ಕೋಲ್ಕತ್ತ: ರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಆಟಗಾರರ ಕೊರತೆ ಕಾಡುತ್ತಿದೆ ಎಂದು ಭಾರತ ಫುಟ್ಬಾಲ್ ತಂಡದ ಮುಖ್ಯ ಕೋಚ್ ಇಗರ್ ಸ್ಟಿಮ್ಯಾಚ್ ಕಳವಳ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಸೂಪರ್ ಲೀಗ್ ಮತ್ತು ಐ–ಲೀಗ್ ಟೂರ್ನಿಗಳು ಸುನಿಲ್ ಚೆಟ್ರಿ ಅವರಂತಹ ಆಟಗಾರರನ್ನು ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಅವರು ಹೇಳಿದ್ದಾರೆ.
ಭಾರತವು ಅನುಭವಿ ಚೆಟ್ರಿಯ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಗುಣಮಟ್ಟದ ಸ್ಟ್ರೈಕರ್ನ ಕೊರತೆಯಿರುವುದು ಕತಾರ್ನಲ್ಲಿ ಇತ್ತೀಚೆಗೆ ನಡೆದ ವಿಶ್ವಕಪ್ ಮತ್ತು ಏಷ್ಯಾಕಪ್ ಜಂಟಿ ಅರ್ಹತಾ ಪಂದ್ಯಗಳಲ್ಲಿ ಸಾಬೀತಾಗಿತ್ತು. ಚೆಟ್ರಿ ಗಳಿಸಿದ ಎರಡು ಗೋಲುಗಳ ನೆರವಿನಿಂದಲೇ ತಂಡವು 2-0 ಗೋಲುಗಳಿಂದ ಬಾಂಗ್ಲಾದೇಶದ ವಿರುದ್ಧ ಜಯಿಸಿತ್ತು. ಇದು ಟೂರ್ನಿಯ ಈ ಲೆಗ್ನಲ್ಲಿ ಭಾರತದ ಏಕೈಕ ಗೆಲುವಾಗಿತ್ತು.
ಕ್ರೊವೇಷ್ಯಾ ಮೂಲದ 53 ವರ್ಷದ ಸ್ಟಿಮ್ಯಾಚ್, ಶುಕ್ರವಾರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಭವಿಷ್ಯದ ಸುನಿಲ್ ಚೆಟ್ರಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಚೆಟ್ರಿ ಸ್ಥಾನವನ್ನು ಯಾರು ತುಂಬುತ್ತಾರೆ. ಅಂಥವರನ್ನು ಕಂಡಿದ್ದೀರಾ? ಫಾರ್ವರ್ಡ್ ವಿಭಾಗದಲ್ಲಿ ಚೆಟ್ರಿ ಅವರಂತ ಸಾಮರ್ಥ್ಯ ತೋರುವ ಆಟಗಾರರನ್ನು ನೋಡಿದ್ದೀರಾ?‘ ಎಂದು ಪ್ರತಿ ಪ್ರಶ್ನೆ ಹಾಕಿದರು.
‘ಕ್ಲಬ್ಗಳಿಂದ ಹೊರಹೊಮ್ಮುವ ಆಟಗಾರರನ್ನು ರಾಷ್ಟ್ರೀಯ ತಂಡದಲ್ಲಿ ಬಳಸಿಕೊಳ್ಳಬೇಕು. ರಾಷ್ಟ್ರೀಯ ತಂಡವು ಅಕಾಡೆಮಿಯಲ್ಲ ಮತ್ತು ಆಟಗಾರರನ್ನು ಉತ್ಪಾದಿಸುವ ಕಾರ್ಖಾನೆಯೂ ಅಲ್ಲ‘ ಎಂದು ಅವರು ಇದೇ ವೇಳೆ ನುಡಿದರು.
‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ಬಹಳಷ್ಟು ಆಟಗಾರರಲ್ಲಿ ತಾಂತ್ರಿಕ ಸಾಮರ್ಥ್ಯದ ಕೊರತೆ ಕಾಡುತ್ತಿದೆ‘ ಎಂದು ಸ್ಟಿಮ್ಯಾಚ್ ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.