ನವದೆಹಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದ ಭಾರತದ ಬಾಕ್ಸರ್ಗಳು, ಪುರುಷರ ರಾಷ್ಟ್ರೀಯ ಚಾಂಪಿಯನ್ಷಿಪ್ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಹೀಗಾದರೆ ಮುಂದಿನ ತಿಂಗಳು ಸರ್ಬಿಯಾದಲ್ಲಿ ನಿಗದಿಯಾಗಿರುವ ವಿಶ್ವಚಾಂಪಿಯನ್ಷಿಪ್ನಲ್ಲೂ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಗುವುದಿಲ್ಲ.
ಅಮಿತ್ ಪಂಘಲ್ (52 ಕೆಜಿ ವಿಭಾಗ), ಮನೀಷ್ ಕೌಶಿಕ್ (63 ಕೆಜಿ), ವಿಕಾಸ್ ಕ್ರಿಶನ್ (69 ಕೆಜಿ), ಆಶಿಶ್ ಚೌಧರಿ (75 ಕೆಜಿ) ಮತ್ತು ಸತೀಶ್ ಕುಮಾರ್ (+91 ಕೆಜಿ) ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ್ದರು. ಸತೀಶ್ ಅವರು ಕ್ವಾರ್ಟರ್ಫೈನಲ್ನಲ್ಲಿ ಸೋತರೆ ಇನ್ನುಳಿದ ನಾಲ್ವರು ಪ್ರಿಲಿಮನರಿ ಸುತ್ತುಗಳಲ್ಲೇ ನಿರಾಸೆ ಅನುಭವಿಸಿದ್ದರು.
‘ಈ ಐವರು ಬಾಕ್ಸರ್ಗಳ ಪೈಕಿ ವಿಕಾಸ್, ಸತೀಶ್ ಮತ್ತು ಆಶಿಶ್ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮಿತ್ ಹಾಗೂ ಮನೀಷ್ ಕುರಿತು ಯಾವುದೇ ಮಾಹಿತಿ ಇಲ್ಲವಾದರೂ ಸೂಕ್ತ ತಾಲೀಮಿನ ಕೊರತೆಯ ಕಾರಣ ಅವರು ಟೂರ್ನಿಯಿಂದ ಹೊರಗುಳಿಯಬಹುದು‘ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಬಳ್ಳಾರಿಯಲ್ಲಿ ಇದೇ 15ರಿಂದ ರಾಷ್ಟ್ರೀಯ ಚಾಂಪಿಯನ್ಷಿಪ್ ನಿಗದಿಯಾಗಿದೆ.
ಅಕ್ಟೋಬರ್ 26ರಂದು ಸರ್ಬಿಯಾದ ಬೆಲ್ಗ್ರೇಡ್ನಲ್ಲಿ ಆರಂಭವಾಗಲಿರುವ ವಿಶ್ವ ಚಾಂಪಿಯನ್ಷಿಪ್ಗೆ, ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದವರು ಮಾತ್ರ ತೆರಳಲಿದ್ದಾರೆ ಎಂದು ಭಾರತದ ಬಾಕ್ಸಿಂಗ್ ಫೆಡರೇಷನ್ (ಬಿಎಫ್ಐ) ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.