ಯಾದಗಿರಿ ಜಿಲ್ಲೆಯ ಯರಗೋಳದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಪಾಲ್ಗೊಂಡಿದ್ದ ಕಾರ್ಯ
ಕ್ರಮದಲ್ಲಿ ಕೆಲವರು ಬಂದೂಕುಗಳಿಂದ ಸಿಡಿಮದ್ದು ಹಾರಿಸಿದ ಪ್ರಕರಣದ ಹಿನ್ನೆಲೆಯಲ್ಲಿ, ಕರ್ತವ್ಯನಿರತ ಮೂವರು ಕಾನ್ಸ್ಟೆಬಲ್ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ) ಅಮಾನತು ಮಾಡಿರುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಆಗಿದೆ. ಸಿಡಿಮದ್ದು ಹಾರಿಸಿದ್ದನ್ನು ಕೇಂದ್ರ ಸಚಿವರೇ ಸಮರ್ಥನೆ ಮಾಡಿಕೊಂಡಿದ್ದಾರೆ. ಹೀಗಿರುವಾಗ, ಸಿಡಿಮದ್ದು ಹಾರಿಸಿದ್ದು ತಪ್ಪು ಎಂದಾದರೆ, ಅದನ್ನು ಸಮರ್ಥಿಸಿಕೊಂಡ ಸಚಿವರ ವಿರುದ್ಧ ಇಲ್ಲವೇ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ ಆಯೋಜಕರ ವಿರುದ್ಧ ಎಸ್.ಪಿ. ಕ್ರಮ ಕೈಗೊಳ್ಳಲಿ. ಕಾರ್ಯಕ್ರಮ ಆಯೋಜನೆಗೆ ಅನುಮತಿ ಪಡೆದಿರಲಿಲ್ಲ ಎಂದು ಹೇಳುವ ಅವರು, ಅಲ್ಲಿಗೆ ಕಾನ್ಸ್ಟೆಬಲ್ಗಳನ್ನು ನಿಯೋಜಿಸಿದ್ದು ಏತಕ್ಕೆ? ಸಿಡಿಮದ್ದಿನ ವಿಚಾರ ಸುದ್ದಿ ಆಗದೇ ಇದ್ದಿದ್ದರೆ ಈ ಕಾರ್ಯಕ್ರಮವು ಯಾರ ಗಮನಕ್ಕೂ ಬರುತ್ತಿರಲಿಲ್ಲ. ಆಗ ಯಾರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದಿರಿ?
ರಾಜು ಬಿ. ಲಕ್ಕಂಪುರ,ಜಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.