ಮೈಸೂರು: ಲಾಕ್ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ನೆರವಿಗೆ ಮುಂದಾಗಲು, ತೋಟಗಾರಿಕೆ ಇಲಾಖೆಯು ರಾಜ್ಯದ 30 ಜಿಲ್ಲೆಗಳಲ್ಲಿರುವ ತನ್ನ ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಿದೆ.
ರಾಜ್ಯ ಮಟ್ಟದ ಸಹಾಯವಾಣಿ ಯೊಂದು ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿದೆ. ಬೆಳಿಗ್ಗೆ 8ರಿಂದ ಸಂಜೆ 7ರ ವರೆಗೆ ಸಹಾಯವಾಣಿಯು ಬೆಳೆಗಾರರ ನೆರವಿಗೆ ಲಭ್ಯವಿದೆ.
ಮೇ 13, ಗುರುವಾರದವರೆಗೂ 30 ಜಿಲ್ಲೆಗಳಲ್ಲಿನ ಸಹಾಯವಾಣಿಗೆ 3,548 ಬೆಳೆಗಾರರು ಕರೆ ಮಾಡಿ, ಸಮಸ್ಯೆ ಹೇಳಿಕೊಂಡಿದ್ದಾರೆ. ರಾಜ್ಯ ಸಹಾಯವಾಣಿಗೆ 443 ಕೃಷಿಕರು ಕರೆ ಮಾಡಿದ್ದಾರೆ ಎಂದು ಇದರ ಉಸ್ತುವಾರಿ ಹೊಣೆ ಹೊತ್ತಿರುವ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರೊಬ್ಬರು ತಿಳಿಸಿದರು.
‘ಹಿಂದಿನ ವರ್ಷ ಕೃಷಿ ಇಲಾಖೆಯೊಂದಿಗೆ ಅಗ್ರಿ ವಾರ್ ರೂಂ ಮಾಡಿದ್ದೆವು. ಈ ಬಾರಿ ನಮ್ಮ ಇಲಾಖೆಯಿಂದ ಏಪ್ರಿಲ್ ಅಂತ್ಯದಲ್ಲೇ ಸಹಾಯವಾಣಿ ಆರಂಭಿಸಿದ್ದೇವೆ. ಅಂತರರಾಜ್ಯ ಸಾಗಾಟಕ್ಕೆ ಅಡ್ಡಿ ಇಲ್ಲದಿರುವುದರಿಂದ ಬೆಳೆಗಾರರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಮಸ್ಯೆ ಆಗಿಲ್ಲ. ಆದರೆ ಬೇಡಿಕೆ ಕಡಿಮೆ ಆಗಿರುವುದರಿಂದ ಸೂಕ್ತ ದರ ಸಿಗುತ್ತಿಲ್ಲ’ ಎಂದು ಅವರು ಹೇಳಿದರು.
‘ಇದುವರೆಗೆ ಕರೆ ಮಾಡಿದ ಬಹುತೇಕ ಬೆಳೆಗಾರರು, ಮಾರುಕಟ್ಟೆ ಮತ್ತು ಧಾರಣೆ ಕುಸಿತದ ಸಮಸ್ಯೆಯನ್ನೇ ಪ್ರಸ್ತಾಪಿಸಿದ್ದಾರೆ. ಮಾವು, ಬಾಳೆ, ಟೊಮೆಟೊ, ಕಲ್ಲಂಗಡಿ, ಕರಬೂಜ, ತರಕಾರಿ ಹಾಗೂ ಹೂವು ಬೆಳೆಗಾರರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ’ ಎಂದರು.
‘ಪ್ರತಿಯೊಬ್ಬರ ಮಾಹಿತಿ ದಾಖಲಿಸಿಕೊಂಡಿದ್ದು, ಮಾರಾಟಕ್ಕೆ ಹತ್ತಿರದ ಮಾರುಕಟ್ಟೆಯನ್ನು ಸೂಚಿಸಿದ್ದೇವೆ. ಕೆಲವೊಬ್ಬರಿಗೆ ವ್ಯಾಪಾರಿಗಳ ಸಂಪರ್ಕವನ್ನೂ ಮಾಡಿಕೊಟ್ಟಿದ್ದೇವೆ. ನಮ್ಮ ಹಾಪ್ಕಾಮ್ಸ್ಗಳಿಗೂ ಅಗತ್ಯವಿದ್ದಷ್ಟು ಖರೀದಿಸಿದ್ದೇವೆ. ಎಪಿಎಂಸಿಗೂ ಕಳುಹಿಸಿಕೊಟ್ಟಿದ್ದೇವೆ. ಆಯಾ ಭಾಗದ ಸಂಬಂಧಿಸಿದ ಅಧಿಕಾರಿಗಳಿಗೂ ಮಾಹಿತಿ ನೀಡಿ, ಬೆಳೆಗಾರರಿಗೆ ಸ್ಪಂದಿಸುವಂತೆ ಸೂಚನೆ ನೀಡಿದ್ದೇವೆ. ಇದು ಬಹುತೇಕ ಬೆಳೆಗಾರರಿಗೆ ವರವಾಗಿದೆ. ಆದರೆ ಹೂವಿನ ಬೆಳೆಗಾರರಿಗೆ ಮಾರುಕಟ್ಟೆ ಒದಗಿಸಲಾಗಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
*
ಸಹಾಯವಾಣಿ ಕಣ್ಣೊರೆಸುವ ತಂತ್ರ. ಯಾವೊಬ್ಬ ಅಧಿಕಾರಿಯೂ ಬೆಳೆಗಾರರ ಜಮೀನಿಗೆ ಭೇಟಿ ನೀಡುತ್ತಿಲ್ಲ. ಕೇರಳ ಮಾದರಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು.
-ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.