ADVERTISEMENT

ಬೆಲೆ, ಬೇಡಿಕೆ ಕುಸಿತ: ಬದನೆಕಾಯಿ ಗಿಡ ಕಿತ್ತುಹಾಕಿದ ರೈತ

ನಾಗರಾಜ ಚಿನಗುಂಡಿ
Published 1 ಮೇ 2020, 19:30 IST
Last Updated 1 ಮೇ 2020, 19:30 IST
ರಾಯಚೂರು ತಾಲ್ಲೂಕಿನ ಪಲಕಂದೊಡ್ಡಿ ರೈತ ನಷ್ಟಕ್ಕೊಳಗಾಗಿ ಎರಡು ಎಕರೆ ಬದನೆ ಗಿಡಗಳನ್ನು ಕಿತ್ತುಹಾಕಿಸಿದ್ದಾರೆ
ರಾಯಚೂರು ತಾಲ್ಲೂಕಿನ ಪಲಕಂದೊಡ್ಡಿ ರೈತ ನಷ್ಟಕ್ಕೊಳಗಾಗಿ ಎರಡು ಎಕರೆ ಬದನೆ ಗಿಡಗಳನ್ನು ಕಿತ್ತುಹಾಕಿಸಿದ್ದಾರೆ   

ರಾಯಚೂರು: ಮಾರುಕಟ್ಟೆಯಲ್ಲಿ ಬದನೆಕಾಯಿಗೆ ಬೇಡಿಕೆಯಿಲ್ಲದೆ ನಷ್ಟ ಅನುಭವಿಸಿರುವ ತಾಲ್ಲೂಕಿನ ಪಲಕಂದೊಡ್ಡಿ ಗ್ರಾಮದ ಯುವ ರೈತ ಬಸವರಾಜ ಅವರು ಎರಡು ಎಕರೆ ಬೆಳೆದಿದ್ದ ಬೆಳೆಯನ್ನೆಲ್ಲ ಕಿತ್ತುಹಾಕಿದ್ದಾರೆ.

‘ಮಾರ್ಚ್‌ ಆರಂಭದಲ್ಲಿ 15 ಕೆಜಿ ಬದನೆಕಾಯಿ ಒಂದು ಚೀಲಕ್ಕೆ ₹150 ರವರೆಗೂ ದರ ಸಿಕ್ಕಿತ್ತು. ಈಗ ಒಂದು ಚೀಲಕ್ಕೆ ₹20 ರಿಂದ ₹30 ಕ್ಕೆ ಕೇಳುತ್ತಿದ್ದಾರೆ. ರಾಯಚೂರು ತರಕಾರಿ ಮಾರುಕಟ್ಟೆಗೆ ಕಳುಹಿಸಿದ್ದ ಬದನೆಕಾಯಿ ಚೀಲಗಳು ಅಲ್ಲಿಯೇ ಉಳಿದಿವೆ. ಬದನೆಕಾಯಿ ಚೀಲದ ದರ ₹20 ಇದೆ. ಅದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದಕ್ಕೆ ₹10 ಖರ್ಚಾಗುತ್ತದೆ. ಈ ಪರಿಸ್ಥಿತಿಯಿಂದ ಬೇಸತ್ತು ಗಿಡ ಕಿತ್ತುಹಾಕುತ್ತಿದ್ದೇನೆ’ ಎಂದು ‘ಪ್ರಜಾವಾಣಿ’ಯೊಂದಿಗೆ ನೋವು ಹಂಚಿಕೊಂಡರು.

‘ವಾರಕ್ಕೆ ಎರಡು ಸಲ ಔಷಧಿ ಸಿಂಪರಣೆ ಮಾಡದಿದ್ದರೆ ಬದನೆಕಾಯಿ ಗಿಡದಲ್ಲೆ ಹಾಳಾಗುತ್ತದೆ. ಮೂರುವರೆ ಎಕರೆ ಬದನೆಕಾಯಿ ಬೆಳೆಯುವುದಕ್ಕೆ ಮೂರುವರೆ ಲಕ್ಷ ಖರ್ಚಾಗಿದೆ. ಒಂದೂವರೆ ಎಕರೆ ಬದನೆಕಾಯಿ ಗಿಡಗಳು ಇನ್ನೂ ಕೊಯ್ಲಿಗೆ ಬಂದಿಲ್ಲ. ಮುಂದಾದರೂ ದರ ಸಿಗಬಹುದು ಎಂದು ಅಷ್ಟು ಉಳಿಸಿಕೊಂಡಿದ್ದೇನೆ. ಕೊರೊನಾ ವೈರಸ್‌ನಿಂದಾಗಿ ಈ ಸಲ ನಷ್ಟ ಅನುಭವಿಸುವಂತಾಯಿತು’ ಎಂದರು.

ADVERTISEMENT

ಬೇಸಿಗೆಯಲ್ಲಿ ಸಭೆ, ಸಮಾರಂಭಗಳು ಹಾಗೂ ಮದುವೆಗಳು ನಡೆಯುವುದರಿಂದ ಬದನೆಕಾಯಿಗೆ ಒಳ್ಳೆಯ ದರ ಸಿಗುತ್ತದೆ ಎನ್ನುವ ರೈತನ ನಿರೀಕ್ಷೆ ಹುಸಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.