ಬೆಂಗಳೂರು: ದ್ವಿತೀಯ ಪಿಯು ಪಿಸಿಎಂಬಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ವಿಷಯದಲ್ಲಿ ತಲೆದೋರಿದ್ದ ಬಿಕ್ಕಟ್ಟು ಮಂಗಳವಾರ ಬಗೆಹರಿದಿದೆ. ನಗರದ ಸುತ್ತಮುತ್ತಲಿನ 12 ಜಿಲ್ಲೆಗಳಿಂದ ಉಪನ್ಯಾಸಕರನ್ನು ಕರೆಸಿ ಮೌಲ್ಯಮಾಪನ ಮಾಡಿಸಲು ಸಮ್ಮತಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು, ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಚರ್ಚಿಸಿ ಈ ನಿರ್ಧಾರಕ್ಕೆ ಬಂದರು.
‘ಮುಂದಿನ 3-4 ದಿನಗಳಲ್ಲಿ ಬೆಂಗಳೂರು ನೆರೆಹೊರೆಯ 12 ಜಿಲ್ಲೆಗಳ ವಿಜ್ಞಾನ ವಿಷಯಗಳ ಉಪನ್ಯಾಸಕರು ಪಾಲ್ಗೊಳ್ಳಲು ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಜಿಲ್ಲಾ ಉಪನಿರ್ದೇಶಕರ ಕಚೇರಿಯಿಂದ ಕಲ್ಪಿಸಲಾಗುವುದು. ವಸತಿ ವ್ಯವಸ್ಥೆ, ವೈದ್ಯಕೀಯ ತಪಾಸಣೆ ವ್ಯವಸ್ಥೆ ಕಲ್ಪಿಸಲಾಗುವುದು. ತಾಂತ್ರಿಕ ಕಾರಣಕ್ಕೆ ಪಿಸಿಎಂಬಿ ಮೌಲ್ಯಮಾಪಪವನ್ನು ವಿಕೇಂದ್ರೀಕರಣ ಮಾಡಲು ಸಾಧ್ಯವಿಲ್ಲ. ಮೌಲ್ಯಮಾಪನಕ್ಕೆ ಬಾರದವರಿಗೆ ನೋಟಿಸ್ ನೀಡುವುದಿಲ್ಲ, ಶಿಸ್ತಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ಅವರು ಭರವಸೆ ನೀಡಿದ ಮೇರೆಗೆ ಮೌಲ್ಯಮಾಪನ ಕಾರ್ಯ ಮುಂದುವರಿಸಲು ಪ್ರಾಂಶುಪಾಲರ ಸಂಘದ ಜತೆಗೆ ಸಮ್ಮತಿ ಸೂಚಿಸಿದ್ದೇವೆ’ ಎಂದು ಸಭೆಯ ಬಳಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ, ಎಸ್.ಎಲ್.ಭೋಜೇಗೌಡ, ಎಸ್.ವಿ.ಸಂಕನೂರ, ಸಂಘಗಳ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.