ADVERTISEMENT

ವಾಚಕರ ವಾಣಿ | ಕೃತಜ್ಞತೆ ಬದಲಿಗೆ ಟೀಕೆ ಸರಿಯೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 19 ಆಗಸ್ಟ್ 2021, 22:30 IST
Last Updated 19 ಆಗಸ್ಟ್ 2021, 22:30 IST

‘ಅಫ್ಗಾನಿಸ್ತಾನದಲ್ಲಿ ಎರಡು ದಶಕಗಳಿಂದ ರಕ್ಷಣೆಯ ಗೋಡೆಯಂತಿದ್ದ ಅಮೆರಿಕವು ತನ್ನ ಸೇನೆಯನ್ನು ಅಲ್ಲಿಂದ ಹಿಂತೆಗೆದುಕೊಳ್ಳುವ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದು ವೈಫಲ್ಯವೂ ಹೌದು’ (ಪ್ರ.ವಾ. ಆ. 17) ಎನ್ನುವ ಅಂತರರಾಷ್ಟ್ರೀಯ ಸಮುದಾಯದ ಅಭಿಪ್ರಾಯ ಸೋಜಿಗವೆನಿಸುತ್ತದೆ. ಒಂದಲ್ಲ, ಎರಡಲ್ಲ 20 ವರ್ಷಗಳಿಂದ ಆಫ್ಗನ್ ಸೇನೆಗೆ ಎಲ್ಲ ಬಗೆಯ ರಕ್ಷಣೆ, ತರಬೇತಿ ಕೊಟ್ಟರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಿಫಲವಾದ ಅಲ್ಲಿನ ಪ್ರಜಾಪ್ರಭುತ್ವಕ್ಕೆ ಇನ್ನೂ ಎಷ್ಟು ವರ್ಷ ರಕ್ಷಣೆ ಒದಗಿಸಬಹುದಿತ್ತು?

ಇಂದು ಈ ಕಾರಣಕ್ಕಾಗಿ ‘ನಡುನೀರಿನಲ್ಲಿ ಕೈಬಿಟ್ಟ ಅಮೆರಿಕ’ ಎಂದು ದೂಷಿಸುವ ದೇಶಗಳು ಆಫ್ಗನ್ನರ ರಕ್ಷಣೆಗೆ ಅಮೆರಿಕದೊಂದಿಗೆ ಏಕೆ ಕೈಜೋಡಿಸಲಿಲ್ಲ? ವಾಸ್ತವವಾಗಿ ಆಫ್ಗನ್ನರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದುಅಲ್ಲಿನ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ. ಪರಿಸ್ಥಿತಿಯನ್ನು ಎದುರಿಸಲು ಅವರಿಗೆ ಅಡ್ಡಿಯಾಗಿದ್ದು ಮಿತಿಮೀರಿದ ಭ್ರಷ್ಟಾಚಾರ. ಅದರಲ್ಲಿ ತಾವೂ ಮುಳುಗಿ, ತಮ್ಮ ಸೈನ್ಯದ ಆತ್ಮಸ್ಥೈರ್ಯವನ್ನೂ ಮುಳುಗಿಸಿದರು. ಹೆಲಿಕಾಪ್ಟರ್ ಮತ್ತು ಕಾರುಗಳಲ್ಲಿ ಹಣ ತುಂಬಿಕೊಂಡು ದರೋಡೆಕೋರನಂತೆ ದೇಶದಿಂದ ಓಡಿಹೋದ ಘನಿ (ಹಣ ತುಂಬಿಕೊಂಡು ಹೋದ ಆರೋಪವನ್ನು ಘನಿ ಈಗ ಅಲ್ಲಗಳೆದಿದ್ದಾರೆ) ಕಾಪಿಟ್ಟುಕೊಂಡಿದ್ದು ದೇಶವನ್ನಲ್ಲ, ಭ್ರಷ್ಟ ಮಾರ್ಗದಿಂದ ಬಂದ ಸಂಪತ್ತನ್ನು. ಹಾಗಾದರೆ, ಪಲಾಯನ ಮಾಡಿದ್ದು ಅಮೆರಿಕದ ಸೇನಾಪಡೆಯೇ ಅಥವಾ ಆಫ್ಗನ್ ಪ್ರಭುತ್ವವೇ?

ಘನಿಯವರ ಇಂಥ ದುರ್ನಡತೆಯ ಬಗ್ಗೆ ಅಂತರರಾಷ್ಟ್ರೀಯ ಸಮುದಾಯ ಚಕಾರವೆತ್ತುತ್ತಿಲ್ಲ. ಅಮೆರಿಕದ ಸೇನಾಪಡೆಯು ಮುಸ್ಲಿಂ ದೇಶದ ಆಹಾರ, ಪರಿಸರಕ್ಕೆ ಒಗ್ಗಿಕೊಂಡು, ತಮ್ಮ ಪ್ರೀತಿಪಾತ್ರರಿಂದ ದೂರವಿದ್ದು, ಅಷ್ಟೂ ವರ್ಷಗಳ ಕಾಲ ಅಲ್ಲಿನ ಪ್ರಜಾಪ್ರಭುತ್ವವನ್ನು ಜತನದಿಂದ ಕಾಪಾಡಿದ್ದಕ್ಕೆ ಕನಿಷ್ಠ ಕೃತಜ್ಞತೆಯನ್ನೂ ವಿಶ್ವ ಸಮುದಾಯ ಸಲ್ಲಿಸಲಿಲ್ಲ, ಬದಲಿಗೆ ಟೀಕಿಸುತ್ತಿದೆ!

- ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.