ADVERTISEMENT

ಹೊಯ್ಸಳ ವಾಹನ: ಬ್ಯಾಟರಿ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 20:31 IST
Last Updated 30 ಮಾರ್ಚ್ 2018, 20:31 IST

ಬೆಂಗಳೂರು: ನಗರದಲ್ಲಿ ದಿನದ 24 ಗಂಟೆಯೂ ಗಸ್ತು ತಿರುಗುತ್ತಿರುವ ಹೊಯ್ಸಳ ವಾಹನಗಳಿಗೆ ಬ್ಯಾಟರಿ ಸಮಸ್ಯೆ ಎದುರಾಗಿದೆ.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಪರಿಚಯಿಸಿರುವ 51 ಪಿಂಕ್ ಹೊಯ್ಸಳ ಸೇರಿ ನಗರದಲ್ಲಿ 221 ಹೊಯ್ಸಳ ವಾಹನಗಳಿವೆ. ಪ್ರತಿ ವಾಹನದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಕಾನ್‌ಸ್ಟೆಬಲ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಿಂಕ್‌ ವಾಹನದಲ್ಲೂ ಹೆಡ್‌ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌ ಹಾಗೂ ಒಬ್ಬ ಮಹಿಳಾ ಕಾನ್‌ಸ್ಟೆಬಲ್‌ ಇದ್ದಾರೆ.

ಪ್ರತಿ ವಾಹನಕ್ಕೆ ಪ್ರತ್ಯೇಕ ಟ್ಯಾಬ್‌ ನೀಡಲಾಗಿದೆ. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ನಿಯಂತ್ರಣ ಕೊಠಡಿಗೆ(100) ಕರೆ ಮಾಡಿದಾಗ, ಅಲ್ಲಿಯ ಸಿಬ್ಬಂದಿ ಟ್ಯಾಬ್‌ಗೆ ಮಾಹಿತಿ ರವಾನಿಸುತ್ತಾರೆ. ಅದನ್ನು ಗಮನಿಸಿದ ಬಳಿಕ ವಾಹನದ ಸಿಬ್ಬಂದಿ, ಘಟನಾ ಸ್ಥಳಕ್ಕೆ ಹೋಗುವ ವ್ಯವಸ್ಥೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಸಂಜೆ 6ರಿಂದ ನಸುಕಿನ 6 ಗಂಟೆಯವರೆಗೆ ಸೈರನ್‌ ಹಾಗೂ ಟ್ಯಾಬ್‌ ಆನ್‌ ಇರಬೇಕು ಎಂಬ ನಿಯಮವಿದೆ. ಆದರೆ, ವಾಹನದಲ್ಲಿರುವ ಬ್ಯಾಟರಿಗಳನ್ನು ಎಷ್ಟೇ ಚಾರ್ಚ್‌ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಇದರಿಂದ ನಿಯಮ ಪಾಲಿಸಲು ಆಗುತ್ತಿಲ್ಲ. ತುರ್ತು ಕರೆಗಳು ಬಂದಾಗ, ನಿಯಂತ್ರಣ ಕೊಠಡಿಯಿಂದ ಟ್ಯಾಬ್‌ಗೆ ಮಾಹಿತಿ ನೀಡಲು ಆಗುತ್ತಿಲ್ಲ. ತ್ವರಿತವಾಗಿ ಸ್ಥಳಕ್ಕೆ ಹೋಗುವುದು ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು.

ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ಕುಮಾರ್, ‘ಸಮಸ್ಯೆ ಗಮನಕ್ಕೆ ಬಂದಿದೆ. ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ಡಿಸಿಪಿ ಹಾಗೂ ಎಸಿಪಿಗಳಿಗೆ ಸೂಚಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.