‘ಹಿಂದಿ ದಿವಸ್’ಗೆ ಸಂಬಂಧಿಸಿದಂತೆ ಒಂದು ಪತ್ರ ಪ್ರಕಟವಾಗಿತ್ತು (ವಾ.ವಾ., ಸೆ. 10) ಸಂಸ್ಕೃತಕ್ಕೆ ಅನ್ಯ ಭಾಷೆ ಪ್ರತಿಸ್ಪರ್ಧಿಯಲ್ಲ ಎಂದು ಒಬ್ಬರು ಬರೆದಿದ್ದರು (ಪ್ರ.ವಾ., ಆ. 28). ಇವೆರಡರ ನಡುವೆ ‘ಸಂಸ್ಕೃತ ಪ್ರಸಾರ ಗೊಂಡಲ್ಲಿ ಸಂಸ್ಕೃತಿ ಸುಭದ್ರ’ ಎಂದು ರಾಜ್ಯಪಾಲರ ಮಾತು (ಪ್ರ.ವಾ., ಸೆ. 9). ಹಿಂದಿಯನ್ನು ರಾಜಭಾಷೆಗಿಂತ ಲೋಕಭಾಷೆಯಾಗಿ ಬೆಳೆಸುವ ಅಗತ್ಯವಿದೆ. ನಲವತ್ತು ವರ್ಷಗಳ ಹಿಂದಿನ ಕಾಲಕ್ಕೆ ಹೋಲಿಸಿದಾಗ ಚಲಾವಣೆಯ ದೃಷ್ಟಿಯಿಂದ ಅದು ಹೆಚ್ಚಿದೆ, ಬಾಲಿವುಡ್ ಅಥವಾ ಇತರ ಬೆರಕೆ ರೂಪ ಕಡಿಮೆ ಮಾಡಿ ಮೂಲ ಶುದ್ಧ ರೂಪದ ಹತ್ತಿರ ಹೋಗಬೇಕು.
ಸಂಸ್ಕೃತವನ್ನು ಸಂಸ್ಕೃತಿಯೊಂದಿಗೆ ಸಮೀಕರಿಸುವುದು ಸರಿಯಲ್ಲ (ನಾನು ಐದು ವರ್ಷ ಅದನ್ನು ಓದಿದ್ದೇನೆ). ಆರ್ಯ, ಅನಾರ್ಯ, ದ್ರಾವಿಡ ಚರ್ಚೆ ನೆನಪಾಗುತ್ತದೆ. ಕನ್ನಡ ನುಡಿ ಸಂಸ್ಕೃತದಿಂದ ಬೆಳೆದು ಬಂದಿಲ್ಲ ಎಂದು ಡಿ.ಎನ್.ಶಂಕರ ಬಟ್ ಅವರು ಒಂದು ಅಧ್ಯಾಯವನ್ನೇ ಬರೆದಿದ್ದಾರೆ. ಒಂದು ಘಟ್ಟದಲ್ಲಿ ಕನ್ನಡ ಭಿನ್ನ ವ್ಯಾಕರಣವನ್ನೂ ಅಳವಡಿಸಿಕೊಂಡಿದೆ. ‘ಸರ್ವರ ಕಲ್ಯಾಣ’ದ ಆಶಯ ಸಂಸ್ಕೃತಕ್ಕೆ ಸೀಮಿತವಾಗಿಲ್ಲ. ಸಂಸ್ಕೃತ ವಿಶ್ವವಿದ್ಯಾಲಯ ಆ ಭಾಷೆಯನ್ನು ಸರ್ವಸ್ಪರ್ಶಿ/ವ್ಯಾಪಿ ಮಾಡಲು ಪ್ರಯತ್ನಿಸಬೇಕೆ? ಒಂದು ಪ್ರಾಚೀನ ಭಾಷೆಯಾಗಿ ಅದರ ಮಹತ್ವ, ಸೌಂದರ್ಯಗಳನ್ನು (ಉದಾಹರಣೆಗೆ- ನಾಟಕಗಳು ಗ್ರೀಕ್ ಎಪಿಕ್ಗಳಂತೆ
ಶ್ರೇಷ್ಠ) ಪ್ರಸಾರ ಮಾಡಿದರೆ ಸಾಲದೇ? ಅದರ ಕಂಪ್ಯೂಟರ್ ಅಪ್ರೋಪ್ರಿಯೇಟ್ ಗುಣದ ಬಗೆಗೂ ಸಂಶೋಧನೆ ನಡೆಸಲಿ. ಆದರೆ ಸಾಂಸ್ಕೃತಿಕ ಪುನರುಜ್ಜೀವನ ದೃಷ್ಟಿಯಿಂದ ಹರಡುವುದು ಸೂಕ್ತವಲ್ಲ. ಹೊರರಾಜ್ಯದಿಂದ ಬರುವ ಸಾಂವಿಧಾನಿಕ ಅಧಿಕಾರಿಗಳಿಗೆ ಇದನ್ನು ತಿಳಿಹೇಳುವ ತಾಕತ್ತನ್ನು ನಮ್ಮ ರಾಜ್ಯದ ನಾಯಕರು ತೋರಬೇಕಾಗಿದೆ.
- ಎಚ್.ಎಸ್.ಮಂಜುನಾಥ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.