ಕರ್ನಾಟಕ ಲೋಕಸೇವಾ ಆಯೋಗದಿಂದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನಡೆದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ, ಎಷ್ಟೋ ಅಭ್ಯರ್ಥಿಗಳು ಒಂದರಿಂದ ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ್ದರೂ ಒಂದು ಸಣ್ಣ ತಪ್ಪಿನಿಂದಾಗಿ ಮತ್ತೆ ಪರೀಕ್ಷೆ ಬರೆದಿದ್ದಾರೆ. ಆಯೋಗದ ಹುದ್ದೆಗಳಿಗೆ ಅಭ್ಯರ್ಥಿಗಳು ವೈಯಕ್ತಿಕ ವಿವರಗಳನ್ನು ಭರ್ತಿ ಮಾಡುವಾಗ, ಕನ್ನಡ ಮಾಧ್ಯಮದಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಅಧ್ಯಯನ ಮಾಡಿರುವ ಬಗ್ಗೆ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ದೃಢೀಕರಿಸಿ ಅಪ್ಲೋಡ್ ಮಾಡಲಾಗುತ್ತದೆ.
ಇಷ್ಟಾದರೂ ಅರ್ಜಿ ಸಲ್ಲಿಸಿದ ನಂತರ ಕೊನೆಯಲ್ಲಿ ಮತ್ತೆ ‘ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದೀರಾ?’ ಎಂಬ ಪ್ರತ್ಯೇಕ ಕಾಲಂ ಇರುತ್ತದೆ. ಒಂದು ವೇಳೆ ಈ ಕಾಲಂ ಭರ್ತಿ ಮಾಡುವಾಗ ಕಣ್ತಪ್ಪಿನಿಂದಾಗಿ ಬಿಟ್ಟುಹೋದರೆ ಆ ಅಭ್ಯರ್ಥಿ ಮತ್ತೆ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗಬೇಕು. ಈ ದ್ವಂದ್ವವನ್ನು ಸಂಬಂಧಪಟ್ಟವರು ಕೂಡಲೇ ಸರಿಪಡಿಸಬೇಕು. ಏಕೆಂದರೆ ಎಲ್ಲಾ ದಾಖಲಾತಿಗಳನ್ನು ಈ ಮೊದಲೇ ಸ್ಕ್ಯಾನ್ ಮಾಡಿ ಸಲ್ಲಿಸಿದ್ದಾಗಿಯೂ ಮತ್ತೆ ಅದೇ ಪ್ರಶ್ನೆ ಕೇಳುವುದು, ಮತ್ತೆ ಪರೀಕ್ಷೆ ಬರೆಸುವುದು ಸಮಂಜಸವಲ್ಲ.
-ವಿಜಯ ಕುಮಾರ್ ಎಸ್. ಸುಜ್ಜಲೂರು, ವಾಟಾಳು, ಟಿ.ನರಸೀಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.