ADVERTISEMENT

25 ವರ್ಷ: ಭಾನುವಾರ– 11–8–1996

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 19:30 IST
Last Updated 10 ಆಗಸ್ಟ್ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಆಲಮಟ್ಟಿ: ಆಂಧ್ರ– ಕರ್ನಾಟಕ ಬಿಗಿಪಟ್ಟು; ಸಭೆ ಅಪೂರ್ಣ

ನವದೆಹಲಿ, ಆ 10– ಆಲಮಟ್ಟಿ ಅಣೆಕಟ್ಟು ವಿವಾದದ ಬಗ್ಗೆ ಇಂದು ರಾತ್ರಿ ಪ್ರಧಾನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೃಷ್ಣಾ ಕಣಿವೆಯ ಮೂರು ರಾಜ್ಯಗಳ ಮಹತ್ವದ ಸಭೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಕರ್ನಾಟಕ ಮತ್ತು ಆಂಧ್ರಪ್ರದೇಶ ತಮ್ಮ ವಾದಗಳಿಗೆ ಬಲವಾಗಿ ಕಟ್ಟುಬಿದ್ದ ಕಾರಣ ಸಭೆಯು ಅಪೂರ್ಣಗೊಂಡಿತು.

ಆಲಮಟ್ಟಿ ಅಣೆಕಟ್ಟನ್ನು ಎತ್ತರಿಸುವ ಕಾಮಗಾರಿಯನ್ನು ನಿಲ್ಲಿಸಬೇಕೆಂಬ ಆಂಧ್ರಪ್ರದೇಶದ ವಾದವನ್ನು ಕರ್ನಾಟಕ ಸ್ಪಷ್ಟವಾಗಿ ನಿರಾಕರಿಸಿತು. ಈ ನಿಲುವಿನ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಅಸಮಾಧಾನ ವ್ಯಕ್ತಪಡಿಸಿ, ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಏರ್ಪಡಿಸಿದ್ದ ಭೋಜನ ಕೂಟವನ್ನು ಬಹಿಷ್ಕರಿಸಿ ಅವರ ನಿಯೋಗದ ಜತೆ ಸಭೆ ಮುಗಿಯುತ್ತಿದ್ದಂತೆ ಹೊರಟು ಹೋದರು.

ADVERTISEMENT

ದೇವೇಗೌಡರ ವಿರುದ್ಧ ಭೂಸ್ವಾಧೀನ ಆದೇಶ ರದ್ದು ಆರೋಪ

ಬೆಂಗಳೂರು, ಆ10– ಅಧಿಸೂಚನೆ ಮೂಲಕ ಸರ್ಕಾರಿ ಸ್ವಾಧೀನಕ್ಕೆ ಪಡೆದಿದ್ದ ನೂರಾರು ಎಕರೆ ಬೆಲೆ ಬಾಳುವ ಭೂಮಿಯು ಸಂಬಂಧದಲ್ಲಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಆ ಅಧಿಸೂಚನೆಯನ್ನೇ ರದ್ದುಗೊಳಿಸುವ ತೀರ್ಮಾನವನ್ನು ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದ ಕೊನೆಯ ದಿನದಂದು ಎಚ್.ಡಿ.ದೇವೇಗೌಡರು ಕೈಗೊಂಡರು ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ವಿಧಾನ ಸಭೆಯಲ್ಲಿ ಇಂದು ಆಪಾದಿಸಿದರು.

ಈ ತೀರ್ಮಾನ ಕೈಗೊಂಡ ಈ ಸಭೆ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಅಂದು ಬೆಳಗಿನ ಜಾವ ಮೂರು ಗಂಟೆವರೆಗೂ ನಡೆಯಿತು. ಕೆಂಗೇರಿ, ಪದ್ಮನಾಭನಗರ ಮುಂತಾದ ಕಡೆಗಳ ಬೆಲೆಬಾಳುವ ಭೂಮಿಯ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಲಾಯಿತು. ಯಾವ ಸಾರ್ವಜನಿಕ ಉದ್ದೇಶದಿಂದ ಹೀಗೆ ಮಾಡಲಾಯಿತು, ಇದರಿಂದ ಪ್ರಯೋಜನ ಪಡೆದಿರುವ ಫಲಾನುಭವಿಗಳ ರಾಜಕೀಯ ಮತ್ತಿತರ ಪ್ರಭಾವ ಏನು? ಎತ್ತ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.