ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ 16.8.1996

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 19:45 IST
Last Updated 15 ಆಗಸ್ಟ್ 2021, 19:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರಕ್ಷಣೆ, ಬಡವರ– ರೈತರ ಕಲ್ಯಾಣಕ್ಕೆ ಆದ್ಯತೆ– ಪ್ರಧಾನಿ

ನವದೆಹಲಿ, ಆ. 15– ಯಾವುದೇ ಕಠಿಣ ಸಂದರ್ಭ ಬಂದರೂ ರಾಷ್ಟ್ರದ ರಕ್ಷಣೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ದೇಶದ ಭದ್ರತೆಗೆ ಆದ್ಯತೆ. ಆರ್ಥಿಕ ರಂಗದಲ್ಲಿನ ಸಾಧನೆಗೆ ಸ್ವಾವಲಂಬನೆ, ಆಧುನೀಕರಣಕ್ಕೆ ಒತ್ತು, ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಅವಶ್ಯಕತೆಗಳ ಪೂರೈಕೆ, ನದಿ ನೀರು ಹಂಚಿಕೆಗಾಗಿ ಹೊಸದಾಗಿ ರಾಷ್ಟ್ರೀಯ ಜಲನೀತಿ ರಚನೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಬಡಕಟ್ಟು ಮತ್ತು ಆರ್ಥಿಕವಾಗಿ ಹಿಂದುಳಿದ ರೈತರಿಗಾಗಿ ಗಂಗಾ ಕಲ್ಯಾಣ ಯೋಜನೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಉತ್ತರ ಖಂಡಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡಿಕೆಗಾಗಿ ವಿಧೇಯ.

ಐವತ್ತನೇ ಸ್ವಾತಂತ್ರ್ಯೋತ್ಸವ ಆಚರಣೆಯ ಅಂಗವಾಗಿ ಐತಿಹಾಸಿಕ ಕೆಂಪು ಕೋಟೆಯ ಮೇಲೆ ಪ್ರಧಾನ ಮಂತ್ರಿ ಎಚ್‌.ಡಿ. ದೇವೇಗೌಡ ಅವರು ಇಂದು ಮುಂಜಾನೆ ಹಿಂದಿಯಲ್ಲಿ ತಮ್ಮ ಚೊಚ್ಚಲ ಭಾಷಣದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಈ ಮೇಲಿನ ಭರವಸೆ ನೀಡಿದರು.

ADVERTISEMENT

ಉಳಿದ ಮಾತು ಉಲಿದ ಹಿಂದಿ

ನವದೆಹಲಿ, ಆ. 15 (ಯುಎನ್‌ಐ, ಪಿಟಿಐ)– ಐತಿಹಾಸಿಕ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ಮಾಡಿದ ಪ್ರಥಮ ಕನ್ನಡಿಗ, ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಇಂದು ಹಿಂದಿಯಲ್ಲಿ ಭಾಷಣ ಮಾಡಿ ತಮ್ಮ ಮಾತನ್ನು ಉಳಿಸಿಕೊಂಡರು.

ಕೇವಲ ಎರಡೂವರೆ ತಿಂಗಳ ಹಿಂದೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ತಾವು ಆಗಸ್ಟ್ 15ರಂದು ರಾಷ್ಟ್ರವನ್ನು ಉದ್ದೇಶಿಸಿ ಹಿಂದಿಯಲ್ಲಿಯೇ ಭಾಷಣ ಮಾಡುವುದಾಗಿ ಹೇಳಿದ್ದರು.

ಹಿಂದಿನ ಪ್ರಧಾನಿಗಳಂತೆ ದೇವೇಗೌಡರು ಆಶು ಭಾಷಣ ಮಾಡದಿದ್ದರೂ ಸಿದ್ಧಪಡಿಸಿದ ಭಾಷಣದ ಪ್ರತಿಯನ್ನು ಸುಮಾರು 40 ನಿಮಿಷಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ಓದಿದರು. ಭಾಷಣದುದ್ದಕ್ಕೂ ಅವರು ಸಂಸ್ಕೃತ ಶಬ್ದಗಳನ್ನು ಪ್ರಯೋಗಿಸಿ ಅಚ್ಚರಿಗೊಳಿಸಿದರು.

ಆಂಧ್ರ ಹೈಕೋರ್ಟ್‌ಗೆ ಇಂದು ರಾಜ್ಯ ವಕೀಲರ ಹಾಜರಿ

ಬೆಂಗಳೂರು, ಆ. 15– ಆಲಮಟ್ಟಿ ಅಣೆಕಟ್ಟೆ ಎತ್ತರಿಸುತ್ತಿರುವುದರ ಸಂಬಂಧದಲ್ಲಿ ಪ್ರಧಾನಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರನ್ನೂ ಪ್ರತಿವಾದಿಗಳನ್ನಾಗಿ ಮಾಡಿ ಆಂಧ್ರ ಪ್ರದೇಶದ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯೊಂದು ನಾಳೆ ವಿಚಾರಣೆಗೆ ಬರಲಿರುವುದರಿಂದ ಅಡ್ವೊಕೇಟ್ ಜನರಲ್ ವಿಜಯಶಂಕರ್ ಅವರ ನೇತೃತ್ವದ ವಕೀಲರ ತಂಡ ಇಂದು ಹೈದರಾಬಾದ್‌ಗೆ ತೆರಳಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.