ರಾಜ್ಯದಲ್ಲಿ ಕಾಂಗ್ರೆಸ್ಗೆ ಹುರುಪು ಬಂದಿದ್ದು, ನೈಜ ವಿರೋಧ ಪಕ್ಷದ ಕರ್ತವ್ಯವನ್ನು ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ವೈ.ಗ.ಜಗದೀಶ್ ಬರೆದಿದ್ದಾರೆ (ಪ್ರ.ವಾ., ಜೂನ್ 16). ಕಾಂಗ್ರೆಸ್ ಪಕ್ಷವು ಜನರಲ್ಲಿ ತನ್ನ ಬಗ್ಗೆ ವಿಶ್ವಾಸ ಮೂಡಿಸುವ ಸ್ಥಿತಿಯಲ್ಲಿಲ್ಲ. ಇತ್ತೀಚಿನ ಬೆಳವಣಿಗೆಗಳಿಂದ ಜನರಲ್ಲಿ ಬಿಜೆಪಿ ಬಗೆಗಿನ ನಂಬಿಕೆ ಜಾರುತ್ತಾ ಹೋಗುತ್ತಿದ್ದರೂ ಪ್ರಬಲ ಪ್ರತಿಪಕ್ಷವಾಗಿ ಚಿಮ್ಮಬೇಕಾಗಿದ್ದ ಕಾಂಗ್ರೆಸ್ನ ಸ್ವಯಂಕೃತ ಅಪರಾಧದಿಂದಾಗಿ, ಅದು ಇನ್ನಷ್ಟು ವರ್ಷಗಳು ವನವಾಸದಲ್ಲಿ ಇರಬೇಕಾಗುವ ಸನ್ನಿವೇಶದಲ್ಲಿ ಬದಲಾವಣೆ ಕಾಣುತ್ತಿಲ್ಲ.
ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಾಗಿನಿಂದ ಕಾಂಗ್ರೆಸ್ ಪಕ್ಷದ ನಾಯಕತ್ವ ‘ಕೋಮಾ’ಕ್ಕೆ ಜಾರಿದೆ. ರಾಜ್ಯದಲ್ಲಿ ಅಧಿಕಾರ ವಂಚಿತರಾದಾಗಿನಿಂದ ರಾಜ್ಯದ ನಾಯಕರು ಬೆಲೆ ಏರಿಕೆ ಬಗ್ಗೆ, ಕೊರೊನಾ ನಿಯಂತ್ರಣ ಕ್ರಮಗಳ ಬಗ್ಗೆ ಜನರ ನಿರೀಕ್ಷೆಗೆ ತಕ್ಕಷ್ಟು ಹೋರಾಡುತ್ತಿಲ್ಲ. ಬದಲಿಗೆ, ‘ಹೊಣೆಗೇಡಿ’ ಆಡಳಿತಕ್ಕೆ ಪತ್ರಿಕಾ ಹೇಳಿಕೆಗಳಿಂದ ಛೀಮಾರಿ ಹಾಕುವುದಕ್ಕೆ ಸೀಮಿತರಾಗಿದ್ದಾರೆ. ಹಿಂದೆ ಬಿಜೆಪಿ ನಿರಂತರವಾಗಿ ಕೂಗು ಹಾಕುತ್ತಿದ್ದುದು, ಹೋರಾಟ ಮಾಡುತ್ತಿದ್ದುದಾದರೂ ಕಾಂಗ್ರೆಸ್ಸಿಗೆ ನೆನಪಾಗಲಿಲ್ಲವೇ?
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬೆನ್ನು ಮೂಳೆ ಮುರಿದರೂ ಇನ್ನೂ ಮಮತಾ ಬ್ಯಾನರ್ಜಿ ಅವರಿಗೆ ಅದು ‘ತಲೆನೋವು’ ಆಗಿರುವುದು, ಬಿಹಾರದಲ್ಲಿ ಯುವನಾಯಕ ತೇಜಸ್ವಿ ಯಾದವ್, ಕಮ್ಯುನಿಸ್ಟ್ ಪಕ್ಷದ ಯುವ ಮುಂದಾಳು ಕನ್ಹಯ್ಯ ಕುಮಾರ್ ಅವರ ಗರ್ಜನೆಗಳೂ ಕಾಂಗ್ರೆಸ್ಸಿಗರ ಗಮನಕ್ಕೆ ಬರಲಿಲ್ಲವೇ? ಅಧಿಕಾರದಲ್ಲಿದ್ದಾಗಲೇ ಜನರ ವಿಶ್ವಾಸ ಕಳೆದುಕೊಂಡಿದ್ದ ಕಾಂಗ್ರೆಸ್, ಆಗೊಮ್ಮೆ ಈಗೊಮ್ಮೆ ನೀಡುವ ಪತ್ರಿಕಾ ಹೇಳಿಕೆಗಳು, ಟ್ವಿಟರ್ನಲ್ಲಿನ ಬಾಲಿಶ ಟೀಕೆಗಳು ಜನರ ವಿಶ್ವಾಸ ಗಳಿಸಬಲ್ಲವೇ?
- ಪಿ.ಸಿ.ಕೇಶವ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.