ರಾಜ್ಯಪಾಲರ ಸ್ಥಾನ ಘನತೆವೆತ್ತ ಹುದ್ದೆಯಾಗಿದ್ದು, ಇವರು ರಾಜ್ಯ ಕಾರ್ಯಾಂಗದ ಮುಖ್ಯಸ್ಥರು ಹಾಗೂ ರಾಜ್ಯ ಶಾಸಕಾಂಗದ ಅವಿಭಾಜ್ಯ ಅಂಗವಾಗಿರುತ್ತಾರೆ. ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಸ್ವಾಯತ್ತತೆ ನೀಡಿರುವಾಗ ಒಟ್ಟಾರೆ ರಾಜ್ಯ ಸರ್ಕಾರದ ಸಮಗ್ರ ಆಡಳಿತಾತ್ಮಕ ಚಟುವಟಿಕೆಗಳಿಗೆ ರಾಜ್ಯಪಾಲರು ಮೇಲ್ವಿಚಾರಕರಾಗಿರುತ್ತಾರೆ. ಇಷ್ಟೆಲ್ಲಾ ಜವಾಬ್ದಾರಿಗಳನ್ನು ಹೊಂದಿರುವ ಇವರು ಯಾವುದೇ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ರಾಗದ್ವೇಷಗಳಿಂದ ಹೊರತಾದ ವ್ಯಕ್ತಿತ್ವ ಹೊಂದಿರುವ ರಾಜಕೀಯ ನಿಪುಣರಾಗಿ ಇರಬೇಕಾಗುತ್ತದೆ.
ಆದರೆ ಸಾಮಾನ್ಯವಾಗಿ ರಾಜ್ಯಪಾಲರ ನೇಮಕಾತಿಗಳಲ್ಲಿ ಸಾಂವಿಧಾನಿಕ ಹುದ್ದೆಯ ಮೂಲ ಆಶಯಗಳನ್ನು ಬದಿಗೊತ್ತಿ, ಕೇವಲ ಏಕಪಕ್ಷೀಯ ನೀತಿ ಅನುಸರಿಸುವುದು ಗೋಚರಿಸುತ್ತದೆ. ಪ್ರಸ್ತುತ ದೇಶದ ಬಹುತೇಕ ರಾಜ್ಯಗಳಲ್ಲಿರುವ ರಾಜ್ಯಪಾಲರುಗಳು ಒಂದೇ ರಾಜಕೀಯ ಪಕ್ಷದ ಹಿರಿಯ ನಾಯಕರಾಗಿರುವುದು ಇದಕ್ಕೊಂದು ಉದಾಹರಣೆ. ಈ ತರಹದ ನೇಮಕಾತಿಗಳು ಒಕ್ಕೂಟ ವ್ಯವಸ್ಥೆಯ ವೈಫಲ್ಯಕ್ಕೆ ದಾರಿ ಮಾಡಿಕೊಡುತ್ತವೆ. ಇಂತಹ ಏಕಪಕ್ಷೀಯ ನೇಮಕಾತಿಗಳು ಇಂದು ನಿನ್ನೆಯವಲ್ಲ, ಹಿಂದಿನಿಂದಲೂ ಕೇಂದ್ರದ ಅಧಿಕಾರಾರೂಢ ರಾಜಕೀಯ ಪಕ್ಷಗಳು ಸಾಂವಿಧಾನಿಕ ಹುದ್ದೆಗಳಿಗೆ ತಮ್ಮ ನಿಷ್ಠರನ್ನು ನೇಮಿಸುತ್ತಾ ಬಂದಿವೆ. ರಾಜಕೀಯ ಪಕ್ಷಗಳ ಈ ಸಂಸ್ಕೃತಿ ಬದಲಾಗಬೇಕಿದೆ.
ಅಂಕಿತ್ ಜಿ.ಎನ್.,ತೀರ್ಥಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.