ರಾಜ್ಯದಲ್ಲಿ ಇತ್ತೀಚೆಗೆ ಸುದ್ದಿ ಮಾಡಿದ ಕೆಲವು ಶಿಕ್ಷಕರನ್ನು ಪ್ರಸ್ತಾಪಿಸುತ್ತಾ ‘ಶಿಕ್ಷಕರು ಏಕೆ ಹೀಗೆ ನಡೆದುಕೊಳ್ಳುತ್ತಾರೆ?’ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಪ್ರಶ್ನಿಸಿದ್ದಾರೆ (ಪ್ರ.ವಾ., ಜ. 22). ಶಿಕ್ಷಕನನ್ನು ಕೇವಲ ಕಲಿಸುವ ಕೆಲಸಕ್ಕೆ ಬಿಟ್ಟರೆ, ಆತ ಮಕ್ಕಳನ್ನು ದೇವರ ಸ್ವರೂಪದಲ್ಲಿ ಕಂಡು ಅವರಿಗೆ ಕಲಿಸುತ್ತಾನೆ. ಆದರೆ ಇತ್ತೀಚೆಗೆ ಹಾಗೆ ಆಗುತ್ತಿಲ್ಲ. ಶಿಕ್ಷಕ, ಮಕ್ಕಳಿಗೆ ಪಾಠ ಕಲಿಸುವುದರ ಜೊತೆಗೆ ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾನೆ. ಶಾಲೆ, ಮಕ್ಕಳು, ಪೋಷಕರು, ಎಸ್ಡಿಎಂಸಿ ಸದಸ್ಯರು, ಮೇಲಧಿಕಾರಿಗಳು, ಇವರೆಲ್ಲರ ಮಾತುಗಳನ್ನು ಕೇಳುವುದರ ಜೊತೆಗೆ ತನ್ನ ಸಂಸಾರದ ಆಗುಹೋಗುಗಳನ್ನೂ ನಿಭಾಯಿಸಿಕೊಂಡು ಹೋಗುವುದು ಕಷ್ಟದ ಕೆಲಸವಾಗಿದೆ.
ಮೌಲ್ಯಗಳನ್ನು ತಿಳಿಸುವ ತರಬೇತಿಯನ್ನು ಕಾಲಕಾಲಕ್ಕೆ ನೀಡಬೇಕೆಂದು ಸಚಿವರು ಹೇಳಿದ್ದಾರೆ. ಡಿಪಿಇಪಿ ತರಬೇತಿಯಿಂದ ಹಿಡಿದು ಈಗ ಚಾಲ್ತಿಯಲ್ಲಿರುವ ಸರ್ವ ಶಿಕ್ಷಣ ಅಭಿಯಾನದವರೆಗೆ ಲೆಕ್ಕವಿಲ್ಲದಷ್ಟು ತರಬೇತಿಗಳನ್ನು ಶಿಕ್ಷಕರು ಪಡೆದುಕೊಂಡಿದ್ದಾರೆ. ಆದರೂ ಶಿಕ್ಷಕರು ಇಂದು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಸೋಜಿಗದ ಸಂಗತಿಯಾಗಿದೆ. ಇದರಿಂದ ಹೊರಬರಲು ಅವರಿಗೆ ಸಾಧ್ಯವಾಗುತ್ತಿಲ್ಲ. ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆಗಳು ಆಗಬೇಕು. ಆದ್ದರಿಂದ ಶಿಕ್ಷಕರ ನಡೆಯ ಬಗ್ಗೆ ಸಚಿವರು ತಪ್ಪು ತಿಳಿಯುವುದು ಬೇಡ.
–ಕುಣಿಗಲ್ ಜಯಣ್ಣ,ಕೆಂಚನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.