ADVERTISEMENT

ದುಬೈ ಮಾರುಕಟ್ಟೆಗೆ ಧೋನಿ ತೋಟದಲ್ಲಿ ಬೆಳೆದ ಹಣ್ಣು, ತರಕಾರಿ 

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 9:32 IST
Last Updated 4 ಜನವರಿ 2021, 9:32 IST
ಪತ್ನಿ ಸಾಕ್ಷಿ ಜೊತೆ ಮಹೇಂದ್ರ ಸಿಂಗ್ ಧೋನಿ
ಪತ್ನಿ ಸಾಕ್ಷಿ ಜೊತೆ ಮಹೇಂದ್ರ ಸಿಂಗ್ ಧೋನಿ   

ರಾಂಚಿ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಯಾವಾಗಲೂ ಟ್ರೆಂಡ್ ಸೆಟ್ಟಿಂಗ್ ಸೆಲೆಬ್ರಿಟಿ. ಬ್ಯಾಟಿಂಗ್ ಶೈಲಿ, ಕೂದಲಿನ ಶೈಲಿ ಇನ್ನೂ ಮುಂತಾದ ವಿಷಯಗಳಿಂದ ಅವರು ಗಮನ ಸೆಳೆದಿದ್ದಾರೆ. 16 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ ಬಳಿಕ ಅವರು ಕೆಲ ಸಾಂಪ್ರದಾಯಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಕೃಷಿ ಕೂಡ ಒಂದು.

ತವರು ರಾಂಚಿಯ ತಮ್ಮ 43 ಎಕರೆ ತೋಟದ ಪೈಕಿ 10 ಎಕರೆಯಲ್ಲಿ ಸಾವಯವ ಹಣ್ಣು ಮತ್ತು ತರಕಾರಿ ಕೃಷಿ ಆರಂಭಿಸಿದ್ಧಾರೆ. ರಾಂಚಿ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಕೋಸು, ಟೊಮೆಟೋ, ಸ್ಟ್ರಾಬೆರಿ ಹೀಗೆ ಹತ್ತು ಹಲವು ಹಣ್ಣು, ತರಕಾರಿ ಬೆಳೆಯಲು ಶುರು ಮಾಡಿದ್ದಾರೆ. ಅಂದಹಾಗೆ, ಧೋನಿ ಇದೇ ತರಕಾರಿಗಳನ್ನು ದುಬೈ ಮಾರುಕಟ್ಟೆಯಲ್ಲಿ ಮಾರಲು ಸಿದ್ಧತೆ ನಡೆಸಿದ್ದಾರೆ ಎಂಬ ವರದಿ ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಧೋನಿ ಬೆಳೆದ ತರಕಾರಿ ದುಬೈ ಪೇಟೆ ಪ್ರವೇಶಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ.

ಗಲ್ಫ್ ದೇಶಗಳಿಗೆ ಭಾರತದ ಹಣ್ಣು ತರಕಾರಿ ಸರಬರಾಜು ಮಾಡುವ ಹೊಣೆ ಹೊತ್ತಿರುವ ಏಜೆನ್ಸಿಯೊಂದು ಧೋನಿ ತೋಟದಲ್ಲಿ ಬೆಳೆದ ಹಣ್ಣು, ತರಕಾರಿಗಳನ್ನು ದುಬೈ ಮಾರುಕಟ್ಟೆಗೆ ಕೊಂಡೊಯ್ಯಲಿದೆ. ರಾಂಚಿಯಲ್ಲಿ ಬೆಳೆಯುವ ಸಾವಯವ ಹಣ್ಣು, ತರಕಾರಿಯನ್ನು ದುಬೈಗೆ ತಲುಪಿಸುವ ಜವಾಬ್ದಾರಿಯನ್ನು ಜಾರ್ಖಂಡ್ ಕೃಷಿ ಇಲಾಖೆ ವಹಿಸಿಕೊಂಡಿರುವುದಾಗಿ ವರದಿಯಾಗಿದೆ.

ADVERTISEMENT

ಐಪಿಎಲ್ ಸರಣಿಯಲ್ಲಿ ಆಡಿದ ಬಳಿಕ ಧೋನಿ ಸದ್ಯ ಕುಟುಂಬದ ಜೊತೆ ದುಬೈನಲ್ಲಿ ಪ್ರವಾಸದಲ್ಲಿದ್ದಾರೆ. ಈ ಮಧ್ಯೆ, ದುಬೈಗೆ ಹನಿಮೂನ್‌ಗೆ ತೆರಳಿರುವ ಕ್ರಿಕೆಟಿಗ ಚಹಾಲ್ ಮತ್ತು ಧನಶ್ರೀ ವರ್ಮಾ ದಂಪತಿಗೆ ಧೋನಿ ಔತಣಕೂಟವನ್ನು ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.