ADVERTISEMENT

ಇಂದಿನಿಂದ 4 ದಿನ ರಾಜ್ಯದಲ್ಲಿ ಹೆಚ್ಚು ಮಳೆ: ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 2:45 IST
Last Updated 4 ಜುಲೈ 2020, 2:45 IST
ಮಳೆಯ ನಡುವೆಯೇ ಸಾಗಿದ ವಾಹನ ಪ್ರಯಾಣಿಕರು . ಕಲಬುರಗಿಯಲ್ಲಿ ಕಂಡ ದೃಶ್ಯ | ಚಿತ್ರ: ಪ್ರಶಾಂತ್‌ ಎಚ್‌.ಜಿ
ಮಳೆಯ ನಡುವೆಯೇ ಸಾಗಿದ ವಾಹನ ಪ್ರಯಾಣಿಕರು . ಕಲಬುರಗಿಯಲ್ಲಿ ಕಂಡ ದೃಶ್ಯ | ಚಿತ್ರ: ಪ್ರಶಾಂತ್‌ ಎಚ್‌.ಜಿ    

ಬೆಂಗಳೂರು: 'ರಾಜ್ಯದಲ್ಲಿ ಮುಂಗಾರು ಬಿರುಸುಗೊಂಡಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಜು.4ರಿಂದ 7ರ ವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ' ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.

'ಕರಾವಳಿ ಜಿಲ್ಲೆಗಳಲ್ಲಿಒಂದು ವಾರದಿಂದ ಭಾರಿ ಮಳೆಯಾಗಿದೆ. ಶನಿವಾರವೂ ಈ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಕರಾವಳಿಯಲ್ಲಿ ವೇಗವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯಬಾರದು' ಎಂದು ಎಚ್ಚರಿಸಿದ್ದಾರೆ.

'ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರ್ಗಿ, ರಾಯಚೂರು, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ನಾಲ್ಕು ದಿನಗಳವರೆಗೆ ಹಗುರದಿಂದ ಸಾಧಾರಣವಾಗಿ ಮಳೆಯಾಗುವ ಸಾಧ್ಯತೆ ಇದೆ' ಎಂದವರು ತಿಳಿಸಿದರು.

ADVERTISEMENT

ಎಲ್ಲೆಲ್ಲಿ ಎಷ್ಟು ಮಳೆ? : ಹೊನ್ನಾವರದಲ್ಲಿ ಶುಕ್ರವಾರ 17 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಮಂಗಳೂರು, ಮೂಡುಬಿದರೆ16, ಅಂಕೋಲಾ 13, ಕಾರ್ಕಳ, ಚಿಂಚೋಳಿ 12, ಭಟ್ಕಳ 11, ಉಪ್ಪಿನಂಗಡಿ, ಗೋಕರ್ಣ, ಕಾರವಾರ, ಕುಮಟಾ 10, ಸುಬ್ರಹ್ಮಣ್ಯ, ಕದ್ರಾ 9, ಪುತ್ತೂರು 8, ಸುಳ್ಯ, ಧರ್ಮಸ್ಥಳ, ಭಾಗಮಂಡಲ 7, ಕೋಟ 6, ಕುಂದಾಪುರ, ಹೊಸನಗರ, ಶೃಂಗೇರಿ, ತೀರ್ಥಹಳ್ಳಿ 5, ಸಕಲೇಶಪುರ 4, ಮಡಿಕೇರಿ, ಮೊಳಕಾಲ್ಮೂರು, ಸೊರಬ, ಚಿಂತಾಮಣಿ, ತರೀಕೆರೆ, ಸೋಮವಾರಪೇಟೆ, ಹೊಸಪೇಟೆ 3, ಬೆಳಗಾವಿ, ಗೌರಿಬಿದನೂರು ಹಾಗೂ ಕುಶಾಲನಗರದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.