ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, ಸೆಪ್ಟೆಂಬರ್‌ 10, 1996

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 19:30 IST
Last Updated 9 ಸೆಪ್ಟೆಂಬರ್ 2021, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

‘ಆಧುನಿಕ ದುಶ್ಯಾಸನ ಪಟೇಲ್‌ ವಧೆಗೆ ನವೆಂಬರ್‌ ಗಡುವು’

ಬೆಂಗಳೂರು, ಸೆ.9– ನಗರದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಸುವುದನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು ಅದೇ ಸಂದರ್ಭದಲ್ಲಿ ಮಹಾ ಭಾರತದ ದ್ರೌಪದಿಯ ಸೀರೆ ಎಳೆದಾಗ, ರಾಮಾಯಣದ ಸೀತೆಯನ್ನು ರಾವಣ ಅಪಹರಿಸಿದಾಗ ಭಾರತೀಯ ಸಂಸ್ಕೃತಿ ಎಲ್ಲಿತ್ತು? ಎಂದು ಪ್ರಶ್ನಿಸಿರುವುದಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಲೋಕಸಭಾ ಸದಸ್ಯ ಅನಂತಕುಮಾರ್‌, ಶಾಸಕರಾದ ಎಸ್‌.ಸುರೇಶ್‌ ಕುಮಾರ್‌ ಮತ್ತು ವಾಟಾಳ್‌ ನಾಗರಾಜ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ದ್ರೌಪದಿಯ ಸೀರೆ ಎಳೆದಾಗ ಕುರುಕ್ಷೇತ್ರ ಯುದ್ಧವಾಯಿತು. ಸೀತೆಯನ್ನು ಅಪಹರಿಸಿದಾಗ ರಾವಣನ ಸಂಹಾರವಾಗಿ ಲಂಕೆ ಸುಟ್ಟು ಹೋಯಿತು. ಅದೇ ರೀತಿ ಈಗ ಮಹಿಳೆಯರನ್ನು ನಗ್ನರಾಗಿಸಿ ವಿದೇಶಗಳಿಂದ ಉದ್ಯಮಿಗಳು ಬರುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದರೆ ಘೋಷಿಸಿರುವ ‘1996ನೇ ಇಸವಿ ನವೆಂಬರ್‌ ದುಶ್ಯಾಸನರಿಗೂ ಅದೋಗತಿ ಕಾದಿದೆ’ ಎಂದು ಬಿಜೆಪಿ ವಕ್ತಾರ ಹಾಗೂ ಶಾಸಕ ಸುರೇಶ್‌ ಕುಮಾರ್‌ ಮುಖ್ಯಮಂತ್ರಿ ಪಟೇಲ್‌ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ ಎಚ್ಚರಿಸಿದ್ದಾರೆ.

ADVERTISEMENT

ಗ್ರಾಮಮಟ್ಟದಲ್ಲಿ ಶೀಘ್ರ ನ್ಯಾಯ ಪಂಚಾಯ್ತಿ ರಚನೆ

ಬೆಂಗಳೂರು, ಸೆ.9– ಸಣ್ಣಪುಟ್ಟ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ಅತಿ ಶೀಘ್ರದಲ್ಲಿಯೇ ಗ್ರಾಮ ಮಟ್ಟದಲ್ಲಿ ನ್ಯಾಯ ಪಂಚಾಯಿತಿಗಳನ್ನು ರಚಿಸಲು ಸರ್ಕಾರ ಉದ್ದೇಶಿಸಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಂ.ಪಿ.ಪ್ರಕಾಶ್‌ ಇಂದು ಇಲ್ಲಿ ಪ್ರಕಟಿಸಿದರು.

‘ಉದ್ದೇಶಿತ ಈ ನ್ಯಾಯ ಪಂಚಾಯಿತಿಗಳಿಗೆ ಶಿಕ್ಷೆ ವಿಧಿಸುವ ಅಧಿಕಾರ ನೀಢುವ ಪ್ರಸ್ತಾವ ಮೊದಲು ಪರಿಶೀಲನೆಯಲ್ಲಿ ಇತ್ತು. ಆದರೆ, ಅಂತಿಮವಾಗಿ ನ್ಯಾಯ ಪಂಚಾಯಿತಿಗಳಿಗೆ ಶಿಕ್ಷೆ ನೀಡುವ ಅಧಿಕಾರದ ಬದಲು ದಂಡ ವಿಧಿಸುವ ಅಧಿಕಾರ ನೀಡಲು ಸರ್ಕಾರ ತೀರ್ಮಾನಿಸಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.