ADVERTISEMENT

ತಜ್ಞರ ವರದಿ ಸರ್ಕಾರದ ನಿರ್ಣಯವಲ್ಲ; ಆನ್‌ಲೈನ್ ಶಿಕ್ಷಣದ ಬಗ್ಗೆ ನಿರ್ಧಾರ ಇಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜುಲೈ 2020, 1:37 IST
Last Updated 8 ಜುಲೈ 2020, 1:37 IST
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌    

ಬೆಂಗಳೂರು: ಕೋವಿಡ್‌ ನಡುವೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ಪೂರೈಸಿರುವ ಸರ್ಕಾರದ ಮುಂದೆ ಆನ್‌ಲೈನ್‌ ತರಗತಿ ಹಾಗೂ ಶಾಲಾ ಆರಂಭದ ಸವಾಲುಗಳು ಉಳಿದಿವೆ. ಆ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರೂ, ತಪ್ಪು ಮಾಹಿತಿ ಹರಡುತ್ತಿರುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದ್ದಾರೆ.

'ಆನ್‌ಲೈನ್‌ ತರಗತಿಗಳನ್ನು ನಡೆಸುವುದರ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ಮುಗಿದಿದ್ದು, ತೀರ್ಪು ಬರಬೇಕಿದೆ. ಈ ನಡುವೆ ಆನ್‌ಲೈನ್‌ ತರಗತಿ ನಡೆಸುವ ಕುರಿತು ಸರ್ಕಾರ ಯಾವುದೇ ನಿರ್ಧಾರ ಘೋಷಿಸಿಲ್ಲ ಹಾಗೂ ತಜ್ಞರ ಸಮಿತಿ ನೀಡಿರುವ ವರದಿಯು ಸರ್ಕಾರದ ನಿರ್ಧಾರವಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಶಾಲೆಗಳನ್ನು ಸದ್ಯಕ್ಕೆ ಪ್ರಾರಂಭ ಮಾಡುವ ನಿರ್ಧಾರ ನಮ್ಮ ಸರ್ಕಾರ ಕೈಗೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಆ ಯೋಚನೆಯೇ ಸರ್ಕಾರದ ಮುಂದಿಲ್ಲ ಎಂಬುದನ್ನು ಪದೇ ಪದೇ ಹೇಳಿದ್ದರೂ ಈ ಸುಳ್ಳು ಮಾಹಿತಿಯೇಕೆ?' ಎಂದು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

ADVERTISEMENT

ಸುದ್ದಿ ಚಾನೆಲ್‌ವೊಂದು ತನ್ನ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿ ತೇಜೋವಧೆ ಮಾಡುವ ಪ್ರಯತ್ನ‌ ಮಾಡಿರುವುದು ನನಗೆ ವೇದನೆ ತಂದಿದೆ. ಅನಗತ್ಯವಾಗಿ ಜನರಲ್ಲಿ ಗೊಂದಲ ನಿರ್ಮಿಸಿ ನನ್ನ ಮೇಲೆ ಸಂಪೂರ್ಣ ಅಪಾರ್ಥ ಬರುವಂತೆ ಮಾಡಿರುವುದು, ನನಗೆ ಫೋನ್ ಕರೆಗಳ ಘೇರಾವ್ ಮಾಡಿ ಎಂದು ವೀಕ್ಷಕರಿಗೆ ಪ್ರಚೋದನೆ ನೀಡಿರುವುದು ಸರಿಯಲ್ಲ ಎಂದೂ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.