ADVERTISEMENT

ಸ್ಟಾಲಿನ್‍ ಅಪ್ಪನ ನೆರಳಿನ ಶ್ರೀರಕ್ಷೆ ಮತ್ತು ಸವಾಲು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 19:30 IST
Last Updated 1 ಸೆಪ್ಟೆಂಬರ್ 2018, 19:30 IST
   

ತಿರುವರೂರಿನಲ್ಲಿ ಹಿಂದಿ ವಿರೋಧಿ ಚಳವಳಿಯ ನೇತೃತ್ವ ವಹಿಸಿ ಮುತ್ತುವೇಲು ಕರುಣಾನಿಧಿ ಬೀದಿಗಿಳಿದದ್ದು 1938ರಲ್ಲಿ. ಆಗ ಅವರಿಗೆ 14 ವರ್ಷ ವಯಸ್ಸು. ತಮಿಳುನಾಡು ವಿಧಾನಸಭೆಗೆ 1967ರಲ್ಲಿ ಚುನಾವಣೆ ನಡೆದಾಗ ಶಾಲಾ ಬಾಲಕನಾಗಿದ್ದ ಎಂ.ಕೆ. ಸ್ಟಾಲಿನ್‍ ಡಿಎಂಕೆ ಪರವಾಗಿ ಪ್ರಚಾರ ನಡೆಸುವ ಮೂಲಕ ರಾಜಕೀಯಕ್ಕೆ ಇಳಿದರು. ಆಗ ಈ ಹುಡುಗನ ವಯಸ್ಸು 14 ವರ್ಷ. ಕರುಣಾನಿಧಿ ಭಾಗಿಯಾದ ಹಿಂದಿ ಅಭಿಯಾನವು ತಮಿಳುನಾಡಿನ ರಾಜಕಾರಣದ ದಿಕ್ಕನ್ನೇ ಬದಲಿಸಿತು. ಸ್ಟಾಲಿನ್‍ ಪ್ರಚಾರಕ್ಕೆ ಇಳಿದ ಆ ಚುನಾವಣೆ ಕಾಂಗ್ರೆಸ್‍ ಪಕ್ಷವನ್ನು ತಮಿಳುನಾಡಿನ ಅಧಿಕಾರದಿಂದ ಶಾಶ್ವತವಾಗಿ ಕೆಳಗಿಳಿಸಿತು.

ಅಪ್ಪ ಕರುಣಾನಿಧಿ ಮತ್ತು ಮಗ ಸ್ಟಾಲಿನ್‍ ನಡುವಣ ಸಾಮ್ಯ ಇಲ್ಲಿಗೆ ಕೊನೆಯಾಗುತ್ತದೆ. ಸಿನಿಮಾ ಚಿತ್ರಕತೆಗಾರನಾಗಿ, ಸಾಹಿತಿಯಾಗಿ ಕರುಣಾನಿಧಿ ತಾರಾಪಟ್ಟಕ್ಕೆ ಏರಿದವರು. ಸುದೀರ್ಘ 49 ವರ್ಷ ಕಾಲ ಡಿಎಂಕೆಯ ಅಧ್ಯಕ್ಷರಾಗಿ ಪ್ರಶ್ನಾತೀತ ನಾಯಕರಾಗಿದ್ದವರು. ಎಲ್ಲರ ಅಭಿಪ್ರಾಯಗಳನ್ನೂ ಕೇಳುವ ಸಹಮತದ ರಾಜಕಾರಣ ಕರುಣಾನಿಧಿಯವರ ಶೈಲಿಯಾಗಿತ್ತು. ಅವರು ಜೀವಿಸಿದ್ದಾಗ ಇಡೀ ರಾಜ್ಯ ಅವರ ಮಾತಿನ ಸಮ್ಮೋಹಿನಿಗೆ ಒಳಗಾಗಿತ್ತು.

13 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕರುಣಾನಿಧಿ ಒಂದು ಚುನಾವಣೆಯಲ್ಲಿಯೂ ಸೋತವರಲ್ಲ. ಆದರೆ, ವಿಧಾನಸಭೆ ಪ್ರವೇಶಿಸುವ ಸ್ಟಾಲಿನ್‍ ಅವರ ಮೊದಲ ಪ್ರಯತ್ನವೇ ವಿಫಲವಾಗಿತ್ತು. ಆರು ಬಾರಿ ಶಾಸಕರಾಗಿರುವ ಅವರು ಎರಡು ಬಾರಿ ಸೋತಿದ್ದಾರೆ.

ADVERTISEMENT

ಕರುಣಾನಿಧಿ ಮರಣದ ಬಳಿಕ ಪಕ್ಷದ ಎರಡನೇ ಅಧ್ಯಕ್ಷರಾಗಿ ಸ್ಟಾಲಿನ್‍ ಅಧಿಕಾರ ವಹಿಸಿಕೊಂಡಿದ್ದಾರೆ. ಕರುಣಾನಿಧಿಯವರಿಗೆ ಇದ್ದ ಪ್ರಭಾವ ವಲಯ ಸ್ಟಾಲಿನ್‍ಗೆ ಇಲ್ಲ. ಎರಡು ಸಿನಿಮಾಗಳಲ್ಲಿ ನಾಯಕ ನಟನಾಗಿ ಮತ್ತು ಎರಡು ಧಾರಾವಾಹಿಗಳಲ್ಲಿ ನಟಿಸಿರುವ ಸ್ಟಾಲಿನ್‍ಗೆ ಆ ಕ್ಷೇತ್ರದಲ್ಲಿ ಯಶಸ್ಸು ದಕ್ಕಿಲ್ಲ. ಕರುಣಾನಿಧಿಯವರ ತೀವ್ರ ಅನಾರೋಗ್ಯದಿಂದಾಗಿ ಡಿಎಂಕೆಯ ಕಾರ್ಯಾಧ್ಯಕ್ಷನಾಗಿ ಪಕ್ಷದ ನೇತೃತ್ವ ವಹಿಸಿಕೊಂಡರೂ ಚುನಾವಣಾ ರಾಜಕಾರಣದಲ್ಲಿ ದೊಡ್ಡ ಯಶಸ್ಸು ಸಿಕ್ಕಿಲ್ಲ. 2014ರ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಕರುಣಾನಿಧಿ ಬಹುತೇಕ ನೇಪಥ್ಯಕ್ಕೆ ಸರಿದಿದ್ದರು. ಆಗ ಪ್ರಚಾರದ ನೊಗ ಹೊತ್ತವರು ಸ್ಟಾಲಿನ್‍. ಆ ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗಿಲ್ಲ. 2016ರ ವಿಧಾನಸಭೆ ಚುನಾವಣೆಗೆ ಮೊದಲು ಸೈಕಲ್‍ ಏರಿದ ಸ್ಟಾಲಿನ್‍, ಪ್ರತಿ ವಿಧಾನಸಭಾ ಕ್ಷೇತ್ರದ ಮೂಲೆ ಮೂಲೆಗೂ ಹೋಗಿ ಮತ ಕೇಳಿದ್ದರು. ಆದರೆ, ಈ ಚುನಾವಣೆಯಲ್ಲಿಯೂ ಪಕ್ಷವನ್ನು ಅಧಿಕಾರಕ್ಕೆ ತರಲು ಅವರು ಶಕ್ತರಾಗಲಿಲ್ಲ.

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನದಿಂದ ತೆರವಾದ ಆರ್‍.ಕೆ. ನಗರ ಸೇರಿ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿಯೂ ಡಿಎಂಕೆ ಪರಾಭವಗೊಂಡಿದೆ. ಪ್ರತಿಷ್ಠಿತ ಆರ್‍.ಕೆ. ನಗರದಲ್ಲಿ ಪಕ್ಷದ ಅಭ್ಯರ್ಥಿಗೆ ಠೇವಣಿಯೂ ದಕ್ಕಲಿಲ್ಲ. ಇಂತಹ ಸಂದರ್ಭದಲ್ಲಿ ಸ್ಟಾಲಿನ್‍ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಪಕ್ಷದಲ್ಲಿ ಮತ್ತು ಕುಟುಂಬದೊಳಗೆ ಅವರು ಪ್ರಶ್ನಾತೀತ ನಾಯಕ ಎಂಬುದು ಅವರಿಗೆ ಇರುವ ದೊಡ್ಡ ಅನುಕೂಲ. ‘ಕರುಣಾನಿಧಿ ಅವರು ಏಕಾಂಗಿಯಾಗಿ ಪಕ್ಷವನ್ನು ಗೆಲ್ಲಿಸುತ್ತಿದ್ದರು. ಆ ಸಾಮರ್ಥ್ಯ ಸ್ಟಾಲಿನ್‍ಗೆ ಇಲ್ಲ’ ಎಂದು ಅವರ ಅಣ್ಣ ಎಂ.ಕೆ. ಅಳಗಿರಿ ಹೇಳಿದ್ದರು. ಕರುಣಾನಿಧಿಯವರ ಸ್ಥಾನದಲ್ಲಿ ಬೇರೆಯವರನ್ನು ನೋಡಲು ಸಾಧ್ಯವೇ ಇಲ್ಲ ಎಂದೂ ಅಳಗಿರಿ ಹೇಳಿಕೆ ಕೊಟ್ಟಿದ್ದರು. ಆದರೆ ಸ್ಟಾಲಿನ್‍ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅಳಗಿರಿ ಶರಣಾಗಿದ್ದಾರೆ. 2014ರಲ್ಲಿ ಪಕ್ಷದಿಂದ ಉಚ್ಚಾಟನೆಗೊಂಡ ತಮ್ಮನ್ನು ಮರಳಿ ಸೇರಿಸಿಕೊಂಡರೆ ಸ್ಟಾಲಿನ್‍ ನಾಯಕತ್ವವನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ.

ಸಹೋದರಿ ಕನಿಮೊಳಿ ಡಿಎಂಕೆ ಮಹಿಳಾ ಘಟಕದ ಅಧ್ಯಕ್ಷೆ. ಸಾಕಷ್ಟು ಜನಪ್ರಿಯತೆ ಇರುವ ಕನಿಮೊಳಿ ಮಾಧ್ಯಮಕ್ಕೂ ಅಚ್ಚುಮೆಚ್ಚು. ಅವರೂ ಸ್ಟಾಲಿನ್‍ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದಾರೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದ್ದು, ಸುದೀರ್ಘ ಕಾಲ ಮರೆಯಲ್ಲಿಯೇ ಉಳಿದು ರಾಜಕಾರಣದ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವುದು ಸ್ಟಾಲಿನ್‍ ಅವರಿಗೆ ನೆರವಾಗಲಿದೆ.

1973ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಪಕ್ಷದ ಸಾಮಾನ್ಯ ಸಮಿತಿಗೆ ಆಯ್ಕೆಯಾದ ಸ್ಟಾಲಿನ್‍, ಅಲ್ಲಿಂದ ಇಲ್ಲಿತನಕ ಪಕ್ಷದ ನಿಷ್ಠಾವಂತ ಕಾರ್ಯಕರ್ತ. 1984ರಲ್ಲಿ ಡಿಎಂಕೆಯ ಯುವ ವಿಭಾಗ ಸ್ಥಾಪಿಸಿದ ಅವರು ಸುಮಾರು ನಾಲ್ಕು ದಶಕ ಈ ವಿಭಾಗದ ಅಧ್ಯಕ್ಷ ಹುದ್ದೆಯಲ್ಲಿದ್ದರು. 1996ರಲ್ಲಿ ಚೆನ್ನೈ ಮೇಯರ್‍ ಆಗಿ ಆಯ್ಕೆಯಾದರು. ಉತ್ತಮ ಆಡಳಿತಗಾರ ಎಂಬ ಹೆಸರನ್ನು ಈ ಹುದ್ದೆ ಅವರಿಗೆ ತಂದುಕೊಟ್ಟಿತು. ‘ಸಿಂಗಾರ ಚೆನ್ನೈ’ ಎಂಬ ಯೋಜನೆ ಅಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಅವರು ಜಾರಿಗೆ ತಂದಿದ್ದರು. ಮಹಾನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ ಹಲವು ಫ್ಲೈಓವರ್‍ಗಳ ನಿರ್ಮಾಣವೂ ಈಸಂದರ್ಭದಲ್ಲಿ ಆಯಿತು. ಆದರೆ, ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಜಯಲಲಿತಾ ನೇತೃತ್ವದ ಸರ್ಕಾರ ಸ್ಟಾಲಿನ್‍ ಅವರನ್ನು ಜೈಲಿಗೆ ತಳ್ಳಿತ್ತು. ಬಳಿಕ, ಈ ಆರೋಪಕ್ಕೆ ಪುರಾವೆ ಇಲ್ಲ ಎಂದು ಅವರು ಖುಲಾಸೆಗೊಂಡರು.1989ರಲ್ಲಿ ಚೆನ್ನೈನ ಥೌಸಂಡ್‍ ಲೈಟ್ಸ್ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. 2006ರಲ್ಲಿ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿ ನೇಮಕವಾದರು. 2009ರಿಂದ 2011ರವರೆಗೆ ತಮಿಳುನಾಡಿನ ಮೊದಲ ಉಪಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದರು.

ಗ್ರಾಮೀಣಾಭಿವೃದ‍್ಧಿ ಸಚಿವರಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ ಎಂಬ ಹೆಗ್ಗಳಿಕೆ ಅವರಿಗಿದೆ. ರಾಜ್ಯದಾದ್ಯಂತ ಸ್ವಸಹಾಯ ಗುಂಪುಗಳನ್ನು ಕಟ್ಟಿ ಅವುಗಳನ್ನು ಬಲಪಡಿಸಲು ಅವರು ಸಾಕಷ್ಟು ಶ್ರಮಿಸಿದ್ದಾರೆ. ವೇದಿಕೆಯಲ್ಲಿ ಗಂಟೆಗಟ್ಟಲೆ ನಿಂತು ಇಂತಹ ಗುಂಪುಗಳಿಗೆ ಸರ್ಕಾರದ ಸಹಾಯಧನದ ಚೆಕ್‍ಗಳನ್ನು ಅವರು ವಿತರಿಸಿದ್ದಾರೆ.

ತಂದೆಯ ಸ್ಥಾನವನ್ನು ತಾವು ತುಂಬುವುದು ಕಷ್ಟ. ಅವರಂತೆ ಮಾತನಾಡುವುದಕ್ಕೂ ಬಾರದು ಎಂದು ಅಧಿಕಾರ ಸ್ವೀಕಾರ ಸಮಾರಂಭದಲ್ಲಿಯೇ ಸ್ಟಾಲಿನ್‍ ಹೇಳಿದ್ದಾರೆ. ಆರೇಳು ದಶಕ ಕಾಲ ತಮಿಳುನಾಡು ರಾಜಕಾರಣವನ್ನು ಆವರಿಸಿದ್ದ ತಂದೆಯ ನೆರಳಿನಿಂದ ಹೊರಬರುವುದು ಮಗನಿಗೆ ಬಹಳ ಕಷ್ಟವಿದೆ. ತಂದೆಯ ನೆರಳಿನಲ್ಲಿಯೇ ಇರುವುದು ಅವರಿಗೆ ರಾಜಕೀಯವಾಗಿ ಹೆಚ್ಚು ಲಾಭಕರ ಕೂಡ.

ಆದರೆ, ತಮ್ಮ ರಾಜಕಾರಣ ಭಿನ್ನವಾಗಿರಲಿದೆ ಎಂದು ಸ್ಟಾಲಿನ್‍ಸ್ಪಷ್ಟವಾಗಿಯೇ ಹೇಳಿದ್ದಾರೆ. ಮಾರ್ಚ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ‘ಪಕ್ಷ ಬೆಳೆಯಬೇಕಿದ್ದರೆ ನನ್ನ ಸರ್ವಾಧಿಕಾರಿ ರೀತಿಗಳೊಂದಿಗೆ ನೀವು ಹೊಂದಿಕೊಳ್ಳಲೇಬೇಕಾಗುತ್ತದೆ. ಅಶಿಸ್ತು ಮತ್ತು ಪಕ್ಷವಿರೋಧಿ ಚಟುವಟಿಕೆಗಳನ್ನು ಸಹಿಸುವುದೇ ಇಲ್ಲ’ ಎಂದು ಅವರು ಹೇಳಿದ್ದರು. ಪಕ್ಷದೊಳಗೆ ಅವರಿಗೆ ಸವಾಲುಗಳಿಲ್ಲ. ಆದರೆ, ರಾಜ್ಯದ ಮತ್ತು ಹೊರಗಿನ ಜನರ ಮುಂದೆ, ತಾವು ಚುನಾ
ವಣೆ ಗೆಲ್ಲಬಲ್ಲ ನಾಯಕ ಎಂಬುದನ್ನು ಅವರು ಸಾಬೀತು ಮಾಡಲೇ ಬೇಕಿದೆ. ಸರಿಯಾದ ಮೈತ್ರಿ ಪಕ್ಷಗಳ ಆಯ್ಕೆ ಮತ್ತು ಸಮರ್ಥ ಅಭ್ಯರ್ಥಿಗಳನ್ನು ಗುರುತಿಸುವ ಅಗ್ನಿಪರೀಕ್ಷೆ ಅವರ ಮುಂದಿದೆ. 2019ರ ಲೋಕಸಭಾ ಚುನಾವಣೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಅವರಿಗೆ ಈ ಅವಕಾಶ ಕೊಡಲಿದೆ.

ಹಲವು ದಶಕಳಿಂದ ರಾಜ್ಯದ ರಾಜಕಾರಣವನ್ನು ತಳಮಟ್ಟದಿಂದ ಬಲ್ಲ ಸ್ಟಾಲಿನ್‍ಗೆ ಇದು ಕಷ್ಟವಲ್ಲ. ಕಾರ್ಯಕರ್ತರಲ್ಲಿ ಸ್ಟಾಲಿನ್‍ ಬಗ್ಗೆ ಅಪಾರವಾದ ಅಭಿಮಾನವೂ ಇದೆ. 2016ರಲ್ಲಿ ಅವರು ನಡೆಸಿದ ‘ನಮಗಾಗಿ ನಾವು’ ಅಭಿಯಾನ ಚುನಾವಣೆ ಗೆಲ್ಲಿಸಿಕೊಡದಿದ್ದರೂ ಸಂಚಲನ ಸೃಷ್ಟಿಸಿತ್ತು. ಡಿಎಂಕೆಯ ಸಾಂಪ್ರದಾಯಿಕ ಮತದಾರರಲ್ಲದ ಯುವ ಜನರನ್ನೂ ಆಕರ್ಷಿಸಿತ್ತು.

ಸದಾ ತಂದೆಯ ಬೆನ್ನ ಹಿಂದೆಯೇ ಇದ್ದ ಕಾರಣಕ್ಕಾಗಿಯೋ ಏನೋ ಸ್ಟಾಲಿನ್‍ ಮಾತನಾಡಿದ್ದು ಕಡಿಮೆ. ಹೆಚ್ಚು ಮಾತನಾಡಲು ಅವರಿಗೆ ಹಿಂಜರಿಕೆ. ಕಾರ್ಯಕರ್ತರನ್ನು ಕೂಡ ಅವರು ಮೋಡಿ ಮಾಡಿದ್ದು ಕೆಲಸದ ಮೂಲಕವೇ ಹೊರತು ಮಾತಿನಿಂದಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಕುಳಿತ ಮೇಲೆ ಮಾತಿನ ಜಿಪುಣತನ ಸಾಧ್ಯವಿಲ್ಲ.

ಅಳೆದು ತೂಗಿ ಆಡುವ ಮಾತುಗಳು, ಅತಿ ಸಂಯಮದ ನಡವಳಿಕೆ, ಆಡಂಬರವೇ ಇಲ್ಲದ ವ್ಯಕ್ತಿತ್ವ ಸ್ಟಾಲಿನ್ ಅವರ ಶಕ್ತಿ ಹೇಗೆಯೋ ಹಾಗೆಯೇ ದೌರ್ಬಲ್ಯವೂ ಹೌದು. ತಂದೆಯ ಹಾಗೆ ಮುಕ್ತ ಮತ್ತು ಪಾರದರ್ಶಕ ರಾಜಕಾರಣ ಸ್ಟಾಲಿನ್‍ಗೆ ಸಾಧ್ಯವಿಲ್ಲ. ಆದರೆ, ಅವರ ಅಸಂಬದ್ಧವಿಲ್ಲದ ದೃಢತೆ, ಸುಲಭಕ್ಕೆ ರಾಜಿಯಾಗದ ಮನೋಭಾವ ಆಡಳಿತದಲ್ಲಿ ತಂದೆಯನ್ನು ಮೀರಿಸುವ ಯಶಸ್ಸನ್ನು ತಂದುಕೊಡಬಲ್ಲುದು.

ಸ್ಟಾಲಿನ್‍ ಏನನ್ನಾದರೂ ಸಾಧಿಸಿ ತೋರಿಸುವ ತನಕ ಮಗನನ್ನು ಅಪ್ಪನಿಗೆ ಹೋಲಿಸುವುದು ನಿಲ್ಲುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.