ADVERTISEMENT

ವನ್ಯಪ್ರಾಣಿಗಳ ಬಾಯಾರಿಕೆ ಇಂಗಿಸಲು ಬತ್ತಿದ ಕೆರೆಗೆ ನೀರು ತುಂಬಿದ ಸಹೃದಯರು

ಮುಂಡಗೋಡ: ಸೇವೆಗೆ ಮುಂದಾದ ರೈತರು

ಶಾಂತೇಶ ಬೆನಕನಕೊಪ್ಪ
Published 21 ಮೇ 2019, 12:39 IST
Last Updated 21 ಮೇ 2019, 12:39 IST
ಮುಂಡಗೋಡ–ಶಿಗ್ಗಾಂವಿ ತಾಲ್ಲೂಕಿನ ಗಡಿಭಾಗದ ಅರಣ್ಯ ವ್ಯಾಪ್ತಿಯ ವಡಗಟ್ಟಾ ಕೆರೆಗೆ ಮಂಗಳವಾರ ಟ್ಯಾಂಕರ್‌ ಮೂಲಕ ನೀರು ತುಂಬಿಸಲಾಯಿತು
ಮುಂಡಗೋಡ–ಶಿಗ್ಗಾಂವಿ ತಾಲ್ಲೂಕಿನ ಗಡಿಭಾಗದ ಅರಣ್ಯ ವ್ಯಾಪ್ತಿಯ ವಡಗಟ್ಟಾ ಕೆರೆಗೆ ಮಂಗಳವಾರ ಟ್ಯಾಂಕರ್‌ ಮೂಲಕ ನೀರು ತುಂಬಿಸಲಾಯಿತು   

ಮುಂಡಗೋಡ (ಉತ್ತರ ಕನ್ನಡ):ಸುತ್ತಲೂ ಗಿಡಮರಗಳು, ಮಧ್ಯದಲ್ಲಿ ಬಿರುಕು ಬಿಟ್ಟು ಬತ್ತಿ ಹೋಗಿರುವ ಕೆರೆ. ದಾಹ ಇಂಗಿಸಿಕೊಳ್ಳಲು ಬತ್ತಿದ ಕೆರೆಯಲ್ಲಿಯೇ ನೆಲ ನೆಕ್ಕುವ ವನ್ಯಪ್ರಾಣಿಗಳು.ಅವುಗಳಬಾಯಾರಿಕೆ ಇಂಗಿಸಲು ಬತ್ತಿದ ಕೆರೆಗೆ ಟ್ಯಾಂಕರ್‌ ಮೂಲಕ ನೀರು ತುಂಬಿಸಿದ ಸಹೃದಯರು...

ಮುಂಡಗೋಡ ಹಾಗೂ ಶಿಗ್ಗಾಂವಿ ಗಡಿಭಾಗದ ಹುಬ್ಬಳ್ಳಿ ರಸ್ತೆಯಲ್ಲಿರುವ ವಡಗಟ್ಟಾ ಕೆರೆಯು ಮಂಗಳವಾರ, ಮಾನವೀಯ ಕಾರ್ಯಕ್ಕೆ ಸಾಕ್ಷಿಯಾಗಿದೆ.

ಅವರು ಯಾರೂ ದೊಡ್ಡ ಉದ್ಯೋಗದಲ್ಲಿಲ್ಲ. ಜಮೀನ್ದಾರರೂ ಅಲ್ಲ. ಅರಣ್ಯ ಸಿಬ್ಬಂದಿಯೂ ಅಲ್ಲ. ಆದರೂ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಕೆರೆಗೆ ಸ್ವಂತ ಹಣದಿಂದ ಟ್ಯಾಂಕರ್‌ ನೀರು ಹಾಕಿಸಿ ವನ್ಯಪ್ರಾಣಿಗಳಿಗೆ ಸಹಾಯ ಮಾಡಿದರು. ರೈತರು ಹಾಗೂ ಕೃಷಿ ಕಾರ್ಮಿಕರ ಈ ಕಾರ್ಯದಿಂದ ಅರಣ್ಯಾಧಿಕಾರಿಯೂಪ್ರೇರಣೆಗೊಂಡರು.ವೈಯಕ್ತಿಕವಾಗಿ ನಾಲ್ಕು ಟ್ಯಾಂಕರ್‌ಗಳನೀರಿಗೆ ಅವರೂ ಹಣ ನೀಡಿದರು!

ADVERTISEMENT

‘ಕೆಲವು ದಿನಗಳಿಂದ ಈ ಕೆರೆ ಬತ್ತಿದೆ. ಆದರೆ, ನೂರಾರು ಸಂಖ್ಯೆಯಲ್ಲಿರುವ ಜಿಂಕೆ, ಮಂಗ, ಅಪರೂಪದ ಮುಳ್ಳುಹಂದಿ ಹಾಗೂ ನೂರಾರುಪಕ್ಷಿಗಳು ನೀರಿಗಾಗಿ ಪರಿತಪಿಸುತ್ತಿವೆ. ವನ್ಯಪ್ರಾಣಿಗಳು ನೀರಿಗೆ ಪರದಾಡುತ್ತಿರುವ ದೃಶ್ಯ ಮನಕಲಕುವಂತಿರುತ್ತದೆ. ಅವುಗಳಿಗೆನೀರಿನ ವ್ಯವಸ್ಥೆ ಮಾಡಲು ನಾಲ್ಕೈದು ಜನರು ನಿರ್ಧರಿಸಿದ್ದೆವು. ಅದರಂತೆ ತೋಟದಲ್ಲಿ ಕೆಲಸ ಮಾಡುವ ಬಸಣ್ಣ, ರೈತ ಸೋಮು ಉಗ್ಗಿನಕೇರಿ ಹಾಗೂ ನಾನು ಸೇರಿ ಟ್ಯಾಂಕರ್‌ ಮೂಲಕ ನೀರು ಹರಿಸಿದೆವು’ಎನ್ನುತ್ತಾರೆ ಯುವ ರೈತ ವಡಗಟ್ಟಾದ ಕೆ.ರಾಜು.

‘ಕೆರೆಗೆ ಎರಡು ದಿನಗಳಲ್ಲಿ ಒಟ್ಟು ಮೂರು ಟ್ಯಾಂಕರ್‌ ನೀರು ತುಂಬಲಾಗಿದೆ. ಸಂಜೆಯ ವೇಳೆಗೆ ಪ್ರಾಣಿ, ಪಕ್ಷಿಗಳು ನೀರು ಕುಡಿಯುವುದನ್ನು ನೋಡುವಾಗ ಮನಸ್ಸಿಗೆ ಆನಂದವಾಗುತ್ತದೆ.ಹಿಂಡು ಹಿಂಡಾಗಿ ವನ್ಯಪ್ರಾಣಿ, ಪಕ್ಷಿಗಳು ನೀರಿಗಾಗಿ ಬರುತ್ತವೆ. ಸದ್ಯ ಕಾಡಿನ ಮಧ್ಯದಲ್ಲಿರುವ ಕೆರೆಕಟ್ಟೆಗಳು ಸಂಪೂರ್ಣವಾಗಿ ಬತ್ತಿವೆ. ವನ್ಯಪ್ರಾಣಿಗಳಿಗೆ ತಕ್ಕಮಟ್ಟಿಗಾದರೂ ನೀರಿನ ವ್ಯವಸ್ಥೆ ಮಾಡಲು ಆಸಕ್ತರು ಮುಂದಾಗಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.