ಪ್ರಣಯದ ಕೇಳಿ ಯಾವುದೋ ಜೋಗುಳದ ಹಾಡು ಯಾವುದೋ ಪಿಟೀಲು ನುಡಿಸುತ್ತಿರುವಂತೆ ಒಂದೇ ಸಮನೆ ಕೊಕ್ಕರೆಗಳ ಕೂಗಿನ ಸದ್ದೇ ಸದ್ದು. ಗದ್ದೆಯಲ್ಲಿ ಸಸಿ ನಾಟಿಗೆ ನಿಂತ ಆಳುಗಳಂತೆ ಕೆರೆ ಪಕ್ಕದ ಕೆಸರಿನಲ್ಲಿ ಸಾಲು ಸಾಲಾಗಿ ಕೀಟ ಭಕ್ಷಿಸುತ್ತಾ ಹೊರಟ ತಂಡ ಒಂದೆಡೆಯಾದರೆ, ನಡುಗಡ್ಡೆಯಲ್ಲಿ ಒಣಗಿ ನಿಂತ ಮರದ ಮೇಲೆ ಧ್ಯಾನಕ್ಕೆ ಕುಳಿತ ತಂಡ ಇನ್ನೊಂದೆಡೆ!ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಅತ್ತಿವೇರಿ ಪಕ್ಷಿಧಾಮದಲ್ಲಿ ಈಗ ಅದೆಂತಹ ಸಡಗರ ಅಂತೀರಿ. ಅಲ್ಲೀಗ ಕಪ್ಪುತಲೆಯ ಕೊಕ್ಕರೆಗಳು ಕಿಕ್ಕಿರಿದು ತುಂಬಿವೆ. ನಡುಗಡ್ಡೆಯ ಗಿಡಮರಗಳ ಟೊಂಗೆಗಳೆಲ್ಲ ಮಹಾನಗರದ ಅಪಾರ್ಟ್ಮೆಂಟ್ನ ಮನೆಗಳಂತೆ ತುಂಬಿ ತುಳುತ್ತಿದ್ದು, ತಡವಾಗಿ ಬಂದವುಗಳ ಮಧುಚಂದ್ರ, ಮೊದಲೇ ಬಂದವುಗಳ ಬಾಣಂತನ ಒಟ್ಟೊಟ್ಟಿಗೆ ಚಾಲ್ತಿಯಲ್ಲಿವೆ. ಇಲ್ಲಿನ ಚಳಿಗಾಲ ಅವುಗಳಿಗೆ ಹಿತವಾದ ಅನುಭವ ನೀಡುತ್ತಿರುವಂತೆ ಕಾಣುತ್ತದೆ.ಸಂತೆಯಲ್ಲಿ ಮಾತಿಗೆ ಸಿಕ್ಕವರಂತೆ, ಎದುರಿಗೆ ಸಿಕ್ಕವುಗಳೊಂದಿಗೆ ಏನೇನೋ ಗಿಜ ಗಿಜ, ಪಿಚ ಪಿಚ ಮಾತನಾಡಿಕೊಂಡು ಆ ಬಾನಾಡಿಗಳು ಸ್ವಚ್ಛಂದವಾಗಿ ಹಾರಾಡುತ್ತಿದ್ದರೆ ಕಣ್ಣಿಗೆ ಹಬ್ಬವೇ ಹಬ್ಬ. ಹಾಗೆಯೇ ಕೊಕ್ಕರೆಗಳ ಅಕ್ಕರೆಯ ಬಾಳ್ವೆ ನಮಗೂ ಏನೋ ಪಾಠ ಹೇಳಿದಂತೆ ಭಾಸವಾಗುತ್ತದೆ.-ಚಿತ್ರಗಳು–ಟಿಪ್ಪಣಿ: ತಾಜುದ್ದೀನ್ ಆಜಾದ್