ADVERTISEMENT

ಕ್ಷೀಣಿಸುತ್ತಿದೆ ಸಮುದ್ರ ತೀರ: ಪಶ್ಚಿಮ ಕರಾವಳಿ ಮೇಲೆ ಪರಿಣಾಮ -ಅಲ್ವಾರಿಸ್‌

ತಾಪಮಾನ ಏರಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 23:10 IST
Last Updated 20 ಫೆಬ್ರುವರಿ 2020, 23:10 IST
ಡಾ. ಕ್ಲಾಡೊ ಅಲ್ವಾರಿಸ್‌
ಡಾ. ಕ್ಲಾಡೊ ಅಲ್ವಾರಿಸ್‌   

ಬೆಂಗಳೂರು: ‘ತಾಪಮಾನ ಏರಿಕೆಯಿಂದ ಸಮುದ್ರಮಟ್ಟವೂ ಏರುತ್ತಿದ್ದು, ತೀರ ಪ್ರದೇಶಗಳು ಜಲಾವೃತವಾಗುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಪಶ್ಚಿಮ ಕರಾವಳಿಯ ಶೇ 50ರಷ್ಟು ಭೂಪ್ರದೇಶ ಜಲಾವೃತವಾಗಲಿದೆ’ ಎಂದು ಗೋವಾದ ಪರಿಸರವಾದಿ ಡಾ. ಕ್ಲಾಡೊ ಅಲ್ವಾರಿಸ್‌ ಕಳವಳ ವ್ಯಕ್ತಪಡಿಸಿದರು.

ನಗರದ ಸೇಂಟ್‌ ಜೋಸೆಫ್‌ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ‘ಪಶ್ಚಿಮ ಘಟ್ಟ ಮತ್ತು ನೀರು’ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು, ‘ಹಲವು ತೀರಗಳ ವಿಸ್ತಾರ ಕಡಿಮೆ ಯಾಗುತ್ತಿದ್ದು, ಸಮುದ್ರ ನೀರು ಈ ಪ್ರದೇಶ ವ್ಯಾಪಿಸುತ್ತಿದೆ’ ಎಂದರು.

‘1960ರಿಂದ 1980ರ ಅವಧಿಯಲ್ಲಿ ಪಶ್ಚಿಮ ಘಟ್ಟದಲ್ಲಿದ್ದಂತಹ ಹವಾಮಾನವೇ ಬೆಂಗಳೂರಿನಲ್ಲಿಯೂ ಇರುತ್ತಿತ್ತು. ಪಶ್ಚಿಮ ಘಟ್ಟದ ವಾತಾವರಣ ಹಾಗೆಯೇ ಇದೆ. ಆದರೆ, ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಾಗುತ್ತಿದೆ. 2018 ಮತ್ತು 2019ರಲ್ಲಿ ರಾಜ್ಯ ಪ್ರವಾಹ ಪರಿಸ್ಥಿತಿಗೆ ತುತ್ತಾಗಿದೆ. ಈ ವರ್ಷವೂ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ’ ಎಂದರು.

ADVERTISEMENT

ಬೆಂಗಳೂರಿನಲ್ಲಿ ಪರಿಸರ ರಕ್ಷಿಸುವ ಕೆಲಸ ಆಗಬೇಕಾಗಿದೆ. ಪದವಿ, ಪಡೆಯುವ ಆಚೆಗೂ, ಈ ಕೆಲಸಕ್ಕೆ ಯುವಜನರು ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

‘ಕೇರಳದಲ್ಲಿ ಮಿತಿಮೀರಿ ಗ್ರಾನೈಟ್‌ ಗಣಿಗಾರಿಕೆ ನಡೆಯುತ್ತಿದೆ. ಮೊದಲು ದೇಗುಲಗಳು, ಸಮಾಧಿ ನಿರ್ಮಾಣ ಉದ್ದೇಶಕ್ಕೆ ಮಾತ್ರ ಗ್ರಾನೈಟ್‌ ಬಳಸಲಾಗುತ್ತಿತ್ತು. ಈಗ ಎಲ್ಲದಕ್ಕೂ ಗ್ರಾನೈಟ್‌ ಬಳಸಲಾಗುತ್ತಿದೆ. ಇದರಿಂದ ಪರಿಸರಕ್ಕೆ ಹೆಚ್ಚು ಹಾನಿಯಾಗುತ್ತಿದೆ’ ಎಂದರು.

ಬನ್ನೇರುಘಟ್ಟ ಉಪಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್, ‘ಅರಣ್ಯಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಝಡ್‌) ಯಾವುದೆಂದು ನಿರ್ಧರಿಸುವಲ್ಲಿ ಅರಣ್ಯ ಅಧಿಕಾರಿಗಳ ಪಾತ್ರ ತುಂಬಾ ಕಡಿಮೆ. ಬನ್ನೇರುಘಟ್ಟ ಅರಣ್ಯಪ್ರದೇಶದಲ್ಲಿ ಇಎಸ್‌ಝಡ್‌ ಪ್ರದೇಶ ಕಡಿಮೆ ಮಾಡಿರುವುದು ರಾಜ್ಯ ಸರ್ಕಾರದ ನಿರ್ಧಾರ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.