ADVERTISEMENT

25 ವರ್ಷದ ಹಿಂದೆ: ಆರ್ಥಿಕ ಸಾರ್ವಭೌಮತ್ವ: ರಾಜಿ ಇಲ್ಲ– ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 19:30 IST
Last Updated 31 ಮಾರ್ಚ್ 2023, 19:30 IST
   

ಆರ್ಥಿಕ ಸಾರ್ವಭೌಮತ್ವ: ರಾಜಿ ಇಲ್ಲ– ಪ್ರಧಾನಿ

ನವದೆಹಲಿ, ಮಾರ್ಚ್‌ 31– ರಾಷ್ಟ್ರದ ಭದ್ರತೆ ಮತ್ತು ಆರ್ಥಿಕ ಸಾರ್ವಭೌಮತ್ವದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಈ ವಿಷಯದಲ್ಲಿ ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಂದು ಪ್ರಕಟಿಸಿದರು.

ಸಂವಿಧಾನ ಪುನರ್‌ ವಿಮರ್ಶೆ ಮಾಡುವಾಗ ಅದರ ಮೂಲ ಸ್ವರೂಪಕ್ಕೆ ಧಕ್ಕೆ ತರಲಾಗುವುದೆಂಬ ಬಗೆಗೆ ಶಂಕೆ ಬೇಡ ಎಂದ ವಾಜಪೇಯಿ, ರಾಷ್ಟ್ರೀಯ ಕಾರ್ಯಸೂಚಿಯಲ್ಲಿ ನೀಡಿರುವ ಭರವಸೆಯನ್ನು ಪ್ರಾಮಾಣಿಕವಾಗಿ ಜಾರಿಗೆ ತರುವ ಭರವಸೆಯನ್ನು ಪುನರುಚ್ಚರಿಸಿದರು.

ADVERTISEMENT

ರಾಷ್ಟ್ರಪತಿ ಅವರ ಭಾಷಣದ ಮೇಲಿನ ಎರಡು ದಿನಗಳ ಚರ್ಚೆಗೆ ಉತ್ತಿರಿಸಿದ ಅವರು, ತಮಗೆ ಈಗ ಹೊರಿಸಿರುವ ಜವಾಬ್ದಾರಿಯನ್ನು ನಿರ್ವಹಿಸಿದ ಬಳಿಕೆ ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು. ಆಗ ಬಿಜೆಪಿಯ ಸದಸ್ಯರು ‘ಈ ನಿರ್ಧಾರ ಬೇಡ’ ಎಂದು ಕೈ ಎತ್ತಿ ಮನವಿ ಮಾಡಿದರು. ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವನ್ನು ಲೋಕಸಭೆ ಧ್ವನಿಮತದಿಂದ ಅಂಗೀಕರಿಸಿತು.

ತ್ರಿಪುರ: ಆರೋಗ್ಯ ಸಚಿವರ ಕಗ್ಗೊಲೆ

ಅಗರ್ತಲಾ, ಮಾರ್ಚ್‌ 31 (ಯುಎನ್‌ಐ, ಪಿಟಿಐ)– ತ್ರಿಪುರ ರಾಜ್ಯದ ಆರೋಗ್ಯ ಸಚಿವ ಬಿಮಲ್‌ ಸಿನ್ಹಾ ಮತ್ತು ಅವರ ಕಿರಿಯ ಸೋದರ ವಿದ್ಯುತ್‌ ಅವರನ್ನು ಧಲಾಯಿ ಜಿಲ್ಲೆಯ ಕಮಲಾಪುರದಲ್ಲಿ ಇಂದು ಭೂಗತ ಉಗ್ರಗಾಮಿಗಳು ಕಗ್ಗೊಲೆ ಮಾಡಿದ್ದಾರೆ.

ಅಧಿಕೃತ ವರದಿಗಳ ಪ್ರಕಾರ ಬೆಳಿಗ್ಗೆ 11.30ರಲ್ಲಿ ಕಮಲಾಪುರ– ಅಂಬಾಸ ರಸ್ತೆಯ ಅಭಂಗ ಪ್ರದೇಶದಲ್ಲಿ ಬಿಮಲ್‌ ಸಿನ್ಹಾ ಅವರು ತಮ್ಮ ಸಹೋದರನೊಡನೆ ಭದ್ರತಾ ಪಡೆ ಇಲ್ಲದೆ ಉಗ್ರಗಾಮಿಗಳ ಜತೆ ಸಂಧಾನಕ್ಕೆಂದು ಅರಣ್ಯದ ಕಡೆ ನಡೆದು ಹೋಗುತ್ತಿದ್ದಾಗ ಗುಂಡು ಹಾರಿಸಿ ಕೊಲ್ಲಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.