ಬೆಂಗಳೂರು: ರಾಜ್ಯ ಫುಟ್ಬಾಲ್ ತಂಡದ ಮಾಜಿ ಆಟಗಾರ ಎನ್.ಮುನಿಮಾರ (73) ಮುನಿರೆಡ್ಡಿಪಾಳ್ಯದ ಸ್ವಗೃಹದಲ್ಲಿ ಹೃದಯಾಘಾತದಿಂದ ಭಾನುವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಅವರು ಸತತ ಮೂರು ವರ್ಷ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಕೇರಳದಲ್ಲಿ 1973ರಲ್ಲಿ ನಡೆದ ಟೂರ್ನಿಯಲ್ಲಿ ಮೊದಲ ಬಾರಿ ಆಡಿದ್ದರು. ಮುಂದಿನ ವರ್ಷ ಪಂಜಾಬ್ನ ಜಲಂಧರ್ನಲ್ಲಿ ನಡೆದ ಟೂರ್ನಿಯಲ್ಲಿ ರಾಜ್ಯ ತಂಡ ಪಂಜಾಬ್ ವಿರುದ್ಧ ಸೆಮಿಫೈನಲ್ನಲ್ಲಿ ಸೋತಿತ್ತು. 1975ರಲ್ಲಿ ಕೇರಳದಲ್ಲಿ ನಡೆದ ಟೂರ್ನಿಯ ಫೈನಲ್ನಲ್ಲಿ ಬೆಂಗಾಲ್ ವಿರುದ್ಧ ಸೋತಿತ್ತು.
1972ರಲ್ಲಿ ಕೇರಳದಲ್ಲಿ ನಡೆದ ಪೆಂಟಾಗುಲರ್ ಟ್ರೋಫಿ ಟೂರ್ನಿಯಲ್ಲಿ ಮೈಸೂರು ರಾಜ್ಯವನ್ನು ಪ್ರತಿನಿಧಿಸಿದ್ದರು. ಅವರಿದ್ದ ತಂಡ ಚಾಂಪಿಯನ್ ಆಗಿತ್ತು. ಸಿಐಎಲ್ ಎಫ್ಸಿಯಲ್ಲೂ ಆಡಿದ್ದ ಅವರು ಆ ಕಾಲದ ಪ್ರಮುಖ ಹಾಫ್ ಬ್ಯಾಕ್ ಆಟಗಾರ ಆಗಿದ್ದರು. 1973ರಲ್ಲಿ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಸ್ಟಫಾರ್ಡ್ ಚಾಲೆಂಜ್ ಕಪ್ ಟೂರ್ನಿಯಲ್ಲಿ ಸಿಐಎಲ್ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
1982ರ ವರೆಗೆ ಡುರಾಂಡ್ ಕಪ್, ಡಿಸಿಎಂ ಟ್ರೋಫಿ, ರೋವರ್ಸ್ ಕಪ್, ಫೆಡರೇಷನ್ ಕಪ್, ದಯಾನಂದ ಬಂದೋಡ್ಕರ್ ಗೋಲ್ಡ್ ಕಪ್, ಟಿಎಫ್ಎ ಟೂರ್ನಿ, ರಾಕ್ ಫೋರ್ಟ್ ಟ್ರೋಫಿ, ಜಿ.ಡಿ.ನಾಯ್ಡು ಟ್ರೋಫಿ, ಜಾರ್ಜ್ ಹೂವರ್ ಕಪ್ ಮತ್ತಿತರ ಟೂರ್ನಿಗಳಲ್ಲಿ ಅವರು ಆಡಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.