ADVERTISEMENT

ಕೊಹಿನೂರ್‌ ಕರಬೂಜ ಸಾಗಣೆಯಾಗದೆ ಸಂಕಷ್ಟ

ಡಿ.ಶ್ರೀನಿವಾಸ
Published 2 ಮೇ 2020, 21:25 IST
Last Updated 2 ಮೇ 2020, 21:25 IST
ಜಗಳೂರು ತಾಲ್ಲೂಕಿನ ಹಾಲೇಹಳ್ಳಿಯಲ್ಲಿ ತೈವಾನ್ ಕರಬೂಜ ಬೆಳೆದಿರುವ ರೈತ ಅಮರೇಂದ್ರಪ್ಪ
ಜಗಳೂರು ತಾಲ್ಲೂಕಿನ ಹಾಲೇಹಳ್ಳಿಯಲ್ಲಿ ತೈವಾನ್ ಕರಬೂಜ ಬೆಳೆದಿರುವ ರೈತ ಅಮರೇಂದ್ರಪ್ಪ   

ಜಗಳೂರು: ತಾಲ್ಲೂಕಿನ ಹಾಲೇಹಳ್ಳಿ, ಹುಚ್ಚವ್ವನಹಳ್ಳಿ, ಕೊರಚರಹಟ್ಟಿ ಆಸುಪಾಸಿನ ರೈತರು ತೈವಾನ್ ಕೊಹಿನೂರ್ ತಳಿಯ ಕರಬೂಜ ಬೆಳೆದಿದ್ದು, ದೆಹಲಿ, ಮುಂಬೈ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನ ಹಾಲೇಹಳ್ಳಿ ಗ್ರಾಮದ ಅಮರೇಂದ್ರಪ್ಪ ಎರಡೂವರೆ ಎಕರೆಯಲ್ಲಿ ಹಾಗೂ ಕೇಶವರೆಡ್ಡಿ ಮೂರೂವರೆ ಎಕರೆಯಲ್ಲಿ ಈ ತಳಿಯ ಕರಬೂಜ ಬೆಳೆದಿದ್ದಾರೆ.

ಪೌಜಾ ಮತ್ತು ಸನ್ ರೈಸ್ ತಳಿಯ ಕರಬೂಜ ಬೀಜಕ್ಕೆ ಪ್ರತಿ ಕೆ.ಜಿಗೆ ಕೇವಲ ₹ 5 ಸಾವಿರದಿಂದ ₹ 6 ಸಾವಿರ ದರವಿದೆ. ಆದರೆ ತೈವಾನ್ ಕೊಹಿನೂರ್ ತಳಿಯ ಬೀಜಕ್ಕೇ ಪ್ರತಿ ಕೆ.ಜಿಗೆ ₹ 80 ಸಾವಿರ ದರ ಇದೆ.

ADVERTISEMENT

‘ಸುಮಾರು ಮೂರು ಲಕ್ಷ ವೆಚ್ಚವಾಗಿದೆ. 40 ಟನ್ ಇಳುವರಿ ನಿರೀಕ್ಷೆ ಇದ್ದು, ಮುಂಬೈ ಮಾರುಕಟ್ಟೆಯಲ್ಲಿ ಕನಿಷ್ಠ ₹ 12 ಲಕ್ಷ ಆದಾಯದ ನಿರೀಕ್ಷೆ ಇತ್ತು’ ಎಂದು ಅಮರೇಂದ್ರಪ್ಪ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಐದು ಎಕೆರೆಯಲ್ಲಿ ಬೆಳೆದಿದ್ದ ತೈವಾನ್ ಪಪ್ಪಾಯಿ ಖರೀದಿಸುವವರಿಲ್ಲದೇ ತಿಂಗಳ ಹಿಂದಷ್ಟೇ ಲಕ್ಷಗಟ್ಟಲೆ ನಷ್ಟವಾಗಿದೆ. ಡಿಡಿಸಿಸಿ ಬ್ಯಾಂಕ್‌ನಲ್ಲಿ ₹ 6 ಲಕ್ಷ ಸಾಲ ಮಾಡಿ ಕರಬೂಜ ಹಾಗೂ ಪಪ್ಪಾಯಿ ಬೆಳೆದಿದ್ದೆ’ ಎಂದು ಹೇಳಿದರು.

‘ಮುಂಬೈಗೆ ಲಾರಿಯಲ್ಲಿ ಸಾಗಿಸಲು ಪಾಸ್‌ ನೀಡುವ ಕುರಿತು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಖಚಿತವಾಗಿ ಹೇಳುತ್ತಿಲ್ಲ’ ಎಂದು ಕರಬೂಜ ಬೆಳೆಗಾರ ಕೇಶವರೆಡ್ಡಿ ಹೇಳಿದರು.

**

ಅಮರೇಂದ್ರಪ್ಪ ಅವರ ಹೊಲಕ್ಕೆ ಭೇಟಿ ನೀಡಿದ್ದೇನೆ. ಬೆಳೆಯನ್ನು ಮುಂಬೈಗೆ ಸಾಗಿಸಲು ಜಿಲ್ಲಾಡಳಿತದಿಂದ ಪಾಸ್ ನೀಡಲಾಗುವುದು.
-ವೆಂಕಟೇಶ್, ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.