
ಗುಳೇದಗುಡ್ಡ: ದೇಶ ಕಟ್ಟಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ದೇಶದಲ್ಲಿ ಸಾಮರಸ್ಯ ಮೂಢಿಸಿದ ಮಹಾತ್ಮ ಗಾಂಧಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ರಾಜ್ಯ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ಪಟ್ಟಣದ ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ, ಗಾಂಧಿ ವಿವೇಕಾನಂದ ಅಧ್ಯಯನ ಕೇಂದ್ರ ಮತ್ತು ರಾಷ್ಟ್ರಪಿತ ಮಹಾತ್ಮಗಾಂಧಿ ಫೌಂಡೇಶನ್ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜರುಗಿದ ಗಾಂಧಿ ಸ್ಮೃತಿ ಕುರಿತ ಒಂದು ದಿನದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗಾಂಧಿ ಮತ್ತು ನೇತಾಜಿಯವರು ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ್ದಾರೆ ಎಂದರು.
ಉಪನ್ಯಾಸಕ ಆರ್.ಎಸ್. ಹಿರೇಮಠ ಗಾಂಧಿ ಸ್ಮೃತಿ ಮತ್ತು ನೇತಾಜಿ ಕುರಿತು ಉಪನ್ಯಾಸ ನೀಡಿ ಮಾತನಾಡಿ ಗಾಂಧಿ ಕುರಿತು ಈಚೆಗೆ ಇಲ್ಲಸಲ್ಲದ ವಿಚಾರಗಳಿಗೆ ಮಾತನಾಡಲಾಗುತ್ತಿದೆ. ಇದು ಖಂಡನೀಯ. ಇಂದಿನ ಸಮಾಜಕ್ಕೆ ಯುವಕರು ಧೃತಿಗೆಡದೇ ಗಾಂಧಿಜಿಯವರ ವಿಚಾರಗಳನ್ನ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ವಿಚಾರಗಳನ್ನು ಅವರಲ್ಲಿದ್ದ ಆಪ್ತತೆ ಅರಿತುಕೊಳ್ಳಬೇಕು ಎಂದರು.
ಪಿ.ಇ.ಟ್ರಸ್ಟ್ನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಗಾಂಧಿಜಿಯವರ ಹಾಗೂ ಅಂದಿನ ಕಾಲಘಟ್ಟದ ಹಲವಾರು ಮಹಾನ್ ನಾಯಕರ ಹೆಸರುಗಳನ್ನ ಹೇಳುತ್ತಾ ತಮ್ಮ ತಂದೆಯವರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದ ವಿಚಾರಗಳನ್ನು ಹಾಗೂ ಗಾಂಧೀಜಿಯವರನ್ನ ಮತ್ತು ನೇತಾಜಿಯವರನ್ನ ಪ್ರತ್ಯಕ್ಷ ಕಂಡಿರುವ ವಿಚಾರಗಳನ್ನ ತಂದೆಯವರಿಂದ ತಿಳಿದ ವಿಷಯಗಳನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಗಾಂಧಿಯವರಿಗೆ ಸಂಬಂಧಿಸಿದ ಭಾವಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು. ಪಿಇಟಿ ನಿರ್ದೇಶಕರಾದ ರಾಮೇಶ್ವರ ರಾಠಿ, ವಿಠ್ಠಲ ಕಾವಡೆ, ಜಗದೀಶ್ ಸೋನಿ, ಶಿವಾನಂದ ನಾಯನೆಗಲಿ, ಸಿದ್ದರಾಮಯ್ಯ ಪುರಾಣಿಕಮಠ,ಪ್ರೊ.ಸಿದ್ದಲಿಂಗಪ್ಪ ಬರಗುಂಡಿ,ಪ್ರಾಚಾರ್ಯ ಪ್ರೊ.ಎನ್.ವಾಯ್.ಬಡಣ್ಣವರ ಹಾಗೂ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.