ಕಾಂಗ್ರೆಸ್ ನಾಯಕರ ದೂರವಾಣಿ ಕದ್ದಾಲಿಕೆ ಪ್ರಧಾನಿ ನಿರಾಕರಣೆ
ನವದೆಹಲಿ, ಆ. 4(ಯುಎನ್ಐ)– ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿದೆ ಎಂಬ ಆರೋಪವನ್ನು ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದು ಇಲ್ಲಿ ನಿರಾಕರಿಸಿದರು.
ಈ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯನ್ನು ಕಾಂಗ್ರೆಸ್ ಪಕ್ಷವು ಗಂಭೀರ ವಾಗಿ ಪರಿಗಣಿಸಿದ್ದು, ಹಿರಿಯ ನಾಯಕ ಹಾಗೂ ರಾವ್ ಅವರ ಅತ್ಯಂತ ನಿಕಟವರ್ತಿಯಾಗಿರುವ ಪ್ರಣವ್ ಮುಖರ್ಜಿ, ಮತಂಗ್ ಸಿಂಗ್, ಮಾಜಿ ಸಚಿವರಾದ ಎಸ್.ಬಿ. ಚವ್ಹಾಣ್ ಹಾಗೂ ಸುರೇಶ್ ಕಲ್ಮಾಡಿ ಅವರ ನಿಯೋಗ ಪ್ರಧಾನಿ ಅವರನ್ನು ಭೇಟಿ ಮಾಡಿ ಕದ್ದಾಲಿಕೆ ವಿವಾದ ಕುರಿತು ಚರ್ಚಿಸಿತು.
ಕಪಾಳಮೋಕ್ಷ ಪ್ರಕರಣ: ಪರ, ವಿರೋಧಿ ಪ್ರದರ್ಶನಕ್ಕೆ ಸಜ್ಜು
ಕೋಲಾರ, ಆ. 4– ಜಿಲ್ಲಾ ಉಸ್ತುವಾರಿ ಸಚಿವ ಬೈರೇಗೌಡ ಅವರು ಅಧಿಕಾರಿಗಳಿಗೆ ಕಪಾಳಮೋಕ್ಷ ಮಾಡಿದ ಘಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಉದ್ರಿಕ್ತ ವಾತಾವರಣ ತಲೆದೋರಿದ್ದು, ಅಧಿಕಾರಿಗಳು ಹಾಗೂ ಸಚಿವರ ಮಧ್ಯೆ ನಡೆದ ಸಂಧಾನ ಯಶಸ್ವಿಯಾಗಿಲ್ಲ ಎನ್ನಲಾಗಿದೆ.
ಸಚಿವರ ವರ್ತನೆಯನ್ನು ಖಂಡಿಸಿ ನಾಳೆ ನಗರದಲ್ಲಿ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿರುವ ಪ್ರತಿಭಟನಾ ಪ್ರದರ್ಶನಕ್ಕೆ ಪ್ರತಿಯಾಗಿ ಜನತಾದಳ ಕಾರ್ಯಕರ್ತರೂ ಸಹ ಸಚಿವರ ಕೈ ಬಲಪಡಿಸಲು ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದು ಎರಡೂ ಬಣಗಳೂ ಸಮರಕ್ಕೆ ಸಜ್ಜಾಗಿರುವುದರಿಂದ ನಗರದಲ್ಲಿ ಗಂಭೀರ ವಾತಾವರಣ ಸೃಷ್ಟಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.