ADVERTISEMENT

ಒಳನೋಟ: ಗ್ರಾಮೀಣ ಪ್ರದೇಶದ ತ್ಯಾಜ್ಯ ನೇರ ನದಿಗೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 20:27 IST
Last Updated 24 ಏಪ್ರಿಲ್ 2021, 20:27 IST
   

ಕಲಬುರ್ಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಭೀಮಾ ನದಿಯ ದಡದಲ್ಲಿರುವ 40ಕ್ಕೂ ಹೆಚ್ಚು ಗ್ರಾಮಗಳ ಮಲಿನ ನೀರು ನೇರವಾಗಿ ನದಿ ಒಡಲು ಸೇರುತ್ತಿದೆ.

ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾದ ದೇವಲ ಗಾಣಗಾಪುರ ಹಾಗೂ ಘತ್ತರಗಾ ಭಾಗ್ಯವಂತಿ ದರ್ಶನಕ್ಕೆ ಬರುವ ಭಕ್ತರು ಕೂಡ ಪೂಜಾ ಸಾಮಗ್ರಿ, ಹಳೆಯ ಬಟ್ಟೆಗಳನ್ನು ನದಿಗೆ ಎಸೆದು ಮಾಲಿನ್ಯ ಮಾಡುತ್ತಿದ್ದಾರೆ. ಇದರಿಂದಾಗಿ ಸದ್ಯ ನದಿ ನೀರು ಕಲುಷಿತಗೊಂಡಿದ್ದು, ಜಾನುವಾರುಗಳು ಕುಡಿಯುವುದಕ್ಕೂ ಯೋಗ್ಯವಿಲ್ಲದಂತಾಗಿದೆ.

ಸೇಡಂ ಪಟ್ಟಣದ ಚರಂಡಿ ನೀರು ಹಾಗೂ ಸಿಮೆಂಟ್‌ ಕಾರ್ಖಾನೆಯ ತ್ಯಾಜ್ಯವನ್ನು ನೇರವಾಗಿ ಕಮಲಾವತಿ ನದಿಗೆ ಬಿಡಲಾಗುತ್ತಿದೆ. ಈ ನದಿ ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತದೆ. ಬೇಸಿಗೆಯಲ್ಲಿ ನೀರಿಗಿಂತ ತ್ಯಾಜ್ಯವೇ ಹೆಚ್ಚಾಗಿ ಗಬ್ಬೆದ್ದು ನಾರುತ್ತಿದೆ.

ADVERTISEMENT

ಇನ್ನೊಂದೆಡೆ, ಕೊಪ್ಪಳ ನಗರಸಭೆ ಮತ್ತು ಭಾಗ್ಯನಗರ ಪಟ್ಟಣ ಪಂಚಾಯಿತಿಯ ಚರಂಡಿ ನೀರು ನೇರವಾಗಿ ಹಿರೇಹಳ್ಳಕ್ಕೆ ಸೇರುತ್ತಿದ್ದು, ಜಲಮೂಲಗಳು ಕಲುಷಿತಗೊಳ್ಳುತ್ತಿವೆ.

ಎರಡು ವರ್ಷಗಳ ಹಿಂದೆ ಗವಿಮಠದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ 27 ಕಿ.ಮೀ ಉದ್ದದ ಹಳ್ಳವನ್ನು ಸ್ವಚ್ಛಗೊಳಿಸಲಾಗಿತ್ತು. ಈಗ ಮತ್ತೆ ಚರಂಡಿ ನೀರು ಹಳ್ಳ ಸೇರುತ್ತಿದೆ. ನಗರದ ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡಿ ಹಳ್ಳಕ್ಕೆ ಬಿಡುವ ಯೋಜನೆ ಇನ್ನೂ ಪ್ರಸ್ತಾವದಲ್ಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.