ADVERTISEMENT

ವಿಶೇಷ ಸಂದರ್ಶನ | ಜೆಡಿಎಸ್‌ ಬಗೆಗಿನ ನಿಲುವು ಬದಲು: ಬಿ.ಎಸ್‌.ಯಡಿಯೂರಪ್ಪ

ಸರ್ಕಾರಕ್ಕೆ ನೂರು ದಿನ: ಮಾದರಿ ಕರ್ನಾಟಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಂಕಲ್ಪ

ವೈ.ಗ.ಜಗದೀಶ್‌
Published 3 ನವೆಂಬರ್ 2019, 1:10 IST
Last Updated 3 ನವೆಂಬರ್ 2019, 1:10 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ‘ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೇವೇಗೌಡರು, ಕುಮಾರಸ್ವಾಮಿ ಅವರ ಬಗೆಗಿನ ನನ್ನ ನಿಲುವು ಬದಲಾಗಿದೆ. ಅಪ್ಪ–ಮಕ್ಕಳು ಅವರ ಪಾಡಿಗೆ ತಮ್ಮ ಪಕ್ಷ ಕಟ್ಟುವುದರಲ್ಲಿ ತೊಡಗಿಕೊಂಡಿದ್ದಾರೆ. ಅವರ ವಿರುದ್ಧ ಹೋರಾಟ ಈಗ ಮುಗಿದ ಅಧ್ಯಾಯ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಸರ್ಕಾರಕ್ಕೆ ನೂರು ದಿನ ತುಂಬಿದ ಹೊತ್ತಿನಲ್ಲಿ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹೀಗೆ ಪ್ರತಿಪಾದಿಸಿದರು.

‘ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಮುಖ್ಯಮಂತ್ರಿ ಹುದ್ದೆ ತ್ಯಜಿಸುವ ಹೊತ್ತಿನಲ್ಲಿ ದೇವೇಗೌಡರು, ಕುಮಾರಸ್ವಾಮಿ ವಿರುದ್ದ ನನ್ನ ಮುಂದಿನ ಹೋರಾಟ, ಸಿದ್ದರಾಮಯ್ಯನವರೇ ನೀವು ಅವರ ಜತೆ ಕೈಜೋಡಿಸಿ ಹಾಳಾಗುತ್ತೀರಿ ಎಂದು ಹೇಳಿದವರು ಈಗ ಮೃದುಧೋರಣೆ ತಾಳಿದ್ದೇಕೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗ ಪರಿಸ್ಥಿತಿ ಬದಲಾಗಿದೆ’ ಎಂದರು.

ADVERTISEMENT

‘ಚುನಾವಣೆಯಲ್ಲಿ ಅನರ್ಹ ಶಾಸಕರು ಸೋತರೆ ಜೆಡಿಎಸ್‌ ಜತೆ ಕೈಜೋಡಿಸುತ್ತೀರಾ’ ಎಂಬ ಪ್ರಶ್ನೆಗೆ, ‘ಅಂತಹ ಸನ್ನಿವೇಶವೇ ಬರುವುದಿಲ್ಲ. ನನಗೂ ಅವರಿಗೂ ಬೇರೆ ಸಂಬಂಧ ಇದೆ. ಈಗ ನನ್ನ ಮುಂದಿರುವ ಗುರಿ ಎಂದರೆ ಸರ್ಕಾರದ ಬಗ್ಗೆ ಹುಚ್ಚುಹುಚ್ಚಾಗಿ ಟೀಕೆ ಮಾಡುತ್ತಿರುವ ಸಿದ್ದರಾಮಯ್ಯಗೆ ಪ್ರತ್ಯುತ್ತರ ನೀಡುವುದಷ್ಟೆ’ ಎಂದು ಹೇಳಿದರು.

*ಜನವರಿ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರಲ್ಲ ಎಂಬ ಮಾತಿದೆಯಲ್ಲ?
ಅದರಲ್ಲಿ ಸತ್ಯಾಂಶ ಇಲ್ಲ. ಅತ್ಯಂತ ವಿಶ್ವಾಸದಿಂದ ಹೇಳುತ್ತೇನೆ. ಡಿಸೆಂಬರ್ 5ರ ಉಪಚುನಾವಣೆ ನಮ್ಮ ಮುಂದಿರುವ ದೊಡ್ಡ ಸವಾಲು.ನೂರಕ್ಕೆ ನೂರು 10–13 ಸೀಟುಗಳಲ್ಲಿ ಗೆಲ್ಲುತ್ತೇವೆ. ಅದಾದ ಬಳಿಕ ಕೇಂದ್ರದಿಂದಾಗಲಿ, ಯಾರಿಂದಾಗಲೀ ಯಾವುದೇ ಅಡಚಣೆ ಇರುವುದಿಲ್ಲ. ಮೂರೂವರೆ ವರ್ಷ ಅತ್ಯುತ್ತಮವಾಗಿ ಕೆಲಸ ಮಾಡುತ್ತೇವೆ. ನೀವು ನೋಡುತ್ತಾ ಇರಿ.

*ಬಿ.ಎಲ್. ಸಂತೋಷ್‌ ಅವರು ಆಡಳಿತದ ಮೇಲೆ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಟೀಕೆ ಇದೆಯಲ್ಲ?
ಎಲ್ಲವೂ ಸುಳ್ಳು. ಸಂತೋಷ್‌ಜಿ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತಿದ್ದಾರೆ. ಪ್ರಮುಖರ ಸಮಿತಿ ಸಭೆಯಲ್ಲಿ ಕುಳಿತು ಸರ್ಕಾರದ ಕಡೆಯಿಂದ ಏನಾಗಬೇಕು, ಪಕ್ಷದ ಕಡೆಯಿಂದ ಏನಾಗಬೇಕು ಎಂದು ಪರಸ್ಪರ ಚರ್ಚೆ ಮಾಡಿಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಒಡಕೂ ಇಲ್ಲ. ಕೆಲವರು ತಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಸುಮ್ಮನೆ ಸುದ್ದಿ ಮಾಡಿಸುತ್ತಿದ್ದಾರೆ.

*ಮೂವರು ಡಿಸಿಎಂ ನೇಮಕ ನಿಮಗೆ ಗೊತ್ತೇ ಇರಲಿಲ್ಲವಂತೆ?
ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ಕೆಲವು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈಗ ಮೂವರು ಡಿಸಿಎಂಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ.

*ಕಟೀಲ್‌ ನೇಮಕಕ್ಕೂ ಮುನ್ನ ನಿಮ್ಮೊಂದಿಗೆ ಚರ್ಚಿಸಿದ್ದರಾ?
ನನಗೆ ಗೊತ್ತಿತ್ತು. ನಾನು ಎಲ್ಲ ಬಹಿರಂಗವಾಗಿ ಹೇಳಲಿಕ್ಕೆ ಆಗುವುದಿಲ್ಲ.

*ಮುಂದಿನ ಗುರಿ?
ರಾಜ್ಯದ ಸಮಗ್ರ ಅಭಿವೃದ್ಧಿ. ನೀರಾವರಿ ಸೌಲಭ್ಯ ಒದಗಿಸಿದರೆ ರೈತರ ಜೀವನ ಹಸನಾಗಿ ಉತ್ತಮ ಬೆಳೆ ತೆಗೆಯುತ್ತಾನೆ. ಆತ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಅದನ್ನು ಮಾಡುವುದು ನನ್ನ ಮೊದಲ ಆದ್ಯತೆ. ಮುಂದಿನ ಬಜೆಟ್‌ನಲ್ಲಿ ನೀರಾವರಿಗೆ ಸಾಕಷ್ಟು ಹಣ ಕೊಡುತ್ತೇನೆ. ಕೈಗಾರಿಕೆ, ಬೆಂಗಳೂರು ಅಭಿವೃದ್ಧಿ, ವಸತಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಿ ಮಾದರಿ ಕರ್ನಾಟಕ ನಿರ್ಮಾಣ ನನ್ನ ಸಂಕಲ್ಪ.

*ನಿಮ್ಮ ಮಗ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಆಕ್ಷೇಪ ಇದೆಯಲ್ಲ?
ಯಾವಾಗ? ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಕೊಡಿ. ಅದೆಲ್ಲ ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಅಪಪ್ರಚಾರ. ನಾನು ಮುಖ್ಯಮಂತ್ರಿಯಾದಾಗಿನಿಂದ ನನ್ನ ಮನೆಯಲ್ಲಿ ಯಾರೊಬ್ಬರೂ ಅಧಿಕಾರದಲ್ಲಿ ತಲೆ ಹಾಕುತ್ತಿಲ್ಲ. ಬಂಧು ಬಳಗ ಕೂಡ ನನ್ನ ಮನೆ, ಕಚೇರಿಯಲ್ಲಿ ಇರುವುದಿಲ್ಲ.

*ಮೋದಿ ಅವರು ಭೇಟಿಗೆ ಸಮಯವನ್ನೇ ಕೊಡುತ್ತಿಲ್ಲ ಎಂಬ ಸಿದ್ದರಾಮಯ್ಯ ಟೀಕೆ ಬಗ್ಗೆ?
ಸಿದ್ದರಾಮಯ್ಯನವರನ್ನು ಕೇಳಿ ಮೋದಿ ಅವರನ್ನು ಭೇಟಿ ಮಾಡಬೇಕಾ? ದೇಶವೇ ಅಚ್ಚರಿ ಪಡುವ ರೀತಿಯಲ್ಲಿ, ಯಾವ ಮುಖ್ಯಮಂತ್ರಿಯೂ ಮಾಡದ ರೀತಿಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗಿದ್ದೇನೆ. ಹಾಗಿದ್ದರೂ ಆ ಸಿದ್ದರಾಮಯ್ಯಗೆ ತೃಪ್ತಿಯಿಲ್ಲ. ಸುಳ್ಳು ಹೇಳಿಕೊಂಡು ಓಡಾಡುವುದೇ ಅವರಿಗೆ ಕೆಲಸವಾಗಿದೆ. ಅನುಮಾನ ಇದ್ದರೆ ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿ ಕೇಳಿಕೊಳ್ಳಲಿ. ಹಗಲು–ರಾತ್ರಿಯೆನ್ನದೇ ಜನರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದರೂ ಸಿದ್ದರಾಮಯ್ಯ ತಪ್ಪು ಅಂಕಿ ಅಂಶ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅದನ್ನು ಮೊದಲು ನಿಲ್ಲಿಸಲಿ.

‘ಇನ್ಯಾರಿಗೂ ಡಿಸಿಎಂ ಪಟ್ಟ ಇಲ್ಲ’‍
‘ನನ್ನ ಪ್ರಕಾರ ಇನ್ನು ಯಾರಿಗೂ ಡಿಸಿಎಂ ಹುದ್ದೆ ಕೊಡುವ ಪ್ರಶ್ನೆಯಿಲ್ಲ’ ಎಂದು ಯಡಿಯೂರಪ್ಪ ಹೇಳಿದರು.

‘ಇನ್ನೂ ಇಬ್ಬರಿಗೆ ಡಿಸಿಎಂ ಹುದ್ದೆ ನೀಡಲಾಗುತ್ತದೆ ಎಂಬ ಮಾತಿದೆಯಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಂತಹ ಸನ್ನಿವೇಶ ಬರುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈಗ ಬೆಂಬಲ ಕೊಟ್ಟಿರುವ 17 ಅನರ್ಹರು ಬಿಟ್ಟು ಇನ್ನು ಎಷ್ಟು ಶಾಸಕರು ಬಿಜೆಪಿಗೆ ಬರಲಿದ್ದಾರೆ’ ಎಂಬ ಪ್ರಶ್ನೆಗೆ, ‘ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೇರೆ ಪಕ್ಷದಿಂದ ಬರುವ ಯಾರೊಬ್ಬರೂ ನಮಗೆ ಅಗತ್ಯವೂ ಇಲ್ಲ. ಡಿಸೆಂಬರ್‌ 5ರ ಚುನಾವಣೆ ಬಳಿಕ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತೇವೆ. ನಂತರ ಯಾರ ಬಲವೂ ನಮಗೆ ಬೇಕಾಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.