ADVERTISEMENT

ಶಿಕ್ಷಣ‌ ವ್ಯವಸ್ಥೆ ಸರಿಪಡಿಸಲು‌ ಅಮೂಲ್ಯ ಅವಕಾಶ: ಶಿಕ್ಷಣ ಸಚಿವರಿಗೆ ಪತ್ರ

ಕೊರೊನೋತ್ತರ ಕಾಲದಲ್ಲಿ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ

ರಾಜಾರಾಂ ತಲ್ಲೂರು
Published 28 ಮೇ 2020, 4:46 IST
Last Updated 28 ಮೇ 2020, 4:46 IST
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು, ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು, ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌    

ಬೆಂಗಳೂರು: ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆಗೆ ಇಂದಿನಸನ್ನಿವೇಶವು ಸುವರ್ಣಾವಕಾಶ ಒದಗಿಸಿದೆ ಎಂದು ಅಭಿಪ್ರಾಯಪಟ್ಟಿರುವ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಈ ಕುರಿತು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಮಾನ್ಯ ಸುರೇಶ್‌ ಕುಮಾರ್‌ಅವರಿಗೆ, ನಮಸ್ಕಾರ.

ಕೊರೊನೋತ್ತರ ದಿನಗಳ ಶಿಕ್ಷಣ ಹೇಗೆಂದು ಜಗತ್ತಿನಾದ್ಯಂತ ದೇಶಗಳು ಚಿಂತನೆಯಲ್ಲಿ ತೊಡಗಿವೆ. ಕರ್ನಾಟಕದಲ್ಲೂ ತಾವು ಮತ್ತು ತಮ್ಮ ಇಲಾಖೆ ಈ ಬಗ್ಗೆ ಯೋಚಿಸುತ್ತಿರುವುದನ್ನು ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ತಮಗೆ ಈ ಪತ್ರ ಬರೆಯುತ್ತಿದ್ದೇನೆ.

ADVERTISEMENT

ಈ ಸಂಕಟವನ್ನು ಅವಕಾಶ ಎಂದು ಪರಿಗಣಿಸಿ ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ಅಮೂಲಾಗ್ರ ಬದಲಾವಣೆ ಮಾಡುವುದಕ್ಕೆ ಮನಸ್ಸು ಮಾಡುವುದಿದ್ದರೆ ಇದು ನಿಮಗೆ ಸುವರ್ಣಾವಕಾಶ. ನಾನು ಮುಂದೆ ಹೇಳಲಿರುವ ಬಹುತೇಕ ಅಂಶಗಳಿಗೆ ಒಂದೋ ಈಗಾಗಲೇ ಇರುವ ಕಾನೂನುಗಳಲ್ಲೇ “ಇನ್ ಹೆರೆಂಟ್” ಅವಕಾಶಗಳಿವೆ. ನೀತಿ ನಿರೂಪಕ ತಂಡದ ಮುಖ್ಯಸ್ಥರಾಗಿ ನಿಮ್ಮಿಂದ ಇರುವ ಏಕೈಕ ನಿರೀಕ್ಷೆ ಎಂದರೆ ಖಾಸಗಿ ಶಿಕ್ಷಣ ಲಾಬಿಯಿಂದ ದೂರ ನಿಂತು ಈ ವಿಚಾರಗಳನ್ನು ನಾಡಿನ ಸಮಷ್ಟಿಯ ಹಾಗೂ ದೂರಗಾಮಿ ಪರಿಣಾಮಗಳ ಹಿನ್ನೆಲೆಯಲ್ಲಿ ಗಮನಿಸಬೇಕೆಂಬುದು.

ಹಾಗೆ ಮಾಡಿದಲ್ಲಿ ಒಂದೇ ಕಲ್ಲಿನಿಂದ ಹತ್ತಾರು ಹಣ್ಣುಗಳನ್ನು ಉದುರಿಸುವ ಅವಕಾಶ ಸಿಗಲಿದೆ ಮತ್ತು ಶಿಕ್ಷಣ ಕ್ಷೇತ್ರ ಎಂದೆಂದಿಗೂ ನಿಮ್ಮನ್ನು ನೆನಪಿಸಿಕೊಳ್ಳಲಿದೆ.

ತಾವು ಮಾಡಬೇಕಾಗಿರುವ ಮೂರು ಕಾನೂನು ಬದಲಾವಣೆಗಳು ಎಂದರೆ:

ಒಂದು - “ಪ್ರೌಢ ಶಾಲಾ ಹಂತದ ತನಕ ಯಾವನೇ ವಿದ್ಯಾರ್ಥಿ/ವಿದ್ಯಾರ್ಥಿನಿ ಕಡ್ಡಾಯವಾಗಿ ತಮ್ಮ ನಿವಾಸದ ಸ್ಥಳದಿಂದ ಒಂದು ಕಿಲೊಮೀಟರ್ ಒಳಗಿನ (ಗ್ರಾಮೀಣ ಪ್ರದೇಶಗಳಲ್ಲಿ 2-3ಕಿಮೀ) ಒಳಗಿನ ಶಾಲೆಗಳಲ್ಲೇ ಓದಬೇಕು.” ಎಂದು.

ಎರಡು - “ಪ್ರೌಢಶಾಲಾ ಹಂತದ ತನಕ ಹೆಣ್ಣುಮಕ್ಕಳಿಗೆ ಈಗಾಗಲೇ ಇರುವ ಉಚಿತ ಶಿಕ್ಷಣವನ್ನು ಗಂಡು ಮಕ್ಕಳಿಗೂ ವಿಸ್ತರಿಸುವುದು.”

ಮೂರು - “ಕೌಶಲ ಕಲಿಕೆ” ಪ್ರಾಥಮಿಕ ಶಿಕ್ಷಣದ ಕಡ್ಡಾಯ ಭಾಗ ಆಗಬೇಕು.

ಹೀಗೆ ಮಾಡಿದಾಗ,

1.ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವಿನ “ಶಿಕ್ಷಣ ಗುಣಮಟ್ಟ”ದ ತಾರತಮ್ಯ ತನ್ನಿಂತಾನೆ ಇಲ್ಲದಾಗಲಿದೆ.

2. ಮುಚ್ಚಲು ಸಿದ್ಧವಾಗಿರುವ ಎಲ್ಲ ಸರ್ಕಾರಿ ಶಾಲೆಗಳೂ ಮತ್ತೆ ಜೀವಂತಗೊಳ್ಳಲಿವೆ.

3. ಸಾವಿರ-ಲಕ್ಷಗಳ ಡೊನೇಷನ್ ವಸೂಲಿ ದಂಧೆ ನಿಯಂತ್ರಣಕ್ಕೆ ಬರಲಿದೆ.

4. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮಕ್ಕೆ ಆದ್ಯತೆ ಕೊಡುವುದರಿಂದ ತಪ್ಪಿಸಿಕೊಳ್ಳಲು ಚಾಪೆಯಡಿ ತೂರಿಕೊಳ್ಳುವ ಪ್ರಯತ್ನಗಳು ತಂತಾನೆ ವಿಫಲಗೊಳ್ಳಲಿದ್ದು, ಆ ಉದ್ದೇಶಕ್ಕೆ ಬಲ ಸಿಗಲಿದೆ. ಕನ್ನಡಕ್ಕೆ ಆದ್ಯತೆಯುಳ್ಳ, ಇಂಗ್ಲೀಷನ್ನು ಕಡೆಗಣಿಸದ ಶಿಕ್ಷಣ ವ್ಯವಸ್ಥೆಯೊಂದು ತಾನೇ ತಾನಾಗಿ ಮೂಡಿಬರಲಿದೆ.

5. ಸರ್ಕಾರಿ ಶಾಲೆಗಳ ಮೂಲಸೌಕರ್ಯ ಮತ್ತು ಖಾಸಗಿಶಾಲೆಗಳ ಶಿಕ್ಷಕರ ಶೋಷಣೆ ನಿಲ್ಲಲಿದೆ.

6. ದಟ್ಟಣೆ ಇರುವಲ್ಲಿ ಹೊಸ ಸರ್ಕಾರಿ ಶಾಲೆಗಳಿಗೆ ಅವಕಾಶ ಸಿಗಲಿದೆ. ಇದು ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ.

ಇವಿಷ್ಟು ಸಮಗ್ರ ಸ್ವರೂಪದ ಬದಲಾವಣೆಗಳಾದರೆ, ಕೊರೊನಾ ಸಂಕಟದ ನಿವಾರಣೆಗೂ ಈ ಕ್ರಮಗಳು ಸಹಾಯ ಮಾಡಲಿವೆ. ಹೇಗೆಂದರೆ:

1. ಮಕ್ಕಳ ಮನೆ ಹತ್ತಿರ ಇರುವುದರಿಂದ ವಾಹನ ಪ್ರಯಾಣ ತೀರಾ ಅಗತ್ಯ ಇರುವುದಿಲ್ಲ.

2. ಮಧ್ಯಾಹ್ನದ ಊಟಕ್ಕೆ ಮನೆಯನ್ನು ಅವಲಂಬಿಸುವವರು ಮನೆಯನ್ನು ಅವಲಂಬಿಸಿದರೆ, ಉಳಿದವರಿಗೆ ಶಾಲೆಯಲ್ಲಿ ಪೌಷ್ಠಿಕ ಆಹಾರ ನೀಡಲು ಸಾಧ್ಯ ಆಗುತ್ತದೆ.

3. ತರಗತಿ ಕೋಣೆಗಳಲ್ಲಿ ಅಂತರ ಕಾಯ್ದುಕೊಳ್ಳಲು, 30ಮಕ್ಕಳಲ್ಲಿ ಪ್ರತೀ 15ಮಂದಿಗೆ ದಿನಬಿಟ್ಟು ದಿನ ತರಗತಿ ವ್ಯವಸ್ಥೆ ಮಾಡಬಹುದು. ಉಳಿದ 15 ಮಂದಿಗೆ ತರಗತಿಗಳಿಲ್ಲದ ದಿನ ಹೆಚ್ಚುವರಿ ಇ-ಲರ್ನಿಂಗ್ ಜೊತೆಗೆ ಕೃಷಿ, ತೋಟಗಾರಿಕೆ, ಕ್ರೀಡೆ, ಸಮಾಜ ಸೇವೆಯಂತಹ 'ಕೌಶಲ ವೃದ್ಧಿ' ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವಕಾಶ ಮಾಡಿಕೊಡಬಹುದು.
ತಾವು ಈ ನಿಟ್ಟಿನಲ್ಲಿ ಯೋಚಿಸಬೇಕೆಂದು ಕೋರಿಕೆ.

ವಿಶ್ವಾಸಗಳೊಂದಿಗೆ,

ರಾಜಾರಾಂ ತಲ್ಲೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.