ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣವನ್ನು‘ವೃತ್ತಿಯಲ್ಲಿನ ವೈರತ್ವ’ದ ದಿಕ್ಕಿನಲ್ಲೂ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
‘ಸುಶಾಂತ್ ಸಿಂಗ್ ರಜಪೂತ್ ಅವರನ್ನು ಬಾಲಿವುಡ್ನ ಕೆಲ ಕೂಟ, ಸ್ವಜನಪಕ್ಷಪಾತದಲ್ಲಿ ತೊಡಗಿರುವ ಕೆಲ ಗುಂಪುಗಳು ತಡೆಯುತ್ತಿದ್ದವು. ಅವು ಮೇಲೆ ಬಾರದಂತೆ ಮಾಡಿದ್ದವು, ಅವರನ್ನು ನಿರ್ಲಕ್ಷಿಸಿದ್ದ ಅದೇ ಗುಂಪು ಇಂದು ಅವರ ಸಾವಿಗೆ ಮಿಡಿಯುತ್ತಿವೆ,’ ಎಂದು ಎರಡು ದಿನಗಳಿಂದಲೂ ಟ್ವಿಟರ್ನಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆ ವೇಳೆ #bycottkarnjohrgangmovie, #KaranJohar, #nepotism, #boycottbollywoodmovies , #BollywoodBlockedSushant, #nepotisminbollywood, #BoycottNepokids ಎಂಬ ಹ್ಯಾಷ್ ಟ್ಯಾಗ್ಗಳು ಟ್ರೆಂಡ್ ಆಗುತ್ತಿವೆ.
ಇದೇ ವಿಚಾರವನ್ನಿಟ್ಟುಕೊಂಡು, ಸುಶಾಂತ್ ಸಾವಿಗೆ ಬಾಲಿವುಡ್ ಮಂದಿಯ ವೈರತ್ವವೇ ಕಾರಣ ಎಂದುಕೆಲ ರಾಷ್ಟ್ರೀಯ ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡಿದ್ದವು. ಹೀಗಾಗಿ,ವೃತ್ತಿಯಲ್ಲಿ ಸುಶಾಂತ್ ಎದುರಿಸಿರಬಹುದಾದ ತೊಂದರೆ, ವೈರತ್ವದ ನಿಟ್ಟಿನಲ್ಲಿ ತನಿಖೆ ನಡೆಸುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಈ ಕುರಿತು ಮಾತನಾಡಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್, ’ ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದೆ. ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅಂಶ ಸ್ಪಷ್ಟವಾಗಿದೆ. ಆದರೆ, ವೃತ್ತಿಯಲ್ಲಿನ ವೈರತ್ವ ಕಾರಣಕ್ಕೆ ಸುಶಾಂತ್ ಖಿನ್ನತೆಗೆ ಒಳಗಾಗಿದ್ದರು ಎಂದು ಹಲವು ವಾಹಿನಿಗಳು ವರದಿ ಮಾಡಿದ್ದು, ಅವುಗಳನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಮುಂಬೈ ಪೊಲೀಸರು ತನಿಖೆ ನಡೆಸಲಿದ್ದಾರೆ,’ ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.