ADVERTISEMENT

ವಾಚಕರ ವಾಣಿ: ಪ್ರಸಕ್ತ ವ್ಯವಸ್ಥೆ ಹೊಸ ಆಶಯ ಒಳಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 21:45 IST
Last Updated 26 ಆಗಸ್ಟ್ 2021, 21:45 IST

‘ಕೃಷಿ ಆದಾಯ ಹೆಚ್ಚಳಕ್ಕೆ ರೈತರ ಸಮಿತಿ’ ಸುದ್ದಿ (ಪ್ರ.ವಾ., ಆ. 26) ಓದಿ ಆಶ್ಚರ್ಯವಾಯಿತು. ಮುಖ್ಯಮಂತ್ರಿಯವರು ಈ ಕಾರ್ಯಕ್ಕೆ ಪೂರಕವಾಗಿ ಇನ್ನೊಂದು ನಿರ್ದೇಶನಾಲಯ ಸ್ಥಾಪಿಸುವ ಬಗೆಗೂ ಹೇಳಿದ್ದಾರೆ. ಕೇಂದ್ರ ಸರ್ಕಾರದ ಮೂಲ ಘೋಷಣೆಯ ಪ್ರಕಾರ, ಮುಂದಿನ ವರ್ಷದ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳ್ಳಬೇಕು, ಅದು ಅಸಂಭವ. ಹೊಸ ಸಮಿತಿ, ಸಂರಚನೆ ಆರಂಭಿಸುವ ಮೊದಲು ಈಗಿರುವ ವ್ಯವಸ್ಥೆಯನ್ನು ಹೇಗೆ ಮರುಹೊಂದಿಸಬೇಕು ಎಂದು ಪರಿಶೀಲಿಸಬೇಕು. ಪ್ರಸ್ತುತ ಕಮಿಷನರೇಟ್, ನಿರ್ದೇಶನಾಲಯ, ವಿಶ್ವವಿದ್ಯಾಲಯ ಇವುಗಳ ಸಿಬ್ಬಂದಿ, ಸೇವೆಗಳು ಹೊಸ ಆಶಯಗಳನ್ನೂ ಒಳಗೊಳ್ಳಬಹುದಲ್ಲವೆ? ಅವುಗಳ ವೆಬ್‌ಸೈಟ್ ನೋಡಿದರೆ ನೇಮಕಾತಿ, ಸಬ್ಸಿಡಿ ಇಂತಹವೇ ಹೆಚ್ಚು ಕಾಣುತ್ತವೆ.

ಕೃಷಿ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳು, ತಜ್ಞರು ಕೊಟ್ಟಿರುವ ಅನೇಕ ವರದಿಗಳನ್ನು ಹೊಸ ಮಾಹಿತಿಯೊಂದಿಗೆ ಬಳಸಿಕೊಳ್ಳಬಹುದಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿರುವ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾಗಿರುವ ನಿವೃತ್ತ ಐಎಎಸ್ ಅಧಿಕಾರಿಯು ರಾಜ್ಯಕ್ಕೆ ಅನ್ವಯವಾಗುವ ಹೊಸ ಅಂಶಗಳನ್ನೇನಾದರೂ ಹೇಳಿದ್ದರೆ ಮಂತ್ರಿ ಮಟ್ಟದಲ್ಲಿ ಅದನ್ನು ಪರಿಗಣಿಸಬಹುದು. ಕೃಷಿ ಉತ್ಪಾದನೆ ಇದ್ದರೇ ಆದಾಯ. ಈಗ ಮಳೆಯಲ್ಲಿ ಆಗುತ್ತಿರುವ ಏರುಪೇರು ಅವೆರಡನ್ನೂ ಕುಂಠಿತಗೊಳಿಸಬಹುದು. ಬಂದ ಉತ್ಪನ್ನಕ್ಕೆ ಬೇಗ ತಕ್ಕ ಮಾರುಕಟ್ಟೆ ವ್ಯವಸ್ಥೆ ಮಾಡಲು ಈ ಹೊಸ ಘೋಷಣೆಗಳು ಹೇಗೆ ಸಹಾಯಕ? ‘ಥ್ರೀ ಟ್ರಿಲಿಯನ್ ಎಕಾನಮಿ’ಯಂತೆ ಆಗಬಹುದಷ್ಟೆ.

ಎಚ್.ಎಸ್.ಮಂಜುನಾಥ,ಗೌರಿಬಿದನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.