ADVERTISEMENT

ಸಿಂಗಪುರಕ್ಕೆ ‘ನೆನಪು’ ಜಾನಪದ ಕಲಾತಂಡ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 20:15 IST
Last Updated 15 ಏಪ್ರಿಲ್ 2019, 20:15 IST
   

ಜಾನಪದ ಕಲಾ ಪ್ರದರ್ಶನಗಳಲ್ಲಿ ಸೈ ಎನಿಸಿಕೊಂಡಿರುವ ಪ್ರತಿಭಾವಂತರ ತಂಡ ದೂರದ ಸಿಂಗಪುರ ದೇಶದಲ್ಲಿ ನಮ್ಮ ಜಾನಪದ ಕಲೆಯ ಸೊಗಡನ್ನು ಪರಿಚಯಿಸಲಿದೆ.

ತಂಡದ ಹೆಸರು ನೆನಪು. ಜಾನಪದ ಕಲೆ, ಸಂಸ್ಕೃತಿಯನ್ನು ಎಲ್ಲಡೆ ಪರಿಚಯಿಸುವ ಮಹದಾಶಯ ‘ನೆನಪು’ ತಂಡದ್ದು. ತಂಡ ಕಳೆದ ಏಳು ವರ್ಷಗಳಿಂದ ಕ್ರಿಯಾಶೀಲವಾಗಿರುವ ಈ ತಂಡದಲ್ಲಿ ಸುಮಾರು 35 ಸದಸ್ಯರಿದ್ದಾರೆ.

2013ರಲ್ಲಿ ಸಿಂಗಪುರದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಮತ್ತು 2016ರಲ್ಲಿ ಯುರೋಪ್‌ನಲ್ಲಿ ನಡೆದ ‘ನ್ಯೂ ಪ್ರಾಗ್‌ ಡ್ಯಾನ್ಸ್‌ ಫೆಸ್ಟಿವಲ್‌’ನಲ್ಲಿ ತಂಡ ಪ್ರದರ್ಶಿಸಿದ ಕಂಸಾಳೆ ನೃತ್ಯಕ್ಕೆ ಪ್ರಥಮ ಸ್ಥಾನವೂ ದೊರೆತಿದೆ.

ADVERTISEMENT

2012ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಪ್ರಶಸ್ತಿ ಪಡೆದುಕೊಂಡ ಹಿರಿಮೆ ಈ ತಂಡದ್ದು. ಇದೀಗಸಿಂಗಪುರದ ಎಸ್ಪ್ಲಾನೇಡ್‌ನಲ್ಲಿ ಏಪ್ರಿಲ್‌ 18–21ರ ತನಕ ನಡೆಯುವ ‘ಎ ಟೇಪ್ಸಟ್ರಿ ಆಫ್‌ ಸೇಕ್ರೆಡ್‌ ಮ್ಯೂಸಿಕ್‌ ಫೆಸ್ಟಿವಲ್‌’ನಲ್ಲಿ ನಿರ್ದೇಶಕ ದಿಲೀಪ್ ಮಂಜುನಾಥ್ ಅವರ ನೇತೃತ್ವದಲ್ಲಿ 12 ಜನರ ತಂಡ ಭಾಗವಹಿಸುತ್ತಿದೆ. ಇದೇ ಮಂಗಳವಾರ (ಏ16) ಈ ತಂಡ ಪ್ರಯಾಣ ಬೆಳಸಲಿದೆ.ಇದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಉತ್ಸವ ಎಂದು ಹೆಸರಾಗಿದೆ. ಈಗಾಗಲೇ ಉತ್ಸವ ತನ್ನ10 ಆವೃತ್ತಿಗಳನ್ನು ಪೂರೈಸಿದ್ದು, 11ನೇ ಆವೃತ್ತಿಗೆ ಕಾಲಿಟ್ಟಿದೆ. 10ಕ್ಕೂ ಹೆಚ್ಚು ದೇಶಗಳು ಇದರಲ್ಲಿ ಪಾಲ್ಗೊಳ್ಳಲಿವೆ.

ಈ ಬಾರಿಯ ಉತ್ಸವದಲ್ಲಿ ದಾವಣಗೆರೆಯ ಒಬ್ಬರು ಸೋಮನ ಕುಣಿತ, ಮಂಡ್ಯದಿಂದ ಇಬ್ಬರು ಪೂಜೆ ಕುಣಿತ, ರಾಮನಗರದಿಂದ ನಾಲ್ವರು ಡೊಳ್ಳುಕುಣಿತ, ಉಳಿದವರು ಬೆಂಗಳೂರಿನವರು ಕಂಸಾಳೆ ನೃತ್ಯವನ್ನು ‍ಪ್ರಸ್ತುತಪಡಿಸಲಿದ್ದಾರೆ.

ಆಯ್ಕೆಯಾಗಿದ್ದು ಹೀಗೆ: ಸಿಂಗಪುರದಲ್ಲಿರುವ ಭಾರತದ ಕಲಾ ಸಂಸ್ಥೆ ‘ನಿರ್ವಾಣ ಲೈವ್‌’ನ ಚಿರಾಗ್‌ ಜೈನ್‌ ಅವರು, ನೆನಪು ತಂಡದ ಸುಪ್ತಪ್ರತಿಭೆ ಕಂಡು ಉತ್ಸವಕ್ಕೆ ಆಯ್ಕೆಮಾಡಿದ್ದಾರೆ. ರಂಗಭೂಮಿ, ನೃತ್ಯ, ದೃಶ್ಯಕಲೆ, ಸಿನೆಮಾ ಮತ್ತು ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡುವುದು ಈ ಸಂಸ್ಥೆಯ ಕಾಳಜಿ.

‘ಉತ್ತಮ ಪ್ರದರ್ಶನ ನೀಡುತ್ತೇವೆ’

‘ಫೆಸ್ಟಿವಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಒಂದೂವರೆ ತಿಂಗಳಿಂದ ಅಭ್ಯಾಸ ನಡೆಸುತ್ತಿದ್ದೇವೆ. ದೇಶದ ಸಂಸ್ಕೃತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲು ಒಂದೊಳ್ಳೆಯ ಅವಕಾಶ ಒದಗಿ ಬಂದಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇವೆ’ ಎಂದು ಹೇಳುತ್ತಾರೆ ನೆನಪು ತಂಡದ ನಿರ್ದೇಶಕ ದಿಲೀಪ್‌ ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.