ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರು ಹಿಂದೊಮ್ಮೆ ತಮ್ಮ ಜಮೀನಿನ ಕಾಫಿಗೆ ಕಂದಾಯ ನಿಗದಿ ಮಾಡುವಂತೆ ಮೂಡಿಗೆರೆ ತಹಶೀಲ್ದಾರ್ ಅವರಿಗೆ ಅರ್ಜಿ ನೀಡಿದಾಗ, ಅರ್ಜಿಗೆ ಪೂರಕವಾಗಿ ಮ್ಯುಟೇಶನ್, ಪಹಣಿ, ಆಕಾರ್ ಬಂದ್ ಸಲ್ಲಿಸುವಂತೆ ಅವರು ತೇಜಸ್ವಿಯವರಿಗೆ ಹಿಂಬರಹ ನೀಡಿದ್ದರು. ಆಗ ತೇಜಸ್ವಿಯವರು ‘ತಹಶೀಲ್ದಾರ್ ಅವರೆ, ಮ್ಯುಟೇಶನ್, ಪಹಣಿ, ಆಕಾರ್ ಬಂದ್ ಎಲ್ಲ ಎಲ್ಲಿ ಸಿಗುತ್ತವೆ’ ಎಂದು ಪ್ರಶ್ನಿಸಿದರು. ತಹಶೀಲ್ದಾರ್ ಅವರು ‘ನಮ್ಮ ಕಚೇರಿಯಲ್ಲಿಯೇ’ ಎಂದರು. ‘ಎಲ್ಲ ದಾಖಲೆಗಳೂ ನಿಮ್ಮ ಕಚೇರಿಯಲ್ಲಿಯೇ ಸಿಗುವುದರಿಂದ ನಾವೇಕೆ ದಾಖಲೆಗಳನ್ನು ಲಗತ್ತಿಸಬೇಕು? ನೀವೇ ಅವುಗಳನ್ನು ಪಡೆದು ಕೆಲಸ ಮಾಡಿ ಹಾಗೂ ಈ ವಿಚಾರವಾಗಿ ಅನಗತ್ಯವಾಗಿ ಪತ್ರ ವ್ಯವಹಾರ ಮಾಡಬೇಡಿ’ ಎಂದು ಎಚ್ಚರಿಸಿದ್ದರು.
ತೇಜಸ್ವಿಯವರ ಅಂದಿನ ಆಲೋಚನೆ ಸರಿಯಾಗಿಯೇ ಇದೆ. ಇಂದು ಒಂದು ಸಣ್ಣ ಕೆಲಸಕ್ಕೂ ಅರ್ಜಿಯ ಜೊತೆ ನಾನಾ ದಾಖಲೆಗಳನ್ನು ಲಗತ್ತಿಸಬೇಕಾಗಿದೆ, ಅಗತ್ಯವಿಲ್ಲದೆಯೂ! ಅವರು ಕೋರುವ ದಾಖಲೆಗಳು ತಾಲ್ಲೂಕು ಕಚೇರಿಯ ಅಭಿಲೇಖಾಲಯ, ಭೂಮಿ ಕೇಂದ್ರಗಳಲ್ಲಿಯೇ ಲಭ್ಯವಿರುವುದರಿಂದ, ಅರ್ಜಿಗೆ ಪೂರಕವಾಗಿರುವ ಎಲ್ಲ ದಾಖಲೆಗಳ ನಕಲುಗಳನ್ನು ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಅಲ್ಲಿಂದ ಪಡೆದು ಕೆಲಸ ಮಾಡಬಹುದಲ್ಲವೇ? ರೈತರು ಯಾವುದಾದರೊಂದು ಕೆಲಸಕ್ಕೆ ಅರ್ಜಿ ಸಲ್ಲಿಸಲು ದಾಖಲೆಗಳ ನಕಲು ಪಡೆಯುವುದೇ ದೊಡ್ಡ ಕೆಲಸವಾಗಿದೆ. ಕಂದಾಯ ಇಲಾಖೆ ಇತ್ತ ಗಮನಹರಿಸಿ, ತೇಜಸ್ವಿಯವರ ಆಲೋಚನೆಯನ್ನು ಅನುಷ್ಠಾನ ಮಾಡಿದರೆ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ.
ಲಕ್ಷ್ಮೀಕಾಂತರಾಜು ಎಂ.ಜಿ.,ಮಠಗ್ರಾಮ, ಗುಬ್ಬಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.