ಮುಂಬೈ: ಕೊರೊನಾ ಸೋಂಕಿತರಾಗಿ ಇಲ್ಲಿನ ನಾನಾವತಿ ಆಸ್ಪತ್ರೆಗೆ ದಾಖಲಾಗಿರುವ ನಟ ಅಮಿತಾಭ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
‘ನಾವು ಆಸ್ಪತ್ರೆಯ ಪ್ರತ್ಯೇಕವಾಸ ವಾರ್ಡ್ನಲ್ಲಿದ್ದೇವೆ. ನಮ್ಮ ಜತೆಗೆ ನೇರ ಸಂಪರ್ಕಕ್ಕೆ ಬಂದಿರುವ ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ’ ಎಂದು ಅಭಿಷೇಕ್ ಟ್ವೀಟ್ ಮಾಡಿದ್ದಾರೆ.
ಇವರ ಬಂಗಲೆಯಲ್ಲಿ ಕೆಲಸ ಮಾಡುತ್ತಿರುವ 26 ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಗಿದೆ. ವರದಿಯ ಪ್ರಕಾರ ಅವರೆಲ್ಲರೂ ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ಮಹಾನಗರಪಾಲಿಕೆಯ ಉಪ ಆಯುಕ್ತ ವಿಶ್ವಾಸ್ ತಿಳಿಸಿದ್ದಾರೆ.
ಅಭಿಷೇಕ್ ಅವರ ಪತ್ನಿ ಐಶ್ವರ್ಯಾ ಹಾಗೂ ಪುತ್ರಿ ಆರಾಧ್ಯ ಅವರೂ ಸೋಂಕಿಗೆ ಒಳಗಾಗಿದ್ದಾರೆ ಎಂಬುದನ್ನು ಭಾನುವಾರ ಸ್ವತಃ ಅಭಿಷೇಕ್ ಅವರು ಟ್ವೀಟ್ ಮೂಲಕ ಖಚಿತಪಡಿಸಿದ್ದರು. ಅವರು ಮನೆಯಲ್ಲೇ ಪ್ರತ್ಯೇಕ ವಾಸ ನಡೆಸುತ್ತಿದ್ದಾರೆ ಎಂದೂ ಅವರು ಹೇಳಿದ್ದರು. ‘ವೈದ್ಯರು ಸೂಚಿಸಿದಷ್ಟು ದಿನಗಳ ಕಾಲ ಅಮಿತಾಭ್ ಅವರು ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯಲಿದ್ದಾರೆ’ ಎಂದು ಅಭಿಷೇಕ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.