ADVERTISEMENT

ಹೊಸ ಫಸಲಿನ ನಿರೀಕ್ಷೆಯಲ್ಲಿ ಕೃಷಿ

ಪದ್ಮನಾಭ ಭಟ್ಟ‌
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಕೃಷಿ ತಾಪಂಡ
ಕೃಷಿ ತಾಪಂಡ   

‘ಅಕಿರ’, ‘ಕಹಿ’ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಕೊಡಗಿನ ಹುಡುಗಿ ಕೃಷಿ ತಾಪಂಡ ಅವರು ಚಿರಪರಿಚಿತರಾಗಿದ್ದು ‘ಬಿಗ್‌ಬಾಸ್’ ರಿಯಾಲಿಟಿ ಷೋನ ಐದನೇ ಆವೃತ್ತಿಯ ಮೂಲಕ. ‘ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ತನ್ನ ಮೇಲೆ ಜನರಿಗೆ ಇರುವ ನಿರೀಕ್ಷೆ ಗಣನೀಯವಾಗಿ ಹೆಚ್ಚಿದೆ’ ಎನ್ನುವುದೂ ಅವರಿಗೆ ಗೊತ್ತು.

ಕೃಷಿ ನಾಯಕಿಯಾಗಿ ನಟಿಸಿದ್ದ ‘ಅಕಿರ’ ಚಿತ್ರ ಮೊದಲು ಬಿಡುಗಡೆಯಾಗಿದ್ದರೂ ಅವರು ಪ್ರಥಮ ಬಾರಿಗೆ ಕ್ಯಾಮೆರಾ ಎದುರಿಸಿದ್ದು ‘ದಳಪತಿ’ ಸಿನಿಮಾದಲ್ಲಿ. ಪ್ರಶಾಂತ್ ರಾಜ್ ನಿರ್ದೇಶನದ ‘ದಳಪತಿ’ ಈ ವಾರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಕೃಷಿ, ನಾಯಕಿಯ ಗೆಳತಿಯ ಪಾತ್ರದಲ್ಲಿ ನಟಿಸಿದ್ದಾರೆ. ಮೂರು ವರ್ಷಗಳ ಹಿಂದೆಯೇ ನಟಿಸಿದ್ದ ಈ ಪಾತ್ರದ ಕುರಿತು ಅವರು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ.

‘ನಾನು ದಳಪತಿ ಚಿತ್ರದಲ್ಲಿ ನಟಿಸಿದ್ದೇನೆ ಎನ್ನುವ ಸಂಗತಿ ತುಂಬಾ ಜನರಿಗೆ ಗೊತ್ತೇ ಇಲ್ಲ. ಮೂರು ವರ್ಷ ಹಿಂದೆಯೇ ನಟಿಸಿದ ಸಿನಿಮಾ ಅದು. ಆ ಪಾತ್ರದ ಬಗ್ಗೆ ಮಾತನಾಡಲಿಕ್ಕೆ ಹೆಚ್ಚಿಗೇನೂ ಇಲ್ಲ’ ಎನ್ನುತ್ತಾರೆ ಅವರು.

ADVERTISEMENT

ಈಗ ಕೃಷಿ ಅವರು ನಾಯಕಿಯಾಗಿ ನಟಿಸಿರುವ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ತಿಂಗಳ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಚಿತ್ರದ ಬಗ್ಗೆ ಅವರು ಉತ್ಸಾಹದಿಂದಲೇ ಮಾತನಾಡುತ್ತಾರೆ.

‘ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಪ್ರಮೇಯಾ ಎಂದು. ಎರಡು ಛಾಯೆ ಇರುವ ಪಾತ್ರದಲ್ಲಿ ನಟಿಸಿದ್ದೇನೆ. ಮೊದಲರ್ಧ ಕಾಲೇಜ್ ಗರ್ಲ್. ತರ್ಲೆ ಮಾಡಿಕೊಂಡು, ತುಂಟತನದಿಂದ ಇರುವ ಹುಡುಗಿಯ ಪಾತ್ರ. ದ್ವಿತೀಯಾರ್ಧದಲ್ಲಿ ಅದಕ್ಕೆ ಪೂರ್ತಿ ವಿರುದ್ಧವಾಗಿ ಮಲೆನಾಡು ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸೀರೆ, ಮೂಗುಬೊಟ್ಟು, ಪೂರ್ತಿ ಸಾಂಪ್ರದಾಯಿಕ ರೂಪದಲ್ಲಿ ಆ ಪಾತ್ರ ಇರುತ್ತದೆ. ಮೊದಲರ್ಧ ಪೂರ್ತಿ ಹ್ಯಾಪಿ. ದ್ವಿತೀಯಾರ್ಧ ಪೂರ್ತಿ ಭಾವನಾತ್ಮಕ ಪಯಣ ಅದು’ ಎಂದು ಪಾತ್ರದ ಕುರಿತು ಅವರು ಹೇಳಿಕೊಳ್ಳುತ್ತಾರೆ. ಈ ಭಾಗವನ್ನು ಮೂಡಿಗೆರೆಯಲ್ಲಿ ಚಿತ್ರೀಕರಣ ನಡೆಸಲಾಗಿದೆಯಂತೆ.

‘ಅಕಿರ, ಕಹಿ, ಎರಡು ಕನಸು ಈ ಮೂರು ಸಿನಿಮಾಗಳಲ್ಲಿನ ನನ್ನ ಪಾತ್ರಗಳೂ ನನಗೆ ಖುಷಿಕೊಟ್ಟಿವೆ. ಆದರೆ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರದ ಪಾತ್ರ ಅವೆಲ್ಲಕ್ಕಿಂತ ಭಿನ್ನವಾದದ್ದು. ನನ್ನ ಇದುವರೆಗಿನ ಎಲ್ಲ ಸಿನಿಮಾಗಳಲ್ಲಿ ನನ್ನ ನೆಚ್ಚಿನ ಸಿನಿಮಾ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’. ಈ ಚಿತ್ರದ ಚಿತ್ರಕಥೆ, ಸಂಭಾಷಣೆ, ಕಥೆ ಎಲ್ಲವೂ ಅಷ್ಟೇ ಚೆನ್ನಾಗಿವೆ. ಈ ಚಿತ್ರ ನಾನು ಎಂಥ ಪಾತ್ರಗಳನ್ನೂ ನಿಭಾಯಿಸಬಲ್ಲೆ ಎಂಬ ವಿಶ್ವಾಸ ಕೊಟ್ಟಿದೆ’ ಎನ್ನುತ್ತಾರೆ ಅವರು.

ಈಗ ಮತ್ತೊಂದು ಹೊಸ ತಂಡದೊಂದಿಗೆ ಸೇರಿಕೊಂಡು ‘ರೂಪಾಯಿ’ ಎಂಬ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ‘ಇದೊಂದು ಮಾಸ್ ಕಥಾವಸ್ತು ಇರುವ ಚಿತ್ರ. ಇಂಥದೊಂದು ಚಿತ್ರದಲ್ಲಿ ನಟಿಸಬೇಕು ಎಂದು ನನಗೆ ಮೊದಲಿನಿಂದಲೂ ಆಸೆ ಇತ್ತು. ಈ ಕಥೆ ಇಷ್ಟವಾಯ್ತು’ ಎಂದು ‘ರೂಪಾಯಿ’ ಒಪ್ಪಿಕೊಂಡ ಕಾರಣವನ್ನು ಅರುಹುತ್ತಾರೆ. ವಿನೋದ್ ಎನ್ನುವ ಹೊಸ ತರುಣ ನಿರ್ದೇಶಿಸಿ ನಾಯಕನಾಗಿಯೂ ನಟಿಸುತ್ತಿರುವ ‘ರೂಪಾಯಿ’ ಚಿತ್ರ ತಮ್ಮ ಮೌಲ್ಯವನ್ನೂ ಹೆಚ್ಚಿಸುವ ನಿರೀಕ್ಷೆ ಕೃಷಿ ಅವರಿಗಿದೆ.

ಈ ಚಿತ್ರಕ್ಕಾಗಿಯೇ ಅವರು ವಿಶೇಷವಾಗಿ ಸ್ಟಂಟ್‌ಗಳನ್ನೂ ಅಭ್ಯಾಸ ಮಾಡುತ್ತಿದ್ದಾರೆ. ‘ಈ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಾಯಕನೊಂದಿಗೆ ನಾನೂ ಫೈಟ್ ಮಾಡುತ್ತೇನೆ. ಆದ್ದರಿಂದ ವಿಕ್ರಮ್ ಮಾಸ್ಟರ್ ಬಳಿ ಒಂದು ವಾರ ವಿಶೇಷ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದೇನೆ’ ಎಂದು  ಅವರು ಉತ್ಸಾಹದಿಂದಲೇ ಹೇಳಿಕೊಳ್ಳುತ್ತಾರೆ.

ಇದರ ಜತೆಗೆ ಇನ್ನೊ ಎರಡ್ಮೂರು ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಅವರ ಮುಂದಿದೆ. ಆದರೆ ‘ರೂಪಾಯಿ’ ಚಿತ್ರ ಮುಗಿಸಿದ ಮೇಲೆ ಅವುಗಳಿಗೆ ಸಹಿ ಹಾಕುವ ಆಲೋಚನೆ ಕೃಷಿ ಅವರದ್ದು. ಹಾಗೆಯೇ ತಮಿಳು ಭಾಷೆಯ ಒಂದು ಸಿನಿಮಾದಲ್ಲಿಯೂ ನಟಿಸುವ ಅವಕಾಶ ಅವರಿಗೆ ಬಂದಿದೆ.

‘ನನಗೆ ಇದೇ ರೀತಿಯ ಪಾತ್ರಗಳಲ್ಲಿ ನಟಿಸಬೇಕು ಎಂಬ ಯಾವ ನಿರ್ಬಂಧವೂ ಇಲ್ಲ. ಎಲ್ಲ ರೀತಿಯ ಪಾತ್ರಗಳಿಗೂ ನಾನು ತೆರೆದುಕೊಂಡಿದ್ದೇನೆ. ಕಲಾವಿದೆಯಾಗಿ ನನಗೆ ಖುಷಿ ಸಿಗುವುದು ಮುಖ್ಯ. ಕಥೆ ಮತ್ತು ನನ್ನ ಪಾತ್ರ ಹೇಗಿದೆ ಎಂಬುದನ್ನಷ್ಟೇ ನಾನು ನೋಡುತ್ತೇನೆ. ಗ್ಲ್ಯಾಮರ್, ಡಿಗ್ಲ್ಯಾಮರ್ ಯಾವ ರೀತಿ ಇದ್ದರೂ ನಟಿಸಲು ಹಿಂಜರಿಯುವುದಿಲ್ಲ’ ಎಂದು ಅವರು ಪಾತ್ರಗಳ ಆಯ್ಕೆಯ ವಿಷಯದಲ್ಲಿ ತಾವು ಮುಕ್ತವಾಗಿರುವುದನ್ನು ಜಾಹೀರು ಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.