ADVERTISEMENT

ನಾರಾಯಣ ಗುರುಗಳ ಸ್ಮರಣೆ: ತಲೆಮಾರುಗಳನ್ನು ಮುನ್ನಡೆಸಬೇಕಾದ ಬೆಳಕಿನ ಹಾದಿ...

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 21 ಆಗಸ್ಟ್ 2021, 19:30 IST
Last Updated 21 ಆಗಸ್ಟ್ 2021, 19:30 IST
ನಾರಾಯಣ ಗುರು
ನಾರಾಯಣ ಗುರು   

ಬದುಕು ನಿಂತ ನೀರಲ್ಲ; ಹರಿವ ನದಿ. ನಿಂತರದು ಬಗ್ಗಡ. ಸಮಾಜಗಳೂ ಹಾಗೆಯೇ. ಚಲನಶೀಲತೆ ಅದರ ಜೀವಾಳ. ಕಾಲದ ಹಿತ, ಹಿಡಿತಕ್ಕೆ ಒಳಪಟ್ಟು ಸಮಾಜ ತನ್ನ ಆಶಯ, ಸ್ವರೂಪಗಳನ್ನು ಮುರಿದುಕಟ್ಟಿಕೊಳ್ಳುವುದು ಅನಿವಾರ್ಯ. ಇತಿಹಾಸದುದ್ದಕ್ಕೂ ಅಜ್ಞಾನದಿಂದಲೋ, ಸ್ವಾರ್ಥಸಾಧನೆಗೋ ಸೃಜಿಸಿದ ಕೊಳೆ ತೊಳೆಯುವ ಕಾಯಕವನ್ನು ಸಾಧುಸಂತರು ಮಾಡುತ್ತಲೇ ಬಂದಿದ್ದಾರೆ. ಆಯಾಯ ಕಾಲಘಟ್ಟದಲ್ಲಿ ಬೇರೂರಿದ್ದ ಮೌಢ್ಯ, ತಾರತಮ್ಯ, ಶೋಷಣೆಗಳಿಂದ ಮುಕ್ತವಾಗಲು ಶ್ರಮಿಸಿದ್ದಾರೆ, ಸಮಸಮಾಜವನ್ನು ಕನಸಿದ್ದಾರೆ, ಅರಿವಿನ ಬೆಳಕನ್ನು ಹರಿಸಿದ್ದಾರೆ. ವಿಕಾಸದ ಹಾದಿಯಲ್ಲಿ ಔನತ್ಯ ಮಾರ್ಗದ ಅನುಸರಣೆಯಂತೆ ಬಂದಿದ್ದ ದೇವರು-ಧರ್ಮಗಳ ಹೆಸರಲ್ಲಿ ನಡೆದ ಅನಾಚಾರ-ಕ್ರೌರ್ಯಗಳು ಗ್ರಹಿಕೆಯನ್ನೂ ಮೀರಿದಂತವು. ಸಾಮಾಜಿಕ ಸುಧಾರಣೆಯ ಕಾಯಕದಲ್ಲಿ ಮಲಗಿದ್ದ ಜಗತ್ತನ್ನು ಚಿವುಟಿಹೋದ ಬುದ್ಧ, ಬಸವ, ದಾಸಪರಂಪರೆಯೊಟ್ಟಿಗೆ ವಿಭಿನ್ನವಾಗಿ ನಿಲ್ಲುವ, ಶತಮಾನದ ಮಹಾಸಂತರೇ ಬ್ರಹ್ಮಶ್ರೀ ನಾರಾಯಣ ಗುರುಗಳು.

ಕೇರಳದ ತಿರುವನಂತಪುರಂದಿಂದ 12ಕಿ.ಮೀ. ದೂರದಲ್ಲಿರುವ ಚೆಂಬಳಂತಿಯಲ್ಲಿ ಮದ್ಯಮವರ್ಗದ ಈಳವ ಕುಟುಂಬದಲ್ಲಿನ ಶಿಕ್ಷಕರು, ನಾಟಿವೈದ್ಯರಾಗಿದ್ದ ಮಾಡಾನ್ ಆಶಾನ್ ಮತ್ತು ಕುಟ್ಟಿಯಮ್ಮ ದಂಪತಿಯ ಮಗನಾಗಿ ಜನಿಸಿದವರು ನಾರಾಯಣ ಗುರುಗಳು. ತಮ್ಮ ವೇದಾಧ್ಯಯನ, ವಿಶಿಷ್ಟ ಚಿಂತನೆಗಳಲ್ಲಿ ಅರಳಿದ ಅವರದು ದೇಶಕಾಲವನ್ನು ಮೀರಿದ ವ್ಯಕ್ತಿತ್ವ ಪಡೆದುಕೊಂಡರು. ಮಹಿಳೆಯರು, ಶೂದ್ರವರ್ಗ ಮತ್ತು ಶೂದ್ರಾತಿಗಳಲ್ಲಿ ಸಾಂಸ್ಕøತಿಕ ಪುನುರುತ್ಥಾನ, ಆತ್ಮಾಭಿಮಾನ ಮತ್ತು ವಿದ್ಯಾದಾನದ ರುವಾರಿಯಾಗಿ ಅವತರಿಸಿದವರು. ದೂರದೃಷ್ಟಿಯ ಕಾರ್ಯಯೋಜನೆಗಳ ಮೂಲಕ ಗಾಢಾಂಧಕಾರದಲ್ಲಿ ಮುಳುಗಿದ್ದವರ ಬದುಕಿಗೊಂದು ಜೀವಕಸುವನ್ನು ತುಂಬಿದರು.

ಉತ್ತರದ ಸಮಾಜ ಸುಧಾರಕರೊಟ್ಟಿಗೆ, ಒಡಿಶಾದ ಮಹಿಮಾಧರ್ಮ, ಫುಲೆಯವರ ಸತ್ಯಶೋಧಕ ಸಮಾಜ, ಛತ್ತೀಸ್‌ಗಡದ ಸತ್ನಮ್ ಪಂಥ, ತಮಿಳುನಾಡಿನ ಪೆರಿಯಾರ್, ಕೊಲ್ಲಾಪುರದ ಸಾಹುಮಹಾರಾಜರು ಉಂಟುಮಾಡಿದ ಕ್ರಾಂತಿಯಂತೆ 1888ರಲ್ಲಿ ನಾರಾಯಣ ಗುರುಗಳು ಅರವಿಪುರಂನ ಶಿವದೇಗುಲವನ್ನು ಸ್ಥಾಪಿಸಿದಾಗಲೂ ದೊಡ್ಡ ಸಂಚಲನ ಉಂಟಾಗಿತ್ತು. ಗುರುಗಳು ಮತ್ತವರ ಅನುಯಾಯಿಗಳು ಹುಟ್ಟುಹಾಕಿದ ಕ್ರಾಂತಿಕಾರಕ ಚಳುವಳಿಗಳಲ್ಲಿ ಗುರುಗಳ ಸಾಮಾಜಿಕ ಸುಧಾರಣೆ ಮತ್ತು ಧಾರ್ಮಿಕ ಪುನುರುತ್ಥಾನ, ಡಾ.ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ ಆಂದೋಲನಗಳು, ಶಿಕ್ಷಣದ ಹಕ್ಕಿನ ಹೋರಾಟದಲ್ಲಿ ಕುಮಾರನ್ ಆಶಾನ್ ಬಳಗದ ಪ್ರಯತ್ನ, ಸಿ.ಕೇಶವನ್ ನೇತೃತ್ವದ ರಾಜಕೀಯ ಹಕ್ಕು ಹೋರಾಟ, ಟಿ.ಕೆ ಮಾಧವನ್ ನೇತೃತ್ವದಲ್ಲಿ ನಡೆದ ಅಸ್ಪೃಷ್ಯತೆ ವಿರೋಧಿ ಹೋರಾಟಗಳನ್ನೂ ತಿಳಿಯಬೇಕಾದ್ದು ಅವಶ್ಯಕ.

ADVERTISEMENT

ಕೇರಳದಲ್ಲಾಗ ಕ್ರೌರ್ಯವು ವಿಜೃಂಭಿಸುವ ಕಾಲವಾಗಿತ್ತು. ಅವರ್ಣೀಯರಿಗೆ ಕೆರೆಬಾವಿಗಳಲ್ಲಿ ನೀರೆತ್ತುವುದು, ಬ್ಯಾಂಕ್, ಅಂಚೆಕಚೇರಿ ಪ್ರವೇಶಿಸುವುದು, ಮಹಡಿಮೇಲೆ ವಾಸಿಸುವುದು, ಸರ್ಕಾರಿ ನೌಕರಿಗೆ ಸೇರುವುದು, ಕಥಕ್ಕಳಿಯಂಥಾ ನೃತ್ಯಗಳಲ್ಲಿ ದೇವರ ಪಾತ್ರ ಮಾಡುವುದೆಲ್ಲಾ ನಿಷಿದ್ಧವಾಗಿತ್ತು. ಆಭರಣ, ಚಪ್ಪಲಿ, ವಿಶೇಷವಾಗಿ ಮಹಿಳೆಯರು ಮೈತುಂಬ ವಸ್ತ್ರಧರಿಸಲೂ ನಿರ್ಬಂಧವಿತ್ತು. ತೆರೆದೆದೆಯಲ್ಲಿ ಎದುರಾಗಿ, ಗಾತ್ರದ ಆಧಾರದಲ್ಲಿ ‘ಸ್ತನಗಂದಾಯ’ ಕಟ್ಟಬೇಕಿತ್ತು. ಮಡಿಮೈಲಿಗೆಯ ಹೆಸರಲ್ಲಿ ಶೂದ್ರರು ಮೇಲ್ವರ್ಗದವರಿಂದ ಇಂತಿಷ್ಟೇ ಅಡಿ ದೂರವಿರಲೇಬೇಕೆಂಬ ಸಾಮಾಜಿಕ ಕಟ್ಟಳೆಯಿತ್ತು. ಮಧ್ಯಾಹ್ನ ಮಾತ್ರವೇ ರಸ್ತೆಗಳಲ್ಲಿ ಸಂಚರಿಸಬೇಕು, ಅವರ ನೆರಳು ಮೇಲ್ವರ್ಗಕ್ಕೆ ತಾಕಕೂಡದು. ಶೂದ್ರರು ಸದಾಕಾಲ ಕೈಲೊಂದು ಮಡಕೆ ಹಿಡಿದುಸಾಗುತ್ತಾ ಅದಕ್ಕೇ ಉಗುಳಬೇಕೆಂಬ ಕಟ್ಟುಪಾಡಿತ್ತು. ಇನ್ನು ಧಾರ್ಮಿಕ ವ್ಯವಸ್ಥೆಯದಂತೂ ಹೀನಾಯಸ್ಥಿತಿ. ದೇವಸ್ಥಾನಗಳನ್ನು ಪ್ರವೇಶಿಸಲು, ಸರ್ಕಾರವೇ ನಡೆಸುವ ಶಾಲೆಗಳಲ್ಲಿ ಕಲಿಯಲು, ವೇದಪಠಣಗಳನ್ನು ಆಲಿಸಲೂ ಅವಕಾಶವಿರಲಿಲ್ಲ.. ನಿಯಮವನ್ನು ಉಲ್ಲಂಘಿಸಿ ಧಾರ್ಮಿಕ ಕಾರ್ಯವನ್ನು ಆಲಿಸಿದವರ, ಪೂಜೆ ಮಾಡಲು ಬಯಸಿದವರ ಕಿವಿಗೆ ಕಾದ ಸೀಸ ಎರೆಯಬೇಕು, ನಾಲಿಗೆ ಕತ್ತರಿಸಬೇಕು ಎಂಬಂತಹ ಕಠೋರ ನಿಯಮಗಳಿದ್ದವು. ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದ ಮನಸ್ಥಿತಿಯದು. ಶೇ.85ರಷ್ಟಿದ್ದ ಶೋಷಿತ ಸಮುದಾಯಗಳು ಕನಿಷ್ಠ ಮಾನವ ಹಕ್ಕುಗಳಿರದ ನಿತ್ಯನರಕವನ್ನು ಬದುಕಬೇಕಾಗಿತ್ತು. ಇಂತಹ ಸಂದಿಗ್ಧತೆಯಲ್ಲಿರುವಾಗಯೇ ಅಲ್ಲಿಗೆ ಸಂದರ್ಶಿಸಿದ್ದ ಸ್ವಾಮಿ ವಿವೇಕಾನಂದರು ಕೇರಳವನ್ನು ‘ಅದು ಹುಚ್ಚಾಸ್ಪತ್ರೆ!’ ಎಂದಿದ್ದರು.. ಅದೇ ನೆಲದಲ್ಲಿ ಜನ್ಮವೆತ್ತಿ ಸಮರ್ಥ ಸಮಾಜ ಚಿಕಿತ್ಸೆಯಲ್ಲಿ ಒದಗುತ್ತಾ, ಅಲ್ಲಿಯ ಮಾನಸಿಕತೆಯನ್ನು ಸುಧಾರಿಸಿ ‘ದೇವರನಾಡು’ ಎಂದು ಪರಿವರ್ತಿಸಿದ್ದು ಗುರುಗಳ ಸಾಧನೆ. ಅದೇ ಬೆಳಕಲ್ಲಿ ಮುಂದದು ಸಾಕ್ಷರ ನಾಡಾಗಿ, ಕೋಮುಸೌಹಾರ್ಧದ ಬೀಡಾಗಿ ಬದಲಾಗಿರುವುದೂ ಗಮನಾರ್ಹ.

ಎಲ್ಲಾ ನದಿಗಳೂ ಸಮುದ್ರವನ್ನೇ ಸೇರುವಂತೆ ‘ಮಾನವ ಕುಲಕ್ಕೇ ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು’ ಆಶಯದೊಂದಿಗೆ ಸರ್ವಸಮಾನತೆಗೆ ಕರೆಯಿತ್ತರಲ್ಲದೆ ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದರು, ‘ಸಂಘಟನೆಯಿಂದ ಬಲಯುತರಾಗಿರಿ ಮತ್ತು ಶಿಕ್ಷಣದಿಂದ ನಿರ್ಭೀತರಾಗಿರಿ’ ಎಂಬ ಪ್ರೇರಣೆಯೊಂದಿಗೆ ‘ಉದ್ಧಾರೇತಾತ್ಮನಾತ್ಮಾನಂ’ ಗೀತೋಕ್ತಿಯಂತೆ ತನ್ನ ಉದ್ಧಾರ ತನ್ನಿಂದಲೇ ಎಂಬ ದಿವ್ಯಸಂದೇಶ ನೀಡಿದರು.

ಇತಿಹಾಸದಲ್ಲಿಯೇ ಪ್ರಥಮವೆಂಬಂತೆ, ಗುರುಗಳು ಹಲವಾರು ಸರ್ವಧರ್ಮ ಸಮ್ಮೇಳನಗಳನ್ನು ಸಂಘಟಿಸಿ, ಸಹೋದರತ್ವವನ್ನು ಸಾರಿದರು. ಜೀವಿತಾವಧಿಯಲ್ಲಿ ಹಲವಾರು ಶಾಲೆಗಳು, ಆಸ್ಪತ್ರೆಗಳನ್ನೂ ತೆರೆದರು. ಧರ್ಮಪ್ರಸಾರ, ಧರ್ಮಜಾಗೃತಿಗಾಗಿ ಶ್ರೀಲಂಕಾಗೂ ತೆರಳಿದ್ದರು. ದೇವಸ್ಥಾನ ಪ್ರವೇಶಕ್ಕೆ ಚಳುವಳಿ ನಡೆಸದೆ, ಪರ್ಯಾಯವಾದ ಅವರ್ಣೀಯರ ದೇವಾಲಯ ಸ್ಥಾಪಿಸಿದ್ದು ಮಾತ್ರವಲ್ಲ ತಳವರ್ಗಕ್ಕೆ ಸಂಘಟನಾಶಕ್ತಿ ತುಂಬಿದರು. ಆ ಹಾದಿಯಲ್ಲಿ ನೋವುಗಳಿದ್ದವು.. ಆದರೂ ಅವರು ವಿನಯದ ಮಾರ್ಗಬಿಡಲಿಲ್ಲ. ಯಾರೊಂದಿಗೂ ಸಮರ ಸಾರಲಿಲ್ಲ.. ಸಂಘರ್ಷಕ್ಕಿಳಿಯಲಿಲ್ಲ.. ಸಂಧಾನದ, ಸಮನ್ವಯದ ದಾರಿಯಲ್ಲಿ ಯುದ್ಧಹೂಡದೆಯೇ ಎದುರಾಳಿಗಳನ್ನು ಗೆದ್ದಿದ್ದರು.

ಸಹಸ್ರಮಾನಗಳ ಕಾಲ ದೇವಸ್ಥಾನ ಪ್ರವೇಶವಂಚಿತರಾಗಿ ಸೋತು ಬಂದವರನ್ನು ಸಂತೈಸಿ ‘ದೇವರಿದ್ದಲ್ಲಿಗೆ ನಿಮ್ಮನ್ನು ಬಿಡದಿದ್ದರೇನಂತೆ, ನೀವಿದ್ದಲ್ಲಿಗೇ ದೇವರನ್ನು ಕರೆತರುತ್ತೇನೆ..’ ಎಂದು 1888ರಲ್ಲಿ ಅರವೀಪುರಂನಲ್ಲಿ ಅವರ್ಣೀಯರಿಗಾಗಿಯೇ ಶಿವಮಂದಿರವನ್ನು ಸ್ಥಾಪಿಸಿದರು. ವಿಗ್ರಹದ ಹುಡುಕಾಟದಲ್ಲಿದ್ದಾಗ ಪಕ್ಕದ ನದಿಯಲ್ಲಿ ಮುಳುಗಿ ಎದ್ದುಬರುವಾಗ ಕಲ್ಲೊಂದನ್ನು ಹೊತ್ತುತಂದು ‘ಲಿಂಗ’ ಎಂದು ಪ್ರತಿಷ್ಠಾಪಿಸಿದ್ದರು. ತಳಸಮುದಾಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದ್ದು ದೊಡ್ಡ ಮೈಲಿಗಲ್ಲು. ಅವರ ನಿಕಟವರ್ತಿ ಕುಮಾರನ್ ಆಸಾನ್ ಬಣ್ಣಿಸುವಂತೆ ‘ಅದು ಜಾತೀಯತೆಯೆಂಬ ದೈತ್ಯವೃಕ್ಷಕ್ಕೆ ಬಿದ್ದ ಮೊದಲ ಕೊಡಲಿ ಏಟು..’ ಪೂಜೆ ವೈಯಕ್ತಿಕ, ಜಾತಿಭೇಧ, ಮತದ್ವೇಷಗಳಿಲ್ಲದೆ ಸರ್ವರೂ ಸಹೋದರತ್ವದಿ ಆರಾಧಿಸುವ ಕ್ಷೇತ್ರವೆಂದರು.. ನಂತರ ಒಟ್ಟು 45 ದೇಗುಲಗಳನ್ನು ಕೇರಳ, ತಮಿಳುನಾಡು ಮತ್ತು ಮಂಗಳೂರಿನಲ್ಲಿ ಸ್ಥಾಪಿಸಿದರು. ಸರಳ ಬದುಕಿಗೆ, ದೇವಸ್ಥಾನಗಳಲ್ಲಿ ಸ್ವಚ್ಛತೆಗೆ, ಶಾಲೆಗಳಲ್ಲಿ ಗ್ರಂಥಾಲಯಕ್ಕೆ ಆದ್ಯತೆ ನೀಡಿದರು.. ದರ್ಶನಮಾಲಾ, ಆತ್ಮೋಪದೇಶ ಶತಕಂ, ದೈವದಶಕಂ ಮುಂತಾದ ಕೃತಿಗಳ ಮೂಲಕವೂ ಲೋಕಜ್ಞಾನದ ದಾರಿತೋರಿದ್ದರು.

1903ರಲ್ಲಿ ನಾರಾಯಣ ಗುರುಗಳು, ಒಡನಾಡಿಗರಾದ ಡಾ.ಪಲ್ಪು ಮತ್ತು ಕವಿ ಕುಮಾರನ್ ಆಸನ್‍ರೊಂದಿಗೆ ಸೇರಿ ಮುನ್ನಡೆಸಿದ ‘ಶ್ರೀ ನಾರಾಯಣ ಧರ್ಮಪರಿಪಾಲನಾ ಯೋಗಂ’ ಪ್ರತಿರೋಧ ಚಳುವಳಿಯ ಉದ್ದೇಶವೇ ಮನುಷ್ಯ ಘನತೆಯ ಸಮಾಜ ನಿರ್ಮಾಣ ಮಾಡುವುದಾಗಿತ್ತು. ಶೋಷಿತವರ್ಗದ ಸಬಲೀಕರಣಕ್ಕದು ಬದ್ಧವಾಯಿತು. ಹಿಂದೂಧರ್ಮದಲ್ಲಿ ಬೇರೂರಿದ್ದ ಜಾತಿವ್ಯವಸ್ಥೆ ಮತ್ತು ಕಂದಾಚಾರಗಳು ಜನರನ್ನು ಅನ್ಯಧರ್ಮದೆಡೆಗೆ ನೂಕಿದ್ದವು. ಇಂತಹ ಸಂದಿಗ್ಧತೆಯಲ್ಲಿ ಧರ್ಮವನ್ನು ಮರುವ್ಯಾಖ್ಯಾನಿಸಿ, ಲಿಂಗ ಮತ್ತು ಜಾತಿ ಸಮಾನತೆಯನ್ನು ಪ್ರತಿಪಾದಿಸಿತು.

ಶತಮಾನಗಳ ಹಿಂದೆಯೇ, ಸಾಮಾಜಿಕ ಸುಧಾರಣೆಯ ಭಾಗವಾಗಿ, ಸಂಪತ್ತಿನ ಅಸಹ್ಯಕರ ಪ್ರದರ್ಶನಕ್ಕೊಡ್ಡುವ ಅದ್ಧೂರಿ ಮದುವೆಗಳನ್ನು ನಿರಾಕರಿಸಿ ಸರಳವಿವಾಹ ಪದ್ಧತಿಗೆ ಬೆಂಬಲಿಸಿದ್ದರು. ಮದ್ಯವರ್ಜನೆಗೆ ಮನವೊಲಿಸಿ, ಹೆಂಡಮಾರುವ ಈಳವರಿಗೆ ಪರ್ಯಾಯ ಉದ್ಯೋಗವಾಗಿ ನಾರಿನೋದ್ಯಮದಂತಹ ಗುಡಿಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು. ಕುಟುಂಬದ ಸ್ವಾಸ್ಥ್ಯ ಮತ್ತು ಸಾಮಾಜಿಕ ಚೇತರಿಕೆಗಾಗಿ ಕೆಳವರ್ಗದ ಮನಪರಿವರ್ತನೆಗೆ ಹಂಬಲಿಸಿದರು.

ಆರ್ಥಿಕ ಅಸಮಾನತೆಯೂ ಕ್ರೂರವಾಗಿತ್ತು, ಕೆಲವೇ ಬಲಾಢ್ಯರ ಪಾಲಾದ ಭೂ-ಒಡೆತನವು ಭೂರಹಿತರನ್ನು ಶೋಷಿಸುವುದು, ಅವರನ್ನು ಮತದಾನ ಇನ್ನಿತರ ಹಕ್ಕುಗಳಿಂದ ಹೊರಗಿಡುವುದು, ಬೆಳೆದಿದ್ದರ ಬಹುಪಾಲು ಕಂದಾಯವನ್ನಾಗಿ ವಸೂಲಿ ಮಾಡಿ ಬಡಜನರನ್ನು ಖಾಯಂ ಜೀತಕ್ಕೆ ನೂಕುವುದು.. ಮುಂತಾದವುಗಳ ವಿರುದ್ಧ ತಳೆದ ಸ್ಪಷ್ಟ ನಿಲುವುಗಳಲ್ಲಿ ಅವರೊಬ್ಬ ವೈಜ್ಞಾನಿಕ ಸಮಾಜವಾದದ ಪ್ರತಿಪಾದಕರಾಗಿಯೂ ಕಂಡರು.

ಘನಉದ್ದೇಶದೊಂದಿಗೇ ಜನ್ಮವೆತ್ತಿದವರಂತಿದ್ದ ಗುರುಗಳು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಚಳುವಳಿಗಳನ್ನು ಬಲವಾಗಿ ಸಂಘಟಿಸುವಾಗ ಅವರದ್ದು ಮೂವತ್ತೆರಡರ ಹರೆಯ!. ವಿಶ್ವಗುರು ರವೀಂದ್ರರು ‘ನಾನು ಹಲವಾರು ದೇಶಗಳನ್ನು ಸುತ್ತಿ ಬಂದಿದ್ದೇನೆ, ಅಸಂಖ್ಯ ದಾರ್ಶನಿಕರನ್ನು ಭೇಟಿಯಾಗಿದ್ದೇನೆ, ಆದರೆ ನಾರಾಯಣಗುರುಗಳಂತಹ ಜ್ಞಾನಸಂಪನ್ನನನ್ನು, ಆಧ್ಯಾತ್ಮಿಕ ಔನ್ನತ್ಯ ಪಡೆದ ವಿಭೂತಿ ಪುರುಷರನ್ನೂ ನಾನು ಈವರೆಗೂ ಕಂಡಿಲ್ಲ..’ ಎಂದರೆ, 1925ರಲ್ಲಿ ಗುರುಗಳನ್ನು ಭೇಟಿ ಮಾಡಿದ ಗಾಂಧೀಜಿಯವರು ‘ಗುರುಗಳನ್ನು ಸಂದರ್ಶಿಸಿದ್ದು ತಮ್ಮ ಸುದೈವ.. ಅವರಿಂದ ಬಹಳಷ್ಟು ಕಲಿತಿದ್ದೇನೆ’ ಎಂದಿದ್ದರು. ಲೋಕದ ಅಗತ್ಯಗಳೇನೆಂಬುದರ ಬಗ್ಗೆ ಅವರಿಗಿದ್ದ ದೂರದೃಷ್ಟಿತ್ವಗಳು ಎಂದಿಗೂ ಅನುಕರಣನೀಯ. ವಿಪರ್ಯಾಸವೆಂದರೆ, ನಾವೆಲ್ಲರೂ ಗುರುಗಳ ಆದರ್ಶಗಳನ್ನು ವಿಚಾರವಾಗಿ ಎದೆಯಲ್ಲಿಟ್ಟುಕೊಳ್ಳುವ ಬದಲು ಅವರನ್ನು ಗುಡಿಕಟ್ಟಿ ಕೂಡಿಹಾಕಿರುವುದು!!. ಜೀವಪರವಾಗಿ ಬದುಕು ಸವೆಸಿದ ದಾರ್ಶನಿಕರನ್ನೆಲ್ಲಾ ಜಾತಿ-ಧರ್ಮಗಳ ಸಂಕೋಲೆಯಿಂದ ಬಿಡಿಸಿ ಅವರು ಚೆಲ್ಲಿದ ಬೆಳಕಲ್ಲಿ ನಾವೀಗ ಸಾಗಬೇಕಿದೆ. ನಮ್ಮನ್ನೆಲ್ಲಾ ಕಾಯಬೇಕಿರುವುದು ದ್ವೇಷ-ರೋಷಗಳಲ್ಲ, ಸ್ವಾರ್ಥ-ಸಂಕುಚಿತತೆಯಲ್ಲ.. ಮನುಷ್ಯಪ್ರೀತಿ, ಸಹಕಾರ ಮತ್ತು ಸೌಹಾರ್ಧತೆಗಳು.

ರಾಷ್ಟ್ರದ ಸಮಗ್ರತೆಗೆ ಮತ್ತು ಉನ್ನತಿಗೆ ಗುರುಗಳು ನೀಡಿದ ರಚನಾತ್ಮಕ ಮತ್ತು ಸಮನ್ವಯದ ಮಾರ್ಗವು ಈಗಲೂ ತೋರುಗಂಬವಾಗಿ ಉಳಿದಿದೆ. ಅವರ ನಮ್ರತೆಯ ಬದುಕು, ಸಾಮಾಜಿಕ ಕಳಕಳಿ, ಸಹಬಾಳ್ವೆಯ ಅರಿವು, ವಾಸ್ತವ ಪ್ರಜ್ಞೆ, ಅಭಿವೃದ್ಧಿಯ ಆಶಯಗಳು ಆದರ್ಶ ಸಮಾಜದ ದಿಕ್ಸೂಚಿಗಳಂತಿವೆ. ಮತ್ತೆಮತ್ತೆ ಕಾಡುವ, ಪ್ರಚೋದಿಸುವ, ವಿಕಸಿಸುವ ಅಂತಹ ಜ್ಞಾನಮಾರ್ಗದಲ್ಲಿ ಇಂದಿನ ಸಮಾಜ ಹೆಜ್ಜೆಹಾಕಬೇಕಾದ ತುರ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.