ಮೈಸೂರು: ‘ಮೈಸೂರು ಜಿಲ್ಲೆಯನ್ನು ವಿಭಜಿಸಿ ಹುಣಸೂರು ತಾಲ್ಲೂಕನ್ನು ಪ್ರತ್ಯೇಕ ಜಿಲ್ಲೆಯಾಗಿ ರಚಿಸುವ ಅಗತ್ಯವಿಲ್ಲ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು.
ತಿ.ನರಸೀಪುರದಲ್ಲಿ ಸೋಮವಾರ ನಡೆದ ಬಿ.ಆರ್.ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘30 ಕಿಲೋಮೀಟರಿಗೆ ಒಂದು ಜಿಲ್ಲೆ ರಚಿಸಲು ಸಾಧ್ಯವೇ? ಮೈಸೂರಿನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಹುಣಸೂರಿದೆ. ರಾಜಕೀಯ ಉದ್ದೇಶದಿಂದ ಕೆಲವು ನಾಯಕರು ಜಿಲ್ಲೆ ರೂಪಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಸರ್ಕಾರ ಸ್ಪಂದಿಸಕೂಡದು’ ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗ ಆರು ತಾಲ್ಲೂಕುಗಳಿವೆ. ಮೂರು ತಾಲ್ಲೂಕುಗಳಿಗೆ ಒಂದು ಜಿಲ್ಲೆ ರಚಿಸಲು ಸಾಧ್ಯವೇ? ಇದು ಒಳ್ಳೆಯ ಬೆಳವಣಿಗೆಯೂ ಅಲ್ಲ, ವೈಜ್ಞಾನಿಕವೂ ಅಲ್ಲ ಎಂದರು.
ಕುಟುಕಿದ ಶ್ರೀನಿವಾಸ ಪ್ರಸಾದ್:ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, ‘ದಲಿತರ ಪಾಲಿಗೆ ಅಂಬೇಡ್ಕರ್ ನಾಯಕ. ಆದರೆ, ದಲಿತರನ್ನು ಒಡೆದು ಆಳುವವರು ತುಂಬಾ ಜನ ಇದ್ದಾರೆ. ನಾವು ಎಚ್ಚರಿಕೆಯಿಂದ ಇರಬೇಕು’ ಎಂದು ಸಿದ್ದರಾಮಯ್ಯ ಸಮ್ಮುಖದಲ್ಲೇ ಕುಟುಕಿದರು. ಈ ವೇಳೆ ಸಿದ್ದರಾಮಯ್ಯ ನಿದ್ರೆಗೆ ಜಾರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.