ADVERTISEMENT

ಶಿಕ್ಷಕರು ಏಕೆ ಹೀಗೆ ನಡೆದುಕೊಳ್ಳುತ್ತಾರೆ?

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 20:15 IST
Last Updated 22 ಜನವರಿ 2020, 20:15 IST

ರಾಜ್ಯದ ಸಾವಿರಾರು ಶಾಲಾ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಸಚಿವ ಸುರೇಶ್‌ ಕುಮಾರ್‌ ಅವರು ಸಂವಾದ ನಡೆಸಿ ಕಂಡುಕೊಂಡಿರುವ ಅನುಭವಕಥನವು ವೈವಿಧ್ಯಮಯವಾಗಿದ್ದು, ಸಾರ್ವಜನಿಕ ಚರ್ಚೆಗೆ ಯೋಗ್ಯವಾಗಿದೆ.

ನಮ್ಮ ಶಿಕ್ಷಕರು ಏಕೆ ಹೀಗೆ ನಡೆದುಕೊಳ್ಳುತ್ತಾರೆ? ‘ಪಕ್ಕೆಲುಬು’, ‘ಪುಳಿಯೋಗರೆ’ಯಂತಹ ಪ್ರಕರಣಗಳು ಸಾಮಾಜಿಕ ಜಾಲತಾಣಗಳ ದೆಸೆಯಿಂದಾಗಿ ಅದೃಷ್ಟವಶಾತ್‌ ನಮ್ಮ ಗಮನಕ್ಕೆ ಬಂದಿವೆ. ಶಿಕ್ಷಕರ ಹಿಂಸಾಪ್ರವೃತ್ತಿಯ ಇನ್ನಷ್ಟು ಘಟನೆಗಳು ಬಹಿರಂಗಗೊಳ್ಳದೆ ಮುಚ್ಚಿಹೋಗಿರಬಹುದಲ್ಲವೇ? ಎಷ್ಟೋ ಹಸುಳೆಗಳ ಸುಕೋಮಲ ಮನಸ್ಸುಗಳು ಶಿಕ್ಷಕರ ಅವಿವೇಕದಿಂದ ಮುಜುಗರಕ್ಕೆ ಒಳಗಾಗಿ ಮುದುಡಿಹೋಗಿರಬಹುದಲ್ಲವೇ?

ನಮ್ಮ ಕಲಿಕಾ ಕ್ರಮದಲ್ಲಿ ತಪ್ಪಾಗಿರುವ ಬಗ್ಗೆ ನಾವು ಯೋಚಿಸಬೇಕಾಗಿದೆ. ಶಿಕ್ಷಕರಿಗೆ ಮೊದಲು ಮೌಲ್ಯಯುತ, ಮಾನವೀಯತೆಯ ಶಿಕ್ಷಣಕೇಂದ್ರಿತ ತರಬೇತಿ ನೀಡಬೇಕಾಗಿದೆ. ಶಿಕ್ಷಕರಿಗೆ ಕಾಲಕಾಲಕ್ಕೆ ಮೌಲ್ಯಗಳ ಪರಿಚಯವೇ ಇಲ್ಲದಿರುವುದರಿಂದ ನಮ್ಮ ಕಲಿಕೆಗೆ ಇಂತಹ ದುಃಸ್ಥಿತಿ ಬಂದಿದೆ ಎನಿಸುತ್ತದೆ.

ADVERTISEMENT

ಈ ಪ್ರಕರಣಗಳಲ್ಲಿ ನಾವು ಕಲಿಯಬೇಕಾದ ಕೆಲವು ಪಾಠಗಳಿವೆ. ಎಲ್ಲ ಶಿಕ್ಷಕರಿಗೆ ಕನಿಷ್ಠ ಎರಡು ವರ್ಷಗಳಿಗೆ ಒಮ್ಮೆಯಾದರೂ ಮೌಲ್ಯಗಳ ಪುನರ್ಮನನ ಕಾರ್ಯಾಗಾರ ಆಗಬೇಕು. ಮಕ್ಕಳನ್ನು ಹಿಂಸಿಸುವವರಿಗೆ ಮಕ್ಕಳ ಹಕ್ಕುಗಳ ಪರಿಚಯ ಇರುವಂತೆ ನೋಡಿಕೊಳ್ಳಬೇಕು. ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಪೋಷಕರ ಸಹಭಾಗಿತ್ವ ಮತ್ತು ಪಾಲ್ಗೊಳ್ಳುವಿಕೆಯನ್ನು ಕಡ್ಡಾಯ ಮಾಡಬೇಕು. ಇದರಲ್ಲಿ ಶಿಕ್ಷಕರ ಸಂಘಟನೆಗಳ ಪಾತ್ರ ಬಹಳ ಮಹತ್ವದ್ದು. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳೂ ಪಾಲ್ಗೊಳ್ಳುವಂತೆ ಮಾಡಬೇಕು. ನಮ್ಮ ಪ್ರಾಥಮಿಕ ಶಿಕ್ಷಣದ ಬಗೆಗೆ ಸಮಗ್ರ ಚಿಂತನೆ ನಡೆಸಬೇಕು. ಇದರಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಳ್ಳಬೇಕು. ಆಗ ಸ್ವಲ್ಪಮಟ್ಟಿಗಿನ ಸುಧಾರಣೆ ಆಗಿ, ಇಂತಹ ಅವಘಡಗಳು ತಪ್ಪಬಹುದೇನೊ.

-ಡಾ. ಎಲ್‌.ಹನುಮಂತಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.