ADVERTISEMENT

ಕೆಎಸ್‌ಎಲ್‌ಟಿಎ–ಎಐಟಿಎ ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ಅರ್ಜುನ್

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 13:47 IST
Last Updated 10 ಆಗಸ್ಟ್ 2021, 13:47 IST
ಅರ್ಜುನ್ ಮಣಿಕಂಠನ್‌
ಅರ್ಜುನ್ ಮಣಿಕಂಠನ್‌   

ಬೆಂಗಳೂರು: ಅಮೋಘ ಆಟವಾಡಿದ ಅರ್ಜುನ್ ಮಣಿಕಂಠನ್‌ ಕೆಎಸ್‌ಎಲ್‌ಟಿಎ–ಎಐಟಿಎ 12 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಮಂಗಳವಾರ ನಡೆದ ಬಾಲಕರ ವಿಭಾಗದ ಎಂಟರಘಟ್ಟದ ಹಣಾಹಣಿಯಲ್ಲಿ ಅವರು 8-2ರಿಂದ ಆರುಷ್ ಮಾಳನ್ನವರ ಸವಾಲು ಮೀರಿದರು.

16ರ ಘಟ್ಟದ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಆಟಗಾರ ರುಹಾನ್‌ ಕೊಮಂದೂರ್ ಅವರಿಗೆ ಸೋಲುಣಿಸಿದ್ದ ಆರುಷ್‌ಗೆ ಕ್ವಾರ್ಟರ್‌ಫೈನಲ್‌ನಲ್ಲಿ ಅದೇ ಸಾಮರ್ಥ್ಯ ತೋರಲು ಸಾಧ್ಯವಾಗಲಿಲ್ಲ.

ಬಾಲಕಿಯರ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ರೀತ್ ಜಾವರ್ 8–3ರಿಂದ ಎರಡನೇ ಶ್ರೇಯಾಂಕದ ತೀರ್ಥಾ ಎ.ಎನ್‌. ಅವರನ್ನು ಮಣಿಸಿದ್ದರು. ಆದರೆ ರೀತ್‌ ಎಂಟರಘಟ್ಟದಲ್ಲಿ ತಮಿಳುನಾಡಿನ ಸನ್ಮಿತಾ ಹರಿಣಿ ಎದುರು 2–8ರಿಂದ ಎಡವಿದರು.

ADVERTISEMENT

ಬಾಲಕರ ವಿಭಾಗದ ಇನ್ನುಳಿದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಕೀರ್ತನ್ ವಿಶ್ವಾಸ್‌ 8–4ರಿಂದ ಅನಿರುದ್ಧ ಪಳನಿಸ್ವಾಮಿ ಎದುರು, ಯಶಸ್ ರಾಜ್‌ 8–1ರಿಂದ ಮೊಹಮ್ಮದ್ ಅರ್ಹಾನ್ ವಿರುದ್ಧ ಜಯ ಸಾಧಿಸಿದರು. ಮಹೇಶ ಬಿಲ್ಲಾಪುರಿಯಾ 5–8ರಿಂದ ತಮಿಳುನಾಡಿನ ರಾಜೇಶ್ ಕಣ್ಣನ್ ಎದುರು ಸೋತರು.

ಬಾಲಕಿಯರ ವಿಭಾಗದ ಇನ್ನುಳಿದ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಅಹಿದಾ ಸಿಂಗ್‌ 8–4ರಿಂದ ಮಾನ್ವಿತಾ ರಾಜೇಂದ್ರ ಎದುರು, ರಿತೇಶಾ ಚೌಧರಿ 8–3ರಿಂದ ಅನ್ವೇಶಾ ಧರ್ ವಿರುದ್ಧ, ವಸುಂಧರಾ ಬಾಲಾಜಿ 8–6ರಿಂದ ದಿಶಾ ಕುಮಾರ್ ಎದುರು ಜಯ ಸಾಧಿಸಿದರು.

ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಬುಧವಾರ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.