ಒಂದು ಕಾಲದಲ್ಲಿ ಲಕ್ಷ್ಮಿ ಎಂದರೆ ಬದುಕಲು ಅಗತ್ಯವಾದ ಜೀವನಾಗತ್ಯ ವಸ್ತುಗಳ ಸಮೃದ್ಧಿ ಎಂದು
ಅರ್ಥವಾಗುತ್ತಿತ್ತು. ಬರುಬರುತ್ತಾ ವ್ಯಾಪಾರದ ಸೌಲಭ್ಯಕ್ಕಾಗಿ ವಸ್ತುಗಳನ್ನು ಪ್ರತಿನಿಧಿಸುವ ಹಣವನ್ನು ಲಕ್ಷ್ಮಿ ಎಂದು ಆರಾಧಿಸುವುದು ಮೊದಲಾಯಿತು. ಬದುಕಿನ ಪಾಲನೆಗೆ ಜೀವನಾಗತ್ಯ ವಸ್ತುಗಳನ್ನು ಸೃಷ್ಟಿಸುವ ಮಾನವಶ್ರಮ ಮತ್ತು ಭೂಮಿಯನ್ನು ಲಕ್ಷ್ಮಿ ಎಂದು ಗುರುತಿಸುವ ಪರಿಪಾಟ ಬೆಳೆಯಲೇ ಇಲ್ಲ.
ಹಿಂದೂಗಳಲ್ಲಿ ಜಗತ್ತಿನ ಪರಿಪಾಲಕನಾದ ವಿಷ್ಣುವಿಗೆ ಶ್ರೀದೇವಿ ಮತ್ತು ಭೂದೇವಿ ಎಂಬ ಇಬ್ಬರು ಹೆಂಡತಿಯರು ಎಂಬ ಪೌರಾಣಿಕ ದೃಷ್ಟಿ ಇದೆ. ಅವರಲ್ಲಿ ಶ್ರೀದೇವಿಗೆ ಅಂದರೆ ಲಕ್ಷ್ಮಿಗೆ ಇರುವ ಪ್ರಾಧಾನ್ಯ ಭೂದೇವಿಗೆ ಇಲ್ಲ. ರೈತರಲ್ಲಿ ಭೂಮಿಯನ್ನು (ಭೂದೇವಿಯೆಂದು) ಆಗೀಗ ಸಾಂಕೇತಿಕವಾಗಿ ಪೂಜಿಸುವ ಹಬ್ಬ- ಆಚರಣೆಗಳಿದ್ದರೂ ವ್ಯಾಪಾರಿಗಳು ಆರಾಧಿಸುವ ಲಕ್ಷ್ಮಿಪೂಜೆಯ ಮುಂದೆ ಅದೇನೂ ಅಲ್ಲ. ಶ್ರಮಶಕ್ತಿಯ ಆರಾಧನೆಯ ಜಾಗವನ್ನು ಅದರ ಸೃಷ್ಟಿಯಾದ ವಸ್ತುಗಳ ಆರಾಧನೆ, ವಸ್ತುಗಳ ಆರಾಧನೆಯ ಜಾಗವನ್ನು ಅವುಗಳ ವ್ಯಾಪಾರದ ಸಂಕೇತವಾದ ಹಣದ ಆರಾಧನೆಗಳು ಆಕ್ರಮಿಸಿಕೊಂಡಿವೆ. ಶ್ರಮಸಂಸ್ಕೃತಿಯನ್ನು ತುಳಿದು ಭೂಮಿಯನ್ನು ತನ್ನ ಅಡಿಯಾಳಾಗಿಸುವ ಇಂದಿನ ವ್ಯಾಪಾರೀ ಸಂಸ್ಕೃತಿಯಲ್ಲಿ ಲಕ್ಷ್ಮಿಯು ಶ್ರಮಶಕ್ತಿ ಮತ್ತು ಭೂಮಿಯ ಸಂಕೇತವಷ್ಟೆ. ಹೀಗಾಗಿ ಲಕ್ಷ್ಮಿಪೂಜೆಯೆಂದರೆ, ಮೂಲದೇವರನ್ನು ಮೂಲೆಗೆ ತಳ್ಳಿ ಅದರ ಸಂಕೇತವನ್ನು ಮಾತ್ರ, ಅದು ಕೇವಲ ಸಂಕೇತವೆಂಬ ಪ್ರಜ್ಞೆಯೂ ಇಲ್ಲದೆ ಪೂಜಿಸುವ ಸಂಕೇತಾರಾಧನೆ ಮಾತ್ರ.
- ವಿ.ಎನ್.ಲಕ್ಷ್ಮೀನಾರಾಯಣ,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.