ADVERTISEMENT

ತಮಿಳುನಾಡು | 10ನೇ ತರಗತಿ ಪರೀಕ್ಷೆ ರದ್ದು: ಮುಂದಿನ ತರಗತಿ ಪ್ರವೇಶಕ್ಕೆ ಬಡ್ತಿ

ಪಿಟಿಐ
Published 9 ಜೂನ್ 2020, 17:58 IST
Last Updated 9 ಜೂನ್ 2020, 17:58 IST
   

ಚೆನ್ನೈ: ಕೋವಿಡ್‌–19 ವ್ಯಾಪಕ ಗೊಳ್ಳುತ್ತಿರುವ ಕಾರಣ ತಮಿಳುನಾಡಿನಲ್ಲಿ 10ನೇ ತರಗತಿಯ ಪಬ್ಲಿಕ್‌ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಮತ್ತು ವಿದ್ಯಾರ್ಥಿಗಳಿಗೆ ಮುಂದಿನ ತರಗತಿ ಪ್ರವೇಶಕ್ಕೆ ಬಡ್ತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮಂಗಳವಾರ ಇಲ್ಲಿ ಪ್ರಕಟಿಸಿದರು.

ಜೂನ್ 15ರಿಂದ ಆರಂಭವಾಗಬೇಕಿದ್ದ 10ನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಅಂತೆಯೇ 11ನೇ ತರಗತಿಗೆ ಸಂಬಂಧಿಸಿದಂತೆ ಬಾಕಿ ಉಳಿದಿದ್ದ ವಿಷಯಗಳ ಪರೀಕ್ಷೆಗಳನ್ನೂ ರದ್ದುಪಡಿಸಲಾಗಿದೆ. ತ್ರೈಮಾಸಿಕ ಹಾಗೂ ಅರ್ಧ ವಾರ್ಷಿಕ ಪರೀಕ್ಷೆಗಳಲ್ಲಿ ಅವರ ಪ್ರಗತಿ ಆಧಾರದ ಮೇಲೆ ಶೇ 80 ರಷ್ಟು ಮತ್ತು ಅವರ ಹಾಜರಾತಿ ಆಧರಿಸಿ ಶೇ 20 ರಷ್ಟು ಅಂಕಗಳನ್ನು ನೀಡಲಾಗುವುದು.ಈ ಎಲ್ಲ ವಿದ್ಯಾರ್ಥಿಗಳು ಮುಂದಿನ ತರಗತಿಗಳಿಗೆ ಪ್ರವೇಶ ಪಡೆಯಲು, ಅವರಿಗೆ ಬಡ್ತಿ ನೀಡಲಾಗಿದೆ ಎಂದು ಅವರು ಘೋಷಿಸಿದರು.

ಕೋವಿಡ್‌–19 ಹರಡುತ್ತಿರುವುದರಿಂದ ಸುಮಾರು 9 ಲಕ್ಷ ವಿದ್ಯಾರ್ಥಿಗಳ ಜೀವವನ್ನು ಪಣಕ್ಕಿಡಲು ಸಾಧ್ಯವಿಲ್ಲ. ಆದ್ದರಿಂದ ಪರೀಕ್ಷೆಗಳನ್ನು ಮುಂದೂಡುವುದನ್ನು ಪರಿಗಣಿಸುವಂತೆ ಮದ್ರಾಸ್‌ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದ ಮರುದಿನವೇ ಮುಖ್ಯಮಂತ್ರಿಗಳು ಪರೀಕ್ಷೆ ರದ್ದು ಪಡಿಸಿರುವುದನ್ನು ಪ್ರಕಟಿಸಿದ್ದಾರೆ.

ADVERTISEMENT

‘ಚೆನ್ನೈ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಕೋವಿಡ್- 19 ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ ಈ ಸಂಬಂಧ ಪೋಷಕರೂ ಮನವಿ ಮಾಡಿದ್ದರು. ಸಾಂಕ್ರಾಮಿಕ ರೋಗ ತಜ್ಞರ ಅಭಿಪ್ರಾಯವನ್ನೂ ಕೇಳಲಾಗಿದೆ’ ಎಂದು ಅವರು ತಿಳಿಸಿದರು.

12 ನೇ ತರಗತಿಯ ಪೂರಕ ಮತ್ತು ಬಾಕಿ ಇರುವ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.