ADVERTISEMENT

ಲಾಕ್‌ಡೌನ್‌ಗೆ ಯುವ ರೈತನ ಆನ್‌ಲೈನ್‌ ಕೀಲಿ: ತಂತ್ರಜ್ಞಾನಕ್ಕೆ ಮೊರೆ

ಎಂ.ರಾಮಕೃಷ್ಣಪ್ಪ
Published 3 ಏಪ್ರಿಲ್ 2020, 20:15 IST
Last Updated 3 ಏಪ್ರಿಲ್ 2020, 20:15 IST
ಬಟ್ಲಹಳ್ಳಿ ಪ್ರಶಾಂತ್
ಬಟ್ಲಹಳ್ಳಿ ಪ್ರಶಾಂತ್   

ಚಿಂತಾಮಣಿ: ಲಾಕ್‌ಡೌನ್‌ನಿಂದಾಗಿ ಬೆಳೆದ ಬೆಳೆ ಮಾರಾಟವಾಗದೆ ರೈತರು ಕಂಗಾಲಾಗಿದ್ದಾರೆ. ಆದರೆ, ಯುವ ರೈತ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತಾವೂ ಕಷ್ಟದಿಂದ ಪಾರಾಗಿ, ಇತರರನ್ನೂ ಪಾರು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ತಾಲ್ಲೂಕಿನ ಬಟ್ಲಹಳ್ಳಿ ಪ್ರಶಾಂತ್ ಎಂಜಿನಿಯರ್ ಆಗಿದ್ದು, ಇತ್ತೀಚೆಗೆ ಸಾವಯವ ಕೃಷಿಯತ್ತ ಆಕರ್ಷಿತರಾಗಿದ್ದಾರೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಕೆಲವು ಸ್ನೇಹಿತರ ಸಲಹೆ ಮೇರೆಗೆ ತಲಾ ಒಂದು ಎಕರೆ ಕ್ಯಾರೆಟ್, ಈರುಳ್ಳಿ ಬೆಳೆದಿದ್ದಾರೆ.

ಬೆಳೆ ಕಟಾವಿಗೆ ಬಂದ ಸಮಯದಲ್ಲೇ ಕೋವಿಡ್–19 ಪರಿಣಾಮ ಲಾಕ್‌ಡೌನ್ ಘೋಷಣೆಯಾಯಿತು. ಇದರಿಂದ ವಿಚಲಿತರಾಗದೆ ಸಂಕಷ್ಟದಿಂದ ಪಾರಾಗುವ ಮಾರ್ಗೋಪಾಯ ಕಂಡುಕೊಂಡಿದ್ದಾರೆ. ವಿಜ್ಞಾನಿಗಳಾದ ಡಾ.ಕೆ.ಎಸ್.ವಿನೋದ, ಡಾ.ತನ್ವೀರ್ ಸಲಹೆ ಪಡೆದು ಸಾಮಾಜಿಕ ಜಾಲತಾಣ ಬಳಸಿಕೊಂಡು ತರಕಾರಿ ಮಾರಾಟ ಮಾಡುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ತಮ್ಮೊಂದಿಗೆ ಸಂಕಷ್ಟದಲ್ಲಿದ್ದ ರೈತರನ್ನು ಸೇರಿಸಿಕೊಂಡು ತಂಡ ರಚಿಸಿಕೊಂಡಿದ್ದಾರೆ. ವಾಟ್ಸ್‌ ಆ್ಯಪ್, ಫೇಸ್‌ಬುಕ್, ಯೂಟ್ಯೂಬ್‌ಗಳಲ್ಲಿ ತಮ್ಮ ಬಳಿ ತಾಜಾ ತರಕಾರಿ ದೊರೆಯುವುದಾಗಿ ತಿಳಿಸಿದ್ದಾರೆ. ಇದನ್ನು ಗಮನಿಸಿದ ಗ್ರಾಹಕರು ಕರೆಮಾಡಿ ತರಕಾರಿ ಪೂರೈಕೆಗೆ ಬೇಡಿಕೆ ಸಲ್ಲಿಸಿದ್ದಾರೆ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.

ಇದೀಗ ತಮ್ಮ ತೋಟದ ತರಕಾರಿಯ ಜತೆಗೆ ಇತರೆ ರೈತರ 10ಕ್ಕೂ ಹೆಚ್ಚು ವಿಧದ ತರಕಾರಿಗಳನ್ನು ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳ ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿದಿನವೂ ಪ್ರಶಾಂತ್ ಅವರ ಸ್ವಗ್ರಾಮ ಬಟ್ಲಹಳ್ಳಿಯಿಂದ ತರಕಾರಿ ಸಾಗಿಸುವ ವಾಹನ ಬೆಂಗಳೂರಿನ ವಸತಿ ಸಮುಚ್ಚಯಗಳ ಕಡೆಗೆ ಸಾಗುತ್ತಿದೆ.

*
ಶ್ರಮದ ಜತೆಗೆ ಜ್ಞಾನವೂ ಬೆರೆತಾಗ ಲಾಭ ಪಡೆಯಬಹುದು. ದಲ್ಲಾಳಿಗಳ ಹಾವಳಿ ಇಲ್ಲದೆ ಗ್ರಾಹಕರಿಗೆ ನೇರವಾಗಿ ತಾಜಾ ತರಕಾರಿ ತಲುಪಿಸಲಾಗುತ್ತಿದೆ.
-ಬಟ್ಲಹಳ್ಳಿ ಪ್ರಶಾಂತ್, ಯುವ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.