ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ.
ಸಹಜವಾಗಿಯೇ ಇದರಿಂದ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಕೊನೆಯ ಐಪಿಎಲ್ ಪಂದ್ಯವನ್ನು ಆಡುತ್ತಿದ್ದಾರೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಇದಕ್ಕೆ ಟಾಸ್ ವೇಳೆಯಲ್ಲಿ ಧೋನಿ ತಮ್ಮದೇ ಶೈಲಿಯಲ್ಲಿ ಸ್ಪಷ್ಟನೆ ನೀಡಿದ್ದು, ಮುಂದಿನ ವರ್ಷವೂ ಆಡುವುದಾಗಿ ಖಚಿತಪಡಿಸಿದ್ದಾರೆ.
ಮುಂದಿನ ವರ್ಷವೂ ಅಭಿಮಾನಿಗಳಿಗೆ ಸಿಎಸ್ಕೆ ಸಮವಸ್ತ್ರದಲ್ಲಿ ನೋಡಲು ಸಾಧ್ಯವೇ ಎಂದು ಕೇಳಿದಾಗ 'ಖಂಡಿತವಾಗಿಯೂ' ಎಂದು ಧೋನಿ ಉತ್ತರಿಸಿದ್ದಾರೆ.
'ಇದಕ್ಕೆ ಸುಲಭ ಕಾರಣ ಏನೆಂದರೆ, ಚೆನ್ನೈನಲ್ಲಿ ಆಡದಿರುವಮೂಲಕ ಧನ್ಯವಾದ ಹೇಳುವುದು ಸರಿಯಲ್ಲ. ಓರ್ವ ಆಟಗಾರನಾಗಿ ಮುಂಬೈನಲ್ಲೂ ತುಂಬಾ ಪ್ರೀತಿ ಹಾಗೂ ವಿಶ್ವಾಸಗಿಟ್ಟಿಸಿದ್ದೇನೆ. ಆದರೆ ಚೆನ್ನೈ ಅಭಿಮಾನಿಗಳ ಪಾಲಿಗೆ ಅನ್ಯಾಯವಾಗಲಿದೆ' ಎಂದು ಹೇಳಿದ್ದಾರೆ.
'ಮುಂದಿನ ವರ್ಷ ತಂಡಗಳು ಮತ್ತೆ ವಿವಿಧ ನಗರಗಳಿಗೆ ಪಯಣಿಸಲಿವೆ ಎಂದು ನಾನು ಭಾವಿಸುತ್ತೇನೆ. ಈ ಮೂಲಕ ವಿವಿಧ ನಗರಗಳಲ್ಲಿ ಧನ್ಯವಾದ ಸಲ್ಲಿಸಬಹುದಾಗಿದೆ' ಎಂದು ಮಹಿ ತಿಳಿಸಿದ್ದಾರೆ.
'ಮುಂದಿನ ವರ್ಷ ಕೊನೆಯ ಐಪಿಎಲ್ ಆಗಿರಲಿದೆಯೇ ಎಂಬುದನ್ನು ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಖಂಡಿತವಾಗಿಯೂ ಮುಂದಿನ ವರ್ಷ ಮತ್ತಷ್ಟು ಬಲಶಾಲಿಯಾಗಿ ಪುನರಾಗಮನ ಮಾಡುವುದನ್ನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.