ಎಸ್ಪೊ, ಫಿನ್ಲೆಂಡ್: ಭಾರತ ತಂಡವು ಡೇವಿಸ್ ಕಪ್ ಟೂರ್ನಿಯ ವಿಶ್ವ ಗುಂಪು ಒಂದರ ಪಂದ್ಯದಲ್ಲಿ ಫಿನ್ಲೆಂಡ್ ಸವಾಲಿಗೆ ಸಜ್ಜಾಗಿದೆ. ಶುಕ್ರವಾರ ಆರಂಭವಾಗುವ ಪಂದ್ಯದಲ್ಲಿ ಬಲಿಷ್ಠ ಆತಿಥೇಯ ತಂಡವನ್ನು ಎದುರಿಸಲು ಸಿಂಗಲ್ಸ್ ವಿಭಾಗದ ಆಟಗಾರರು ಆಕ್ರಮಣಕಾರಿ ಆಟ ತೋರಬೇಕಿದೆ.
ಪ್ರಜ್ಞೇಶ್ ಗುಣೇಶ್ವರನ್ ಮತ್ತು ರಾಮ್ಕುಮಾರ್ ರಾಮನಾಥನ್ ಅವರು ಮಹತ್ವದ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ವಿಶ್ವದ ಪ್ರಮುಖ ಆಟಗಾರರನ್ನು ಎದುರಿಸಿ ಉತ್ತಮ ಪೈಪೋಟಿ ನೀಡಿರುವ ಅವರು ಈಗ ಇನ್ನಷ್ಟು ಮುಂದೆ ಸಾಗುವ ಸಮಯ ಬಂದಿದೆ. ಇಲ್ಲಿ ಅವರು ಶ್ರೇಷ್ಠ ಸಾಮರ್ಥ್ಯ ತೋರಿದರೆ ಭಾರತಕ್ಕೆ ಮುಂದಿನ ವರ್ಷದ ಅರ್ಹತಾ ಪಂದ್ಯಗಳಿಗೆ ರಹದಾರಿ ಸಿಗಲಿದೆ.
ದೇಶದ ಎರಡನೇ ರ್ಯಾಂಕಿನ ಆಟಗಾರನಾಗಿರುವ ರಾಮ್ಕುಮಾರ್ ಮೊದಲ ದಿನ ಫಿನ್ಲೆಂಡ್ನ ಅಗ್ರ ಕ್ರಮಾಂಕದ ಎಮಿಲ್ ರುಸುವೊರಿ ವಿರುದ್ಧ ಕಣಕ್ಕಿಳಿಯಲಿದ್ದಾರೆ. ವಿಶ್ವ ರ್ಯಾಂಕಿಂಗ್ನಲ್ಲಿ 165ನೇ ಸ್ಥಾನದಲ್ಲಿರುವ ಪ್ರಜ್ಞೇಶ್ ಅವರು ಒಟ್ಟೊ ವಿರ್ಟಾನೆನ್ (419ನೇ ಕ್ರಮಾಂಕ) ಅವರನ್ನು ಎದುರಿಸುವ ಸಾಧ್ಯತೆಯಿದೆ.
ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಅವರು ಆಡುವ ಸಂದರ್ಭದಲ್ಲಿ ಭಾರತದ ಜೇಬಿಗೆ ಡಬಲ್ಸ್ ಪಾಯಿಂಟ್ಸ್ ಖಚಿತ ಎನ್ನುವ ಸ್ಥಿತಿಯಿತ್ತು. ಆದರೆ ಈಗ ಹಾಗಿಲ್ಲ.
ಡಬಲ್ಸ್ನಲ್ಲಿ ಕಣಕ್ಕಿಳಿಯುತ್ತಿರುವ ಕನ್ನಡಿಗ ರೋಹನ್ ಬೋಪಣ್ಣ–ದಿವಿಜ್ ಶರಣ್ ಜೋಡಿ ಮೊದಲ ಹಣಾಹಣಿಯಲ್ಲಿ ಹೆನ್ರಿ ಕೊಂಟಿನೆನ್ ಮತ್ತು ಹ್ಯಾರಿ ಹೆಲಿವೊವಾರ ಅವರನ್ನು ಎದುರಿಸಲಿದೆ. ಈ ಜೋಡಿ ಜೊತೆಯಾಗಿ 2019 ಮಾರ್ಚ್ನಲ್ಲಿ ಇಟಲಿ ಎದುರು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಆಡಿದ್ದಾರೆ. ಹೀಗಾಗಿ ಹೊಂದಾಣಿಕೆಯ ಅಗತ್ಯವಿದೆ.
ತಂಡದ ಆಟವಾಡದ ನಾಯಕ ರೋಹಿತ್ ರಾಜ್ಪಾಲ್ ಅವರು ಬೋಪಣ್ಣ ಅವರ ಜೊತೆಯಾಗಿ ಶರಣ್ ಅವರನ್ನು ಕಣಕ್ಕಿಳಿಸುತ್ತಾರೊ ಅಥವಾ ತಂಡದ ಐದನೇ ಸದಸ್ಯರಾಗಿರುವ ಸಾಕೇತ್ ಮೈನೇನಿ ಅವರಿಗೆ ಅವಕಾಶ ನೀಡುತ್ತಾರೊ ಕಾದುನೋಡಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.