ADVERTISEMENT

ಭವಿಷ್ಯ ರೂಪಿಸಬಲ್ಲದು ಸರ್ಕಾರಿ ಕಾಲೇಜು: ಅಭಿಷೇಕ್ ಕುಮಾರ್ ರೈ

ಫಟಾಫಟ್ ಸಂದರ್ಶನ

ಎಂ.ಜಿ.ಬಾಲಕೃಷ್ಣ
Published 6 ಡಿಸೆಂಬರ್ 2019, 19:45 IST
Last Updated 6 ಡಿಸೆಂಬರ್ 2019, 19:45 IST
ಅಭಿಷೇಕ್ ಕುಮಾರ್ ರೈ
ಅಭಿಷೇಕ್ ಕುಮಾರ್ ರೈ   

ಬೆಂಗಳೂರಿನ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ (ಯುವಿಸಿಇ) ವ್ಯಾಸಂಗ ಮಾಡುತ್ತಿರುವ ನಿಮಗೆ, ಆಸ್ಟ್ರೇಲಿಯಾ ಮೂಲದ ಕಂಪನಿಯಲ್ಲಿ ಕೆಲಸ ಸಿಕ್ಕಿದಾಗ ಏನನಿಸಿತು?

ನಾನು ಉತ್ತಮ ಕಂಪನಿಯ ನಿರೀಕ್ಷೆಯಲ್ಲಿದ್ದೆ. ಈಗಾಗಲೇ ಎರಡು ಕಂಪನಿಗಳ ಕ್ಯಾಂಪಸ್‌ ಸಂದರ್ಶನ ಎದುರಿಸಿ ಆಯ್ಕೆಯಾಗಿದ್ದೆ. ಆಸ್ಟ್ರೇಲಿಯಾ ಮೂಲದ ಈ ಕಂಪನಿಯಲ್ಲಿ ಬೆಂಗಳೂರಿನಲ್ಲೇ ಕೆಲಸ ಮಾಡುವ ಅವಕಾಶ ದೊರೆತಿರುವುದರಿಂದ ನಿಜಕ್ಕೂ ಖುಷಿಯಾಗಿದೆ.

ಸರ್ಕಾರಿ ಕಾಲೇಜಿಗೆ ಈ ಕಂಪನಿ ಬಂದಿದ್ದು, ಸಂದರ್ಶನ ಮಾಡಿದ್ದು ವಿಶೇಷವಲ್ಲವೇ?

ADVERTISEMENT

ನಿಜ, ಆದರೆ ದೊಡ್ಡ ಕಂಪನಿಗಳ ಗಮನ ವಿಳಂಬವಾಗಿಯಾದರೂ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಕಡೆ ಹರಿಯಿತಲ್ಲ, ಅದಕ್ಕೆ ನಾವೆಲ್ಲ ಖುಷಿಪಡಬೇಕು. ಸರ್‌ ಎಂ.ವಿಶ್ವೇಶ್ವರಯ್ಯನವರು 102 ವರ್ಷಗಳ ಹಿಂದೆ ಸ್ಥಾಪಿಸಿದ ಈ ಕಾಲೇಜು, ದೇಶದಲ್ಲಿ ಆರಂಭವಾದ 5ನೇ ಕಾಲೇಜು ಎಂಬುದನ್ನು ಗಮನಿಸಬೇಕು.

ಆದರೆ ಯುವಿಸಿಇನಲ್ಲಿ ಮೂಲಸೌಕರ್ಯದ ಕೊರತೆ ಇದೆಯಲ್ಲವೇ?

ನಾನು ವ್ಯಾಸಂಗ ಮಾಡುತ್ತಿರುವಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಂತೂ ಬೋಧಕ ವರ್ಗದ ಅನುಭವ, ಪಾಂಡಿತ್ಯ, ಬೋಧನಾ ವಿಧಾನ
ಗಳೆಲ್ಲವೂ ಅದ್ಭುತ. ಇದುವೇ ನನಗೆ ಮತ್ತು ನನ್ನ ಜತೆಗೆ ಇದೇ ಕಂಪನಿಯಲ್ಲಿ ಕೆಲಸ ದೊರೆತಿರುವ ಸಹಪಾಠಿ ಯಶ್‌ ಎಂ. ಕೊಠಾರಿಗೆ ದಾರಿದೀಪ ಎಂದು ಭಾವಿಸಿದ್ದೇನೆ. ಬೋಧಕರ ಮಾರ್ಗದರ್ಶನ ಸಿಕ್ಕಿದವಿದ್ಯಾರ್ಥಿಗಳೇ ಪುಣ್ಯವಂತರು.

ಉತ್ತಮ ಬೋಧಕರು ಇರುವ ಖಾಸಗಿ ಕಾಲೇಜುಗಳಲ್ಲೂ ಸಾಧಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚೇನೂ ಇಲ್ಲವಲ್ಲ?

ಅದು ನಿಜ. ನಮ್ಮ ಆಸಕ್ತಿ, ಆಳವಾದ ಅಧ್ಯಯನವೇ ನಮ್ಮ ಕೈಹಿಡಿಯುವುದು. ನನಗೆ ಉನ್ನತ ವ್ಯಾಸಂಗ ಮಾಡುವ ತುಡಿತವಿಲ್ಲ. ಆದರೆ ನಾನು ಕೈಗೆತ್ತಿಕೊಂಡ ವಿಷಯದಲ್ಲಿ ಆಳವಾದ ಜ್ಞಾನ ಪಡೆಯಬೇಕೆಂಬ ಬಯಕೆ ಇದೆ. ಅದರಿಂದಲೇ, ಅತ್ಯುತ್ತಮ ಕಂಪನಿ ಸೇರಬೇಕೆಂಬ ನನ್ನ ಕನಸು ಈಡೇರಲು ಸಾಧ್ಯವಾಗಿದೆ. ಕಂಪನಿಗಳು ಬಯಸುವುದು ಸಹ ಇದನ್ನೇ.

ಮೊಬೈಲ್‌, ಸಾಮಾಜಿಕ ಜಾಲತಾಣದ ಮೋಹದಿಂದ ಹೊರಗೆ ಬಾರದ ಯುವಕರ ಬಗ್ಗೆ ಏನು ಹೇಳುತ್ತೀರಿ?

ನಿಮ್ಮ ಭವಿಷ್ಯ ಇರುವುದು ನಿಮ್ಮ ಕೈಯಲ್ಲೇ. ನಿರ್ದಿಷ್ಟ ಅವಧಿಗಷ್ಟೇ ಮೊಬೈಲ್‌, ಸಾಮಾಜಿಕ ಜಾಲತಾಣದ ಸಂಪರ್ಕ ಇರಲಿ, ಓದುವಾಗ ವಿಷಯದತ್ತ ಮಾತ್ರ ಗಮನ ಹರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.