‘ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ’ ಎನ್ನುವ ಸಭಾಧ್ಯಕ್ಷರ ಆದೇಶವನ್ನು ರದ್ದುಗೊಳಿಸಿ, ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯನ್ನು ಎತ್ತಿ ಹಿಡಿದಿರುವುದು ಸ್ವಾಗತಾರ್ಹ.
ಅಂದಿನ ಸಭಾಧ್ಯಕ್ಷರ ಒಂದು ಆದೇಶವು, ಹದಿನೇಳು ಕ್ಷೇತ್ರಗಳಲ್ಲಿ ಅಕ್ಟೋಬರ್ನಲ್ಲಿ ನಡೆಯಬೇಕಾಗಿದ್ದ ಉಪಚುನಾವಣೆಯನ್ನು ಡಿಸೆಂಬರ್ಗೆ ಮುಂದೂಡುವಂತೆ ಮಾಡಿದ್ದು ವಿಷಾದಕರ. ಅನರ್ಹ ಶಾಸಕರು ಸ್ಪರ್ಧಿಸುವ ಚುನಾವಣೆಯ ಜಯಾಪಜಯವು, ಅಂದು ಸಭಾಧ್ಯಕ್ಷರು ಕೈಗೊಂಡ ಕ್ರಮಕ್ಕೆ ಜನತಾ ನ್ಯಾಯಾಲಯದ ತೀರ್ಪು ಆಗಲಿದೆ ಎಂಬುದು ಇಲ್ಲಿ ಗಮನಾರ್ಹ.
ಸತ್ಯಬೋಧ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.